ಸಾರಾಂಶ
ಗಂಗೊಳ್ಳಿಯ ಮೀನುಗಾರಿಕಾ ಬೋಟ್ವೊಂದು ಕಾರವಾರದ ಬಳಿ ಮುಳುಗಡೆಯಾದ ಘಟನೆ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಗಂಗೊಳ್ಳಿಯ ಮೀನುಗಾರಿಕಾ ಬೋಟ್ವೊಂದು ಕಾರವಾರದ ಬಳಿ ಮುಳುಗಡೆಯಾದ ಘಟನೆ ಸಂಭವಿಸಿದೆ.ಗಂಗೊಳ್ಳಿ ನಿವಾಸಿ ಮೊಮಿನ್ ನಾಜಿಮಾ ಅವರಿಗೆ ಸೇರಿದ ಸೀ ಹಂಟರ್ ಹೆಸರಿನ ಈ ಬೋಟ್ನಲ್ಲಿ ತಂಡೇಲ ಯೋಗೀಶ್ ರಾಮಕೃಷ್ಣ ಹರಿಕಾಂತ ಮತ್ತು 7 ಮಂದಿ ಕಲಾಸಿ ಜತೆ ಸೇರಿ ಮೀನುಗಾರಿಕೆಗಾಗಿ ಮಂಗಳವಾರ ರಾತ್ರಿ 10.30ಕ್ಕೆ ಮಲ್ಪೆ ಬಂದರಿನಿಂದ ಹೊರಟಿದ್ದರು. ರಾತ್ರಿ ಸುಮಾರು 11.45ರ ಹೊತ್ತಿಗೆ ಕಾರವಾರದ ಮುಂದೆ ಹೋಗುವಾಗ ಬೋಟಿನ ಕೆಳಭಾಗಕ್ಕೆ ಯಾವುದೋ ವಸ್ತು ತಾಗಿತು. ಸ್ವಲ್ಪ ಹೊತ್ತಿನ ಬಳಿಕ ಬೋಟಿನ ಮುಂಬದಿಯ ಸ್ಟೋರೇಜ್ನಲ್ಲಿ ನೀರು ಒಳ ಬರಲು ಆರಂಭವಾಗಿದ್ದು, ನೀರು ಖಾಲಿ ಮಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣ ವಿಷಯ ತಿಳಿದು ಹತ್ತಿರದಲ್ಲಿಯೇ ಇದ್ದ ಇನ್ನೊಂದು ಬೋಟಿನವರು ಸಹಾಯಕ್ಕೆ ಬಂದು ಮೀನುಗಾರರನ್ನು ರಕ್ಷಿಸಿದರು. ಆದರೆ ಬೋಟ್ ಸಂಪೂರ್ಣ ಮುಳುಗಡೆಯಾಗಿ ಸುಮಾರು 70 ಲ. ರು. ನಷ್ಟ ಉಂಟಾಗಿದೆ. ಯಾವುದೇ ಜೀವಹಾನಿಯಾಗಿಲ್ಲ. ಕಾರವಾರದ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.