ಹಬ್ಬಗಳಲ್ಲೇ ಗಣೇಶೋತ್ಸವಕ್ಕೆ ವಿಶೇಷ ಸ್ಥಾನ

| Published : Sep 04 2024, 01:46 AM IST

ಹಬ್ಬಗಳಲ್ಲೇ ಗಣೇಶೋತ್ಸವಕ್ಕೆ ವಿಶೇಷ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಉಚಿತವಾಗಿ ತರಬೇತಿಯನ್ನು ನೀಡಿ ಆ ಗಣೇಶಮೂರ್ತಿಗಳ ಸಿದ್ಧಪಡಿಸಲು ಬೇಕಾದಂತಹ ಮಣ್ಣಿನೊಂದಿಗೆ ಎಲ್ಲವನ್ನು ಕೂಡ ಉಚಿತವಾಗಿ ನೀಡಿ ಈ ಸಾಮೂಹಿಕ ಗಣೇಶ ತಯಾರಿಕೆ ಮಾಡಿರುವುದು ವಿಶೇಷ. ಪರಿಸರಕ್ಕೆ ಪೂರಕವಾದ ಇಂತಹ ಮೂರ್ತಿಗಳ ತಯಾರಿಕೆ ಶಿಬಿರ ಏರ್ಪಡಿಸಿರುವುದ ಶ್ಲಾಘನೀಯ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಭವ್ಯ ಭಾರತದ ಪರಂಪರೆಯಲ್ಲಿ ಗಣೇಶೋತ್ಸವ ವಿಶೇಷ ಸ್ಥಾನವನ್ನು ಹೊಂದಿದೆ. ದೇಶದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಗಣೇಶೋತ್ಸವ ತನ್ನದೇಯಾದ ಪಾತ್ರ ವಹಿಸಿತ್ತು ಎಂದು ಕೇಂದ್ರ ಸಂಗೀತ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ಲಕ್ಷ್ಮಣ್ ದಾಸ್ ತಿಳಿಸಿದರು.

ತಾಲೂಕಿನ ದೊಡ್ಡಮಲ್ಲೇಕೆರೆಯ ಶ್ರೀ ಮುತ್ಯಾಲಮ್ಮ ಮಹೇಶ್ವರಮ್ಮ ದೇವಸ್ಥಾನದ ಆವರಣದಲ್ಲಿ ಶ್ರೀ ನವದೃಷ್ಟಿ ಸಾಂಸ್ಕೃತಿಕ ವೇದಿಕೆ ವತಿಯಿಂದ ಪರಿಸರ ಸಂರಕ್ಷಣೆಯ ಸಲುವಾಗಿ ಏರ್ಪಡಿಸಿದ್ದ ಮಣ್ಣಿನ ಗಣಪತಿ ತಯಾರಿಕಾ ಶಿಬಿರದಲ್ಲಿ ಮಾತನಾಡಿದರು.

ಮೂರ್ತಿ ತಯಾರಿಕೆಗೆ ತರಬೇತಿ

ಗಣೇಶನನ್ನು ತಂದು ಪ್ರತಿಷ್ಠಾಪಿಸಿ ಪೂಜೆ, ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಾಮಾನ್ಯ. ಅದಕ್ಕೂ ಮಿಗಿಲಾಗಿ ಪಟ್ಟಣದಲ್ಲಿ ಸಾಮೂಹಿಕವಾಗಿ ಗಣೇಶಗಳನ್ನ ತಾವೇ ಸಿದ್ಧಪಡಿಸಿ ಅವುಗಳನ್ನು ಪೂಜೆಗೆ ಇಡುವಂತೆ ಮಾಡುವ ವ್ಯವಸ್ಥೆ ಒಂದೆಡೆಯಾದರೆ ಸಂಪೂರ್ಣವಾಗಿ ಉಚಿತವಾಗಿ ತರಬೇತಿಯನ್ನು ನೀಡಿ ಆ ಗಣೇಶಮೂರ್ತಿಗಳ ಸಿದ್ಧಪಡಿಸಲು ಬೇಕಾದಂತಹ ಮಣ್ಣಿನೊಂದಿಗೆ ಎಲ್ಲವನ್ನು ಕೂಡ ಉಚಿತವಾಗಿ ನೀಡಿ ಈ ಸಾಮೂಹಿಕ ಗಣೇಶ ತಯಾರಿಕೆ ಮಾಡಿರುವುದು ವಿಶೇಷವಾಗಿದೆ ಎಂದರು,

ಗಣೇಶ ಮೂರ್ತಿ ತಯಾರಿಕೆಯಲ್ಲಿ ಪ್ರಥಮ ಬಹುಮಾನ ಪಡೆದ ದೊಡ್ಡಮಲ್ಲೇಕೆರೆಯ ಶಶಿಕುಮಾರ್ ಮಾತನಾಡಿ, ಇಂತಹ ಸಂಭ್ರಮ ಸಡಗರವನ್ನು ನಾನು ಪ್ರಥಮ ಬಾರಿಗೆ ಭಾರಿಗೆ ನೋಡಿದ್ದು, ಹೀಗೆ ಸಾಮೂಹಿಕವಾಗಿ ಎಲ್ಲರೊಂದಿಗೆ ಬೆರೆತು ನಾನೇ ಗಣೇಶ ತಯಾರಿಸಿ ಮೆಚ್ಚುಗೆಗೆ ಪಾತ್ರನಾಗಿರುವುದು ನನಗೆ ಅಪಾರ ಸಂತೋಷ ತಂದಿದೆ ಎಂದರು.

ಪರಿಸರಕ್ಕೆ ಪೂರಕವಾದ ಮೂರ್ತಿ

ಗಣೇಶನ ಮೂರ್ತಿ ತಯಾರಿಸಿದ ವಿದ್ಯಾರ್ಥಿಗಳು ಸಹ ಇಂತಹ ಕಾರ್ಯಾಗಾರ ನಮಗೆ ತುಂಬ ಸಹಕಾರಿಯಾಗಿದೆ. ಪರಿಸರಕ್ಕೆ ಪೂರಕವಾದ ಇಂತಹ ಮೂರ್ತಿಗಳನ್ನು ತಯಾರಿಸಿದ್ದು ಖುಷಿಯಾಗಿದೆ. ಈ ವರ್ಷ ಇದೇ ಗಣೇಶನನ್ನು ನಮ್ಮ ಮನೆಯಲ್ಲಿ ಪೂಜೆ ಮಾಡುತ್ತೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಅಮಾಸ ವಿಶ್ವನಾಥ ನಾಯಕ, ನಿವೃತ್ತ ಶಿಶು ಅಭಿವೃದ್ದಿ ಯೋಜನಾಅಧಿಕಾರಿ ನರಸಿಂಹರಾಜು,ಶಿಕ್ಷಕ ಶಿವಕುಮಾರ್, ಮುಖಂಡರಾದ ಭೀಮೇಶ್ ನಾಯಕ್, ಪ್ರಶಸ್ತಿಪುರಸ್ಕೃತ ಹಿರಿಯಕಲಾವಿದ ಗಂಗಪ್ಪ, ಶ್ರೀ ನವದೃಷ್ಠಿ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷೆ ಯಶೋದಮ್ಮ, ಕಾರ್ಯದರ್ಶಿ ಷಣ್ಮುಖ. ಡಿ.ವಿ ಸೇರಿದಂತೆ ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

ಬಹುಮಾನ ವಿತರಣೆ

ಸುಮಾರು 70 ಮಕ್ಕಳು, ಯುವಕರು ಗಣೇಶ ತಯಾರಿಕೆಯಲ್ಲಿ ಭಾಗವಹಿಸಿದ್ದು ಆಕರ್ಷಣೀಯವಾಗಿ ಗಣೇಶ ಮಾಡಿದ ಶಶಿಕುಮಾರ್ ಪ್ರಥಮ, ಚಂದರಶೇಖರ್ ದ್ವಿತೀಯ, ಭೀಮ ತೃತೀಯ ಬಹುಮಾನ ಪಡೆದರು. ಕಿರಿಯರ ವಿಭಾಗದಲ್ಲಿ ಗಂಗರಾಜು, ಮನೋಜ್, ಗಿರೀಶ್, ಹರ್ಷಿತ್, ವಿಶೇಷ ಬಹುಮಾನ ಪಡೆದರು.