ಕಾಜುಬಾಗ್‌ನಲ್ಲಿ ಚಂದ್ರನ ಹಿನ್ನೆಲೆಯಲ್ಲಿ ನೃತ್ಯ ಭಂಗಿಯಲ್ಲಿ ನಿಂತಿರುವ ಗಣೇಶ ಹಾಗೂ ಗೌರಿ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ವಿಶೇಷ ಆಕರ್ಷಣೆಯಾಗಿದೆ.

ಕಾರವಾರ: ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಾರವಾರ ನಗರದಲ್ಲಿ ಮನೆಮಾಡಿದ್ದು, ನಗರದ ವಿವಿಧೆಡೆ ಪ್ರತಿಷ್ಠಾಪಿಸಿರುವ ವೈವಿಧ್ಯಮಯ ಸಾರ್ವಜನಿಕ ಗಣೇಶ ಮೂರ್ತಿಗಳು ಭಕ್ತರ ಗಮನ ಸೆಳೆಯುತ್ತಿವೆ.

ವಿಭಿನ್ನ ಪರಿಕಲ್ಪನೆ, ಅಲಂಕಾರ ಹಾಗೂ ಕಲಾತ್ಮಕ ವಿನ್ಯಾಸದಲ್ಲಿ ಮೂಡಿಬಂದಿರುವ ಗಣೇಶ ಮೂರ್ತಿಗಳ ದರ್ಶನ ಪಡೆಯಲು ಭಕ್ತರು ಮಂಟಪಗಳಿಗೆ ಭೇಟಿ ನೀಡುತ್ತಿದ್ದಾರೆ.ಕಾಜುಬಾಗ್‌ನಲ್ಲಿ ಚಂದ್ರನ ಹಿನ್ನೆಲೆಯಲ್ಲಿ ನೃತ್ಯ ಭಂಗಿಯಲ್ಲಿ ನಿಂತಿರುವ ಗಣೇಶ ಹಾಗೂ ಗೌರಿ ಮಾತೆಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ವಿಶೇಷ ಆಕರ್ಷಣೆಯಾಗಿದೆ. ಮಾರುತಿ ದೇವಸ್ಥಾನದಲ್ಲಿ ‘ಕಾರವಾರ ಚಾ ರಾಜ’ ಹೆಸರಿನಲ್ಲಿ ಪ್ರತಿಷ್ಠಾಪಿಸಿರುವ ಬೃಹತ್ ಗಣೇಶ ಮೂರ್ತಿ ಭಕ್ತರನ್ನು ಸೆಳೆಯುತ್ತಿದೆ. ಟೋಲ್ ನಾಕಾದ ‘ಟೋಲ್ ನಾಕಾ ಚಾ ಸಾಮ್ರಾಟ್’ ಮಂಟಪದಲ್ಲಿ ದುರ್ಗಾದೇವಿಯೊಂದಿಗೆ ಕುಳಿತಿರುವ ಗಣೇಶನ ವಿಶೇಷ ರೂಪ ಗಮನ ಸೆಳೆಯುತ್ತಿದೆ.ಶಿರವಾಡದ ‘ಶಿರವಾಡ್ ಚಾ ಸಾಮ್ರಾಟ್’ ಮಂಟಪದಲ್ಲಿ ಬೆಂಕಿ ಹಾಗೂ ಬೆಳಕಿನ ವಿಶೇಷ ಪರಿಣಾಮಗಳೊಂದಿಗೆ ಬಹುಭುಜ ಗಣೇಶನನ್ನು ಪ್ರದರ್ಶಿಸಲಾಗಿದೆ. ಹಬ್ಬುವಾಡದಲ್ಲಿ ಶಿವನ ರೂಪದಲ್ಲಿ ನಿಂತಿರುವ ಗಣೇಶನೊಂದಿಗೆ ಇಲಿ ಹಾಗೂ ಋಷಿ ಮೂರ್ತಿಗಳನ್ನು ನಿರ್ಮಿಸಲಾಗಿದ್ದು, ವಿಭಿನ್ನ ಪರಿಕಲ್ಪನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆಟೋ ಯುನಿಯನ್ ಕಾರವಾರದ ಮಂಟಪದಲ್ಲಿ ನೀಲಿ ಬಣ್ಣದ ವಿನಾಯಕ ಚಕ್ರ ಹಾಗೂ ಶಂಖ ಹಿಡಿದು ನಿಂತಿರುವ ರೂಪದಲ್ಲಿ ಕಂಗೊಳಿಸುತ್ತಿದ್ದಾನೆ.ತಾಲೂಕಿನ ಅಂಗಡಿ ಗ್ರಾಮದ ಅಂಗಡಿ ಚಾ ರಾಜ ಮಂಟಪದಲ್ಲಿ ವರಾಹ ರೂಪ ಹಾಗೂ ವಿವಿಧ ದೇವತೆಗಳೊಂದಿಗೆ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಕಾರವಾರ ನಗರಸಭೆ ಆವರಣದಲ್ಲಿ ಕನ್ನಡ ಶಾಸನದೊಂದಿಗೆ ಕೆಂಪು ಬಣ್ಣದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು, ಕಾರವಾರ ಬಸ್ ನಿಲ್ದಾಣ ಹಾಗೂ ಪೊಲೀಸ್ ಹೆಡ್‌ಕ್ವಾರ್ಟರ್ಸ್ ಕಾಜುಬಾಗ್‌ನಲ್ಲಿಯೂ ಸುಂದರವಾಗಿ ಅಲಂಕರಿಸಲಾದ ಗಣೇಶ ಮೂರ್ತಿಗಳು ಭಕ್ತರನ್ನು ಆಕರ್ಷಿಸುತ್ತಿವೆ.ಮಿತ್ರ ಸಮಾಜ ಕಾರವಾರದಲ್ಲಿ ಬಂಗಾರದ ಬಣ್ಣದ ಬೃಹತ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಕಾರವಾರ ಪೊಲೀಸ್ ಠಾಣೆ ಹಾಗೂ ಚಿತ್ತಾಕುಲ ಪೊಲೀಸ್ ಠಾಣೆಗಳಲ್ಲಿಯೂ ಹೂವುಗಳಿಂದ ಅಲಂಕರಿಸಿದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.ನಗರದ ವಿವಿಧೆಡೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವೈವಿಧ್ಯಮಯ ರೂಪಗಳು ಹಾಗೂ ಆಕರ್ಷಕ ಮಂಟಪಗಳು ಗಣೇಶೋತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿವೆ. ಭಕ್ತರು ಕುಟುಂಬ ಸಮೇತರಾಗಿ ಮಂಟಪಗಳಿಗೆ ಭೇಟಿ ನೀಡಿ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿದ್ದಾರೆ. ಚತುರ್ಥಿಯಿಂದ ಹನ್ನೊಂದು ದಿನಗಳ ಕಾಲ ನಗರದಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸ್ಥಾಪಿಸಿ ಪೂಜೆ ಸಲ್ಲಿಸಿ ಬಳಿಕ ವಿಸರ್ಜನೆ ಮಾಡಲಾಗುತ್ತದೆ.