ಕೊಪ್ಪಳ: ಭಗವಾನ್ ಗೌತಮ ಬುದ್ದ ಇಡೀ ಏಷಿಯಾದ ಬೆಳಕು. ಅವರು ಕತ್ತಲೆಯಿಂದ ಬೆಳಕಿನತ್ತ ಸಾಗಲು ಜೀವನ ಸಂದೇಶ ಸಾರಿದರು ಎಂದು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಜರುಗಿದ ಭಗವಾನ್ ಬುದ್ಧ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನುಷ್ಯ ಕತ್ತಲೆ ಜೀವನದಿಂದ ಬೆಳಕಿನತ್ತ ಸಾಗಬೇಕು. ತಮ್ಮ ಮನೆಯಲ್ಲಿದ್ದ ಸಿರಿ ಸಂಪತ್ತನ್ನು ತ್ಯಜಿಸಿ ಸರಳ ಬದುಕಿಗೆ ಬಂದ ಬುದ್ದ ಅವರು ಈ ಜಗತ್ತು ಕಂಡ ಮಹಾಮಹೀಮರಾಗಿದ್ದಾರೆ. ಇಂತಹ ಮಹಾತ್ಮನ ಜಯಂತಿ ರಾಜ್ಯ ಸರ್ಕಾರದಿಂದ ನಡೆಯುತ್ತಿರುವುದು ವಿಶೇಷ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಬುದ್ದ ಪೂರ್ಣಿಮೆಯು ಸಂಭ್ರಮದ ದಿನವಾಗಿದೆ. ಬುದ್ದ, ಬಸವ,ಅಂಬೇಡ್ಕರ ಜಗತ್ತಿಗೆ ಬೆಳಕು ನೀಡಿದ ಮಹಾನ್ ನಾಯಕರು. ಯುದ್ದ ಬೇಡ, ಬುದ್ದ ಬೇಕು ಎಂದು ಈಗ ಇಡೀ ಜಗತ್ತೇ ಹೇಳುತ್ತಿದೆ.ಸಾಮರಸ್ಯದ ಬದುಕು ಕಟ್ಟಿಕೊಳ್ಳಲಾಗದಂತಹ ಪರಿಸ್ಥಿತಿ ಇಂದು ಜಗತ್ತಿನಲ್ಲಿ ಮುಂದುವರೆದಿದೆ. ಹಿಂಸೆ ಬೇಡ, ನಾವು ಬದುಕಬೇಕು ಮತ್ತು ಇತರರಿಗೂ ಬದುಕಲು ಬಿಡಬೇಕು ಎಂಬ ಮಹತ್ವದ ಸಂದೇಶ ಗೌತಮ ಬುದ್ದ ನೀಡಿದ್ದಾರೆ ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ನಿವೃತ್ತ ಉಪ ಅಧೀಕ್ಷಕ ಗಿರೀಶ ಕಾಂಬ್ಳೆ, ಬುದ್ದ ಕೇವಲ ಭಾರತದ ಬೆಳಕಲ್ಲ; ಅವರು ಇಡೀ ಜಗತ್ತಿನ ಬೆಳಕು. ಬುದ್ದ ಅಂದರೆ ಅದು ಮಹಾಸಾಗರ ಇದ್ದಂತೆ. ನಮ್ಮ ಮುಂದಿನ ಏಳ್ಗೆಗೆ, ನಮ್ಮ ಮುಂದಿನ ಬಾಳ್ವೆಗೆ ಬುದ್ದ ಬೇಕು. ಬುದ್ದನನ್ನು ಅರ್ಥ ಮಾಡಿಕೊಂಡವರು ಈ ಜಗತ್ತಿನಲ್ಲಿ ನೆಮ್ಮದಿಯಿಂದ ಬದುಕುತ್ತಾರೆ. ಬುದ್ದ ಒಂದು ಜಾತಿ, ಭಾಷೆ, ಪ್ರದೇಶ, ದೇಶಕ್ಕೆ ಸೀಮೀತರಾಗಿಲ್ಲ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ವೀರಣ್ಣ ಗಡಾದ್, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕೃಷ್ಣ ಇಟ್ಟಂಗಿ, ಮುತ್ತುರಾಜ್ ಕುಷ್ಟಗಿ, ಸಿದ್ರಾಮ ಹೊಸಮನಿ, ನಾಗರಾಜ ಬೆಲ್ಲದ, ರಘು ಬೆಲ್ಲದ, ಜಗದೀಶ ಚಲವಾದಿ, ಹನುಮಂತಪ್ಪ ಬಂಗಾಳಿಗಿಡದ, ಮಹಾವೀರ ಅಳ್ಳಳ್ಳಿ, ಗವಿಸಿದ್ದಪ್ಪ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಬಿ.ಎನ್.ಹೊರಪೇಟೆ, ನಗರಸಭೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿಬ್ಬಂದಿ ಹಾಗೂ ಇತರರಿದ್ದರು.