ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯನಗರದ ಉದ್ಯಾನವನಗಳಲ್ಲಿ ಅಕ್ರಮಗಳ ಕಟ್ಟಡಗಳ ನಿರ್ಮಾಣ, ಅನಧಿಕೃತ ವಾಹನ ನಿಲುಗಡೆಯಿಂದ ಮೂಲ ಸ್ವರೂಪವನ್ನೇ ಕಳೆದುಕೊಳ್ಳಲಾರಂಭಿಸಿವೆ. ಉದ್ಯಾನವನಗಳನ್ನು ಸಂರಕ್ಷಿಸುವಲ್ಲಿ, ಸೂಕ್ತ ಭದ್ರತೆ ಒದಗಿಸುವಲ್ಲಿ ನಗರಸಭೆ ವಿಫಲವಾಗಿದೆ ಎಂಬ ಬಗ್ಗೆ ಸಾರ್ವಜನಿಕವಾಗಿ ಆರೋಪಗಳು ಕೇಳಿಬರುತ್ತಿವೆ.ಮೊನ್ನೆಯಷ್ಟೇ ಕುವೆಂಪುನಗರದ ಉದ್ಯಾನವನದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರೆ, ಇದೀಗ ನಗರದ ಹೃದಯ ಭಾಗದಲ್ಲಿರುವ ಮಹಾತ್ಮಗಾಂಧಿ ಉದ್ಯಾನವನ ವಾಹನಗಳ ಪಾರ್ಕಿಂಗ್ ಸ್ಥಳವಾಗಿ ರೂಪಾಂತರಗೊಂಡಿದೆ. ಉದ್ಯಾನದ ತಂತಿಬೇಲಿಯನ್ನು ಕಿತ್ತುಹಾಕಿ ಹಲವು ವಾಹನಗಳನ್ನು ಉದ್ಯಾನದ ಮರದ ನೆರಳಿನಲ್ಲಿ ನಿಲ್ಲಿಸಿರುವ ಫೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ಉದ್ಯಾನವನವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲಾಗದಿರುವ ಬಗ್ಗೆ ನಗರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳ ವಿರುದ್ಧವೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ..ಉದ್ಯಾನವನದ ಜಾಗ ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಜಾಣ ಮೌನ ವಹಿಸಿದ್ದಾರೆ. ಇದು ಅವರ ಬೇಜವಾಬ್ದಾರಿ, ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಉದ್ಯಾನವನವನ್ನು ಒತ್ತುವರಿ ಮಾಡಿಕೊಳ್ಳಲಿ, ಅಕ್ರಮ ಕಟ್ಟಡ ನಿರ್ಮಿಸಿಕೊಳ್ಳಲಿ, ವಾಹನಗಳ ಪಾರ್ಕಿಂಗ್ ಸ್ಥಳವಾಗಿಯಾದರೂ ಮಾಡಿಕೊಳ್ಳಿ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕಾನೂನುಬಾಹೀರವಾಗಿ ನಡೆದುಕೊಳ್ಳುವವರನ್ನು ಅಧಿಕಾರಿಗಳು ಪ್ರಶ್ನಿಸುವ, ಅಕ್ರಮಗಳಿಗೆ ತಡೆಯೊಡ್ಡುವ ಸಾಮರ್ಥ್ಯವನ್ನೇ ಕಳೆದುಕೊಂಡಿದ್ದಾರೆ.ಮಹಾತ್ಮಗಾಂಧಿ ಉದ್ಯಾನವನದ ಜಾಗ ಈಗ ಕಾರು, ಬೈಕ್ಗಳ ನಿಲ್ದಾಣವಾಗಿದೆ. ಬಿಸಿಲಿನಿಂದ ವಾಹನಗಳನ್ನು ರಕ್ಷಿಸಿಕೊಳ್ಳಲು ಅವೈಜ್ಞಾನಿಕವಾಗಿ, ಕಾನೂನು ಬಾಹಿರವಾಗಿ ವಾಹನಗಳ ಮಾಲೀಕರು ತಮ್ಮ ವಾಹನಗಳನ್ನು ಉದ್ಯಾನವನದ ಒಳಗೆ ನಿಲ್ಲಿಸುತ್ತಿದ್ದರೂ ಕೇಳುವವರೇ ದಿಕ್ಕಿಲ್ಲದಂತಾಗಿದೆ.ನಗರಸಭೆ ಕಟ್ಟಡದಿಂದ ಗಾಂಧಿ ಉದ್ಯಾನವನ ಕಣ್ಣೆದುರಿಗೇ ಕಾಣುತ್ತದೆ. ವಾಹನಗಳನ್ನು ನಿಲ್ಲಿಸಿರುವುದು ಕಣ್ಣೆದುರಿನಲ್ಲೇ ಕಂಡರೂ ಯಾರೂ ಅದಕ್ಕೆ ತಡೆಯೊಡ್ಡುವ ಪ್ರಯತ್ನವನ್ನೇ ನಡೆಸಿಲ್ಲ. ಕೆಲ ವರ್ಷಗಳ ಹಿಂದೆ ಗಾಂಧಿ ಉದ್ಯಾನವನ ಮಕ್ಕಳ ನೆಚ್ಚಿನ ಪಾರ್ಕ್ ಆಗಿತ್ತು. ಉದ್ಯಾನವನದ ಒಳಗೆ ಬರಬೇಕಾದರೆ ಶುಲ್ಕವನ್ನು ಪಾವತಿ ಮಾಡಿ ಜನರು, ಮಕ್ಕಳು ಬರುತ್ತಿದ್ದರು. ಕಾರಂಜಿ, ದೀಪದ ವ್ಯವಸ್ಥೆ ಎಲ್ಲವೂ ಸುಸ್ಸಜ್ಜಿತವಾಗಿತ್ತು. ಆದರೆ, ಕಾಲಕ್ರಮೇಣ ತನ್ನ ಸ್ವರೂಪ ಕಳೆದುಕೊಂಡಿತು. ನಗರಸಭೆಯ ನಿರ್ಲಕ್ಷ್ಯತನದಿಂದ ಈಗ ವಾಹನ ನಿಲುಗಡೆಯ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಹಲವರು ಆರೋಪಿಸಿದ್ದಾರೆ.ನಗರಸಭೆಯಲ್ಲಿ ಉದ್ಯಾನವನ ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಪಾರ್ಕ್ ಇನ್ಸ್ಪೆಕ್ಟರ್ ಎಂಬ ಹುದ್ದೆಯೂ ಇದೆ. ಈ ಹುದ್ದೆಗೆ ಖಾಯಂ ನೌಕರ ಇಲ್ಲದಿದ್ದರೂ, ಓರ್ವ ನೌಕರನನ್ನು ಪ್ರಭಾರವಾಗಿ ನೇಮಕ ಮಾಡಲಾಗಿದೆ. ಅವರು ಮಾಡುತ್ತಿರುವುದಾದರೂ ಏನು ಎಂಬ ಪ್ರಶ್ನಿಸಿದ್ದಾರೆ. ಪ್ರತಿ ನಿತ್ಯ ಉದ್ಯಾನವನದಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ. ಬಿಸಿಲಿನ ಝಳ ಹೆಚ್ಚಿರುವುದರಿಂದ ಉದ್ಯಾನವದ ಬೆಳೆದು ನಿಂತಿರುವ ಮರದ ನೆರಳಿನಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದಾರೆ.ಇದು ಪರಿಸರ ಪ್ರಿಯರ ವಿರೋಧಕ್ಕ್ಕೂ ಕಾರಣವಾಗಿದೆ. ಈಗಲಾದರೂ ನಗರಸಭೆ ಅಧಿಕಾರಿಗಳು ಕಣ್ತೆರೆದು ನೋಡಿ ಉದ್ಯಾನವನಗಳ ಆಸ್ತಿ ಉಳಿವಿಗೆ ನಗರಸಭೆ ಅಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.ಕೋಟ್.........ಉದ್ಯಾನವನದ ಜಾಗಗಳು ದುರ್ಬಳಕೆಯಾಗುತ್ತಿರುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿವೆ. ಇದರ ಬಗ್ಗೆ ನಗರಸಭೆ ಅಧ್ಯಕ್ಷರು, ಅಧಿಕಾರಿಗಳು ಜಾಗೃತಿ ವಹಿಸಬೇಕು. ಉದ್ಯಾನವನಗಳ ಜಾಗ ಅನ್ಯ ಉದ್ದೇಶಗಳಿಗೆ ಬಳಕೆಯಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಆರಂಭದಲ್ಲೇ ನಿರ್ಲಕ್ಷ್ಯ ವಹಿಸಿದರೆ ಉದ್ಯಾನವನಗಳನ್ನು ಉಳಿಸಿಕೊಳ್ಳಲಾಗದಂತಹ ಪರಿಸ್ಥಿತಿ ಸೃಷ್ಟಿಯಾಗುವ ಆತಂಕವಿದೆ.- ಎಂ.ಬಿ.ನಾಗಣ್ಣಗೌಡ, ಅಧ್ಯಕ್ಷರು, ಹೊರಗುತ್ತಿಗೆ ಪೌರ ಕಾರ್ಮಿಕರ ಸಂಘ------------------ಮೊನ್ನೆ ಕುವೆಂಪು ಉದ್ಯಾನವನದಲ್ಲಿ ಅಕ್ರಮ ಕಟ್ಟಡ ನಿರ್ಮಾಣ, ಇಂದು ಗಾಂಧಿ ಉದ್ಯಾನವನದಲ್ಲಿ ಅನಧಿಕೃತವಾಗಿ ವಾಹನಗಳ ನಿಲುಗಡೆ. ಹೀಗೆ ಉದ್ಯಾನವನ ಜಾಗ ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ವಹಿಸುತ್ತಿಲ್ಲ. ನಗರಸಭೆ ಆಸ್ತಿಯನ್ನೇ ಉಳಿಸಲಾಗದಿದ್ದವರು ಸಾರ್ವಜನಿಕ ಆಸ್ತಿಯನ್ನು ಹೇಗೆ ಉಳಿಸುತ್ತಾರೆ ಎಂಬ ಅನುಮಾನ ಮೂಡಿದೆ. - ಎಚ್.ಡಿ.ಜಯರಾಂ, ಜಿಲ್ಲಾಧ್ಯಕ್ಷರು, ಕರವೇ (ಶಿವರಾಮೇಗೌಡ ಬಣ)
೧೬ಕೆಎಂಎನ್ಡಿ-೪ಮಂಡ್ಯದ ಗಾಂಧಿ ಉದ್ಯಾನವನದಲ್ಲಿ ಅನಧಿಕೃತವಾಗಿ ವಾಹನಗಳನ್ನು ನಿಲುಗಡೆ ಮಾಡಿರುವುದು.