ಸಾರಾಂಶ
ಬೆಂಗಳೂರು : ನಾಡೋಜ ಡಾ.ಬರಗೂರು ಪ್ರತಿಷ್ಠಾನದಿಂದ ಬುಧವಾರ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಲೇಖಕಿ ಡಾ.ಎನ್.ಗಾಯತ್ರಿ, ಹಿರಿಯ ನಟಿ ಗಿರಿಜಾ ಲೋಕೇಶ್ ಅವರಿಗೆ ‘ರಾಜಲಕ್ಷ್ಮೀ ಬರಗೂರು ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಹಿಳಾ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಸಬಿಹ ಭೂಮಿಗೌಡ, ರಾಜಲಕ್ಷ್ಮೀ ಅವರು ಸದಾ ನಗುಮುಖದಿಂದ ಇರುತ್ತಿದ್ದು, ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಕಿರಿಯರಿಗೆ ಯಾವಾಗಲೂ ಪ್ರೋತ್ಸಾಹ ನೀಡುತ್ತಿದ್ದರು. ರಾಜಲಕ್ಷ್ಮೀ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದರಿಂದ ಸಂತಸ ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನಟ ಸುಂದರ್ ರಾಜ್ ಮಾತನಾಡಿ, ರಾಜಲಕ್ಷ್ಮೀ ಬರಗೂರು ಅವರು ಅನ್ನಪೂರ್ಣೆಯಾಗಿದ್ದರು. ಹಸಿವು ಎಂದವರಿಗೆ ಅನ್ನ ನೀಡದೇ ಕಳುಹಿಸುತ್ತಿರಲಿಲ್ಲ. ಶೂಟಿಂಗ್ ಸೆಟ್ಗಳಿಗೂ ಆಹಾರವನ್ನು ತಂದು ಎಲ್ಲರೊಂದಿಗೂ ಹಂಚಿಕೊಂಡು ಸೇವಿಸುತ್ತಿದ್ದರು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಬರಗೂರು ಬಳಗ ಉತ್ತಮ ಕೆಲಸ ಮಾಡಿದೆ. ಇದು ನಿರಂತರವಾಗಿ ಮುಂದುವರೆಯಬೇಕು ಎಂದು ಆಶಿಸಿದರು.ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.