ಏಪ್ರಿಲ್‌ 2 ರಂದು ಲೋಕಸಭೆ ಚುನಾವಣೆಗೆ ಬಿಎಸ್‌ಪಿಯಿಂದ ಗಂಗಾಧರ್ ನಾಮಪತ್ರ ಸಲ್ಲಿಕೆ

| Published : Mar 24 2024, 01:30 AM IST

ಏಪ್ರಿಲ್‌ 2 ರಂದು ಲೋಕಸಭೆ ಚುನಾವಣೆಗೆ ಬಿಎಸ್‌ಪಿಯಿಂದ ಗಂಗಾಧರ್ ನಾಮಪತ್ರ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭೆ ಚುನಾವಣೆಗೆ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಯಾಗಿರುವ ಗಂಗಾಧರ್ ಬಹುಜನ್ ಅವರು ಏ.೨ ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ ತಿಳಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸುದ್ದಿಗೋಷ್ಠಿ । ಪಕ್ಷದ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ ಮಾಹಿತಿ

ಕನ್ನಡಪ್ರಭ ವಾರ್ತೆ ಹಾಸನ

ಲೋಕಸಭೆ ಚುನಾವಣೆಗೆ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಯಾಗಿರುವ ಗಂಗಾಧರ್ ಬಹುಜನ್ ಅವರು ಏ.೨ ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ ತಿಳಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ನಮ್ಮ ಬಿಎಸ್‌ಪಿ ಪಕ್ಷದ ರಾಜ್ಯ ಉಪಾಧ್ಯಕ್ಷರಾದ ಗಂಗಾಧರ್ ಬಹುಜನ್ ಅವರನ್ನು ಹಾಸನ ಜಿಲ್ಲೆಯ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಪ್ರಸ್ತುತ ಚುನಾವಣೆಗಳು ಉದ್ಯಮವಾಗಿ ಬಿಟ್ಟಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿ ಸೋತರೆ ಮಾಜಿ ಪ್ರಧಾನಿಗೆ ಅವಮಾನ ಆಗುತ್ತದೆ ಎಂದು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಇನ್ನೊಬ್ಬರೂ ಕಳೆದ ಚುನಾವಣೆಯಲ್ಲಿ ಹಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ನಮ್ಮ ಪಕ್ಷದ ಅಭ್ಯರ್ಥಿ ಗಂಗಾಧರ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಸಮಾಜಕ್ಕೆ ಕೊಡುಗೆ ಕೊಟ್ಟಿದ್ದಾರೆ. ಯಾವುದೇ ಹಣಕ್ಕೆ, ಆಮಿಷಕ್ಕೆ ಬಲಿಯಾಗದೇ ಪ್ರಾಮಾಣಿಕ ವ್ಯಕ್ತಿಯಾಗಿರುವ ಗಂಗಾಧರ್ ಬಹುಜನ್ ಅವರಿಗೆ ಮತ ಹಾಕಿ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲೆಯ ಅಭ್ಯರ್ಥಿ ಗಂಗಾಧರ್ ಬಹುಜನ್ ಮಾತನಾಡಿ, ಇದುವರೆಗೂ ಬಂದ ಸರ್ಕಾರಗಳಲ್ಲಿ ಯಾವುದೇ ಕೈಗಾರಿಕೆಗಳು ಸ್ಥಾಪನೆ ಆಗಲಿಲ್ಲ. ಕೃಷಿ ಕಾರ್ಮಿಕರ ಬದುಕು ಹದಗೆಟ್ಟಿದೆ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಳೆ ಸಿಗಲಿಲ್ಲ. ಬೆಲೆ ನಿಗದಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲಿಲ್ಲ. ಇಲ್ಲಿ ಅಣೆಕಟ್ಟು ಇದ್ದರೂ ಇಲ್ಲಿಗೆ ನೀರು ಕೊಡಲಿಲ್ಲ. ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು. ಯಾವ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಜನರ ಬದುಕಿನಲ್ಲಿ ಯಾವ ಬದಲಾವಣೆ ಆಗಿದೆ ಬಗ್ಗೆ ಒಂದು ಗಂಬೀರವಾದ ವಿಚಾರವಾಗಿದೆ ಎಂದು ಹೇಳಿದರು.

‘ಇಲ್ಲಿ ಎರಡು ಕುಟುಂಬ ರಾಜಕಾರಣ ನಡೆಯುತ್ತಿದೆ. ಆದರೆ ಮೂರನೇ ಕುಟುಂಬ ಇಲ್ಲಿ ಯಾರು ಜೀವಂತವಾಗಿಲ್ಲವೇ ಎಂಬುವುದರ ಬಗ್ಗೆ ಯೋಚನೆ ಮಾಡಲಾಗುತ್ತಿದೆ. ಬಹುಜನ ಸಮಾಜ ಪಾರ್ಟಿ ಇವರೆಡರ ನಡುವೆ ಅಂತರ ಕಾಯ್ದುಕೊಂಡು ಮೂರನೇ ಶಕ್ತಿಯಾಗಿ ಹೊರಬರಬೇಕು. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮ ಪಕ್ಷವನ್ನು ಬೆಂಬಲಿಸಬೇಕು. ನಾನು ಕಳೆದ ೨೫ ವರ್ಷಗಳಿಂದಲೂ ಬಡವರ ಪರವಾಗಿ, ಸಮಸ್ಯೆ ಬಂದಾಗ ನಿಲ್ಲುವ ವ್ಯಕ್ತಿಯಾಗಿ ಹೋರಾಟ ನಡೆಸುತ್ತ ಬಂದಿದ್ದೇನೆ. ಈಗಿರುವ ಸರ್ಕಾರಗಳು ನೀಡಿರುವ ಎಲ್ಲಾ ಭರವಸೆಗಳು ಸುಳ್ಳಾಗಿದೆ ಎಂದು ದೂರಿದರು.

ಇಂತಹ ಸಂದರ್ಭದಲ್ಲಿ ಬಹುಜನ ಸಮಾಜ ಪಾರ್ಟಿಗೆ ಮತ ಹಾಕುವುದರ ಮೂಲಕ ಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದರು. ಲೋಕಾಸಭೆ ಅಭ್ಯರ್ಥಿಯಾಗಿ ಏ.೨ ರಂದು ನಾಮಪತ್ರವನ್ನು ಸಲ್ಲಿಸುವುದಾಗಿ ಹೇಳಿದರು.

ಈ ವೇಳೆ ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮ್ಮ, ಜಿಲ್ಲಾ ಸಂಯೋಜಕರಾದ ಲಕ್ಷ್ಮಣ್ ಕೀರ್ತಿ, ಜಿಲ್ಲಾ ಉಪಾಧ್ಯಕ್ಷರಾದ ಲೋಹಿತ್, ಕಚೇರಿ ಕಾರ್ಯದರ್ಶಿ ಸುರೇಂದ್ರ ಇತರರು ಹಾಜರಿದ್ದರು.ಮಾಧ್ಯಮಗೋಷ್ಠಿಯಲ್ಲಿ ಬಿಎಸ್ಪಿ ಜಿಲ್ಲಾ ಅಧ್ಯಕ್ಷ ಅತ್ನಿ ಹರೀಶ್ ಮಾತನಾಡಿದರು. ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಮ್ಮ, ಜಿಲ್ಲಾ ಸಂಯೋಜಕ ಲಕ್ಷ್ಮಣ್ ಕೀರ್ತಿ, ಜಿಲ್ಲಾ ಉಪಾಧ್ಯಕ್ಷ ಲೋಹಿತ್ ಇದ್ದರು.