ಕೊಪ್ಪಳ: ನಗರದ ಗವಿಮಠದ ಆವರಣದಲ್ಲಿ ಗವಿಸಿದ್ದೇಶ್ವರ ಶ್ರೀಗಳಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಶುಕ್ರವಾರ ಜರುಗಿತು.
ಬೆಳಗ್ಗೆಯಿಂದಲೇ ಗವಿಮಠಕ್ಕೆ ನೂರಾರು ಪಾಲಕರು ತಮ್ಮ ಮಕ್ಕಳನ್ನು ಕರೆ ತಂದು ಗವಿಸಿದ್ದೇಶ್ವರ ಶ್ರೀಗಳ ಅಮೃತ ಹಸ್ತದಿಂದ ಮಗುವಿಗೆ ಅಕ್ಷರ ಬರೆಯಿಸಲು ಸರತಿ ಸಾಲಿನಲ್ಲಿ ನಿಂತು ಅಕ್ಷರಾಭ್ಯಾಸ ಮಾಡಿಸಿದರು.ಮಗುವಿಗೆ ಹೊಸ ಬಟ್ಟೆ ಹಾಕಿ, ನೂತನ ಬಳಪ,ಪೆನ್ನು,ಪಾಟಿ, ಪುಸ್ತಕ ತಂದು ಗವಿಶ್ರೀಗಳ ಹಸ್ತದಿಂದ ಮಗುವಿನ ಕೈ ಹಿಡಿಸಿ ಶ್ರೀಕಾರ ಬರೆಯಿಸಿದರು. ಇದು ಪಾಲಕರಿಗೆ ಚೈತನ್ಯ ಮೂಡಿಸಿತು. ಶ್ರದ್ಧಾ, ಭಕ್ತಿಯಿಂದ ಪಾಲಕರು ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ಆಗಲಿ, ಶ್ರೀಗಳ ಆಶೀರ್ವಾದ ಲಭಿಸಲಿ ಎಂದು ಪ್ರಾರ್ಥಿಸಿದರು.
ಪ್ರತಿ ಮಗುವಿಗೂ ಶ್ರೀಕಾರ,ಓಂಕಾರ, ಅ,ಆ, ಬರೆಯಿಸಿ ತಲೆ ಸವರಿದರು. ಶ್ರೀಗಳು ಮಕ್ಕಳೊಂದಿಗೆ ಬೆರೆತು ಅಕ್ಷರಾಭ್ಯಾಸ ಮಾಡಿಸಿದರು. ಒಂದುವರೆ ವರ್ಷದಿಂದ ಆರು ವರ್ಷದ ಮಕ್ಕಳಿಗೂ ಅಕ್ಷರಾಭ್ಯಾಸ ಮಾಡಿಸಲಾಯಿತು.ಶ್ರೀಗಳಿಂದಲೇ ಅಕ್ಷರಾಭ್ಯಾಸ ಆರಂಭಿಸಬೇಕು ಎಂದು ಬಹಳ ದಿನಗಳಿಂದ ಅಪೇಕ್ಷೆ ಪಟ್ಟಿದ್ದೇವು. ಶ್ರೀಗಳು ನಮ್ಮ ಮಗುವಿಗೆ ಅಕ್ಷರಾಭ್ಯಾಸಕ್ಕೆ ಆರಂಭ ಮಾಡಲು ಅಕ್ಷರ ಬರೆಯಿಸಿದ್ದು ಖುಷಿ ಆಯಿತು ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು.
ನೂರಾರು ಪಾಲಕರು ಭಾಗಿ:ಬೆಳಗ್ಗೆ 9ರಿಂದ ನಡೆದ ಅಕ್ಷರಾಭ್ಯಾಸದಲ್ಲಿ ಪಾಲ್ಗೊಳ್ಳಲು ಪಾಲಕರು ಬೆಳಂಬೆಳಗ್ಗೆ ಗವಿಮಠದತ್ತ ನೂರಾರು ಸಂಖ್ಯೆಯಲ್ಲಿ ಮಕ್ಕಳೊಂದಿಗೆ ಆಗಮಿಸಿದ್ದರು. ಸರತಿ ಸಾಲಿನಲ್ಲಿ ನಿಂತು ಅಕ್ಷರಭ್ಯಾಸ ಮಾಡಿಸಿದರು.