ಕನ್ನಡಪ್ರಭ ವಾರ್ತೆ ಮೇಲುಕೋಟೆ

ಶ್ರೀಚೆಲುವನಾರಾಯಣಸ್ವಾಮಿ ದೇಗುಲದಲ್ಲಿ ಗರುಡ ಧ್ವಜಾರೋಹಣ ನೆರವೇರುವ ಮೂಲಕ ಬುಧವಾರ ಪರಾಭವನಾಮ ಸಂವತ್ಸರದ ವೈರಮುಡಿ ಬ್ರಹ್ಮೋತ್ಸವ ವಿದ್ಯುಕ್ತವಾಗಿ ಆರಂಭವಾಯಿತು.

ಸ್ವಾಮಿ ಸನ್ನಿಧಿಯ ಅರ್ಚಕರಾದ ವರದರಾಜ ಭಟ್‌ ಸ್ವಯಂ ಆಗಮೋಕ್ತವಾಗಿ ಪಂಚಾಯುಧದೊಂದಿಗೆ ಚಿತ್ರಿಸಿದ ಗರುಡದೇವನ ಪಟವನ್ನು ಚಿನ್ನದ ಧ್ವಜಸ್ತಂಭದ ಮೇಲೆ ಆರೋಹಣ ಮಾಡಲಾಯಿತು. ಬ್ರಹ್ಮೋತ್ಸವಕ್ಕೆ ಗರುಡದೇವ ದೇವಾನುದೇವತೆಗಳು ಹಾಗೂ ಭಕ್ತರನ್ನು ಚೆಲುವನಾರಾಯಣಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಆಹ್ವಾನಿಸುತ್ತಾನೆಂಬ ನಂಬಿಕೆಯಿದೆ.

ಧ್ವಜಾರೋಹಣದ ಅಂಗವಾಗಿ ಚೆಲುವನಾರಾಯಣಸ್ವಾಮಿಯ ಮಂಟಪವಾಹನೋತ್ಸವದೊಂದಿಗೆ ಗರುಡಪಟದ ಮೆರವಣಿಗೆ ನೆರವೇರಿಸಿ ಸ್ಥಾನೀಕರಿಂದ ಗರುಡಸಾಮದ ಪಾರಾಯಣ ನಡೆದ ನಂತರ ಗರುಡ ಧ್ವಜಾರೋಹಣ ನೆರವೇರಿಸಲಾಯಿತು. ಇದರೊಂದಿಗೆ ವೈರಮುಡಿ ಜಾತ್ರಾಮಹೋತ್ಸವ ವಿಧ್ಯುಕ್ತವಾಗಿ ಆರಂಭವಾಗಿದೆ. ಚತುರ್ವೀದಿಗಳಲ್ಲಿ ಗರುಡನೊಂದಿಗೆ ಪುಷ್ಪಮಂಟಪ ವಾಹನೋತ್ಸವ ಅದ್ಧೂರಿಯಾಗಿ ನೆರವೇರಿತು. ರಾತ್ರಿ ಹಂಸವಾಗನೋತ್ಸವ ತಿರುಪ್ಪರೈ ಹಾಗೂ ಬೇರಿತಾಡನ ನೆರವೇರಿತು. ಎಸ್ಎನ್‌ಐ ಸಾಂಸ್ಕೃತಿಕ ವೇದಿಕೆಯ 11ನೇವರ್ಷದ ನಾದೋಪಾಸನ ಸೇವೆಯಲ್ಲಿ ಕಲಾವಿದರಾದ ಪ್ರಮೋದ್, ಪದ್ಮನಾಭ ಸುಬ್ಬಣ್ಣ ಸುಶ್ರಾವ್ಯವಾಗಿ ಸ್ಯಾಕ್ಸಪೋನ್ ನುಡಿಸಿದರೆ ಕುಮಾರ್ ಮತ್ತು ಸಂಜಯ್ ಡೋಲು ನುಡಿಸಿ ಸಹಕಾರ ನೀಡಿದರು.

ವೈರಮುಡಿ ಬ್ರಹ್ಮೋತ್ಸವದ 2ನೇ ತಿರುನಾಳ್ ದಿನವಾದ ಮಾ.26ರ ಗುರುವಾರ ಬೆಳಗ್ಗೆ ಆರಿದ್ರಾ ಮಾಸ ತಿರುನಕ್ಷತ್ರದ ಅಂಗವಾಗಿ ರಾಮಾನುಜಾಚಾರ್ಯರಿಗೆ ಅಭಿಷೇಕ ನಡೆಯಲಿದೆ. ರಾಮಾನುಜರು ಆದಿಶೇಷನ ಅವತಾರವಾದ ಕಾರಣ ಸಂಜೆ ಶೇಷವಾಹನೋತ್ಸವ ವಿಶೇಷ ಪಡಿಯೇತ್ತ ನೆರವೇರಲಿದೆ.ಶ್ರೀರಾಮನವಮಿ ನಿಮಿತ್ತ ನಾಳೆ ವಿವಿಧ ಪೂಜಾ ಮಹೋತ್ಸವ


ಕೆ.ಎಂ.ದೊಡ್ಡಿ:ಸಮೀಪದ ಅಣ್ಣೂರು ಗ್ರಾಮದ ಶ್ರೀರಾಮ ಸೇವಾ ಸಮಿತಿಯಿಂದ ಶ್ರೀರಾಮನವಮಿ ಪ್ರಯುಕ್ತ ಮಾ.27ರಂದು ವಿವಿಧ ಪೂಜಾ ಮಹೋತ್ಸವ ಜರುಗಲಿದೆ ಎಂದು ಮನ್ಮುಲ್ ಮಾಜಿ ನಿರ್ದೇಶಕ, ಸಮಿತಿ ಸಂಚಾಲಕ ಎ.ಸಿ.ಸತೀಶ್ ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಶ್ರೀರಾಮನಿಗೆ ವಿವಿಧ ರೀತಿಯ ಪುಷ್ಪಾಲಂಕಾರ, ಪಾನಕ, ಮಜ್ಜಿಗೆ, ಕೊಸಂಬರಿ ವಿತರಣೆ, ಅದೇ ದಿನ ಸಂಜೆ 6 ಗಂಟೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದ ವಿಶ್ವವಿಜೇತ ಸ್ವಾಮಿ ವಿವೇಕಾನಂದ ಯುವಬಳಗ ಶ್ರೀಮದ್ ರಾಮಾಯಣ ಮೌಲ್ಯ ದರ್ಶನ ಮತ್ತು ಶ್ರೀರಾಮನ ಗೀತ ಪ್ರವಚನ ಮತ್ತು ನಮನವಿನೂತನ ಕಾರ್ಯಕ್ರಮ ಏರ್ಪಾಡಿಸಲಾಗಿದೆ.ಮಾ.27ರಿಂದ ಮಾ.31ರವರೆಗೆ ಪ್ರತಿ ದಿನ ಶ್ರೀರಾಮನಿಗೆ ವಿವಿಧ ಪೂಜಾ ಕಾರ್ಯಕ್ರಮಗಳು, ಪ್ರಸಾದ ವಿನಿಯೋಗ ನಡೆಯಲಿದೆ. ಐದನೇ ದಿನ ಮಾ.31ರಂದು ಶ್ರೀರಾಮನ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರತಿ ಬೀದಿಗಳಲ್ಲೂ ಮೆರವಣಿಗೆ ಜರುಗಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.