ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಜಗತ್ತು ವೇಗವಾಗಿ ಬೆಳೆಯುತ್ತಿದೆ. ಸಮಾಜದ ಜೀವಾಳವಾದ ಕಾರ್ಮಿಕರಿಗೆ ವಿವಿಧ ಸೌಲಭ್ಯಕ್ಕಾಗಿ ಕಾನೂನಿನ ನೆರವು ಮತ್ತು ಅರಿವು ಅಗತ್ಯವಾಗಿದ್ದು, ಆಸಕ್ತರು ನ್ಯಾಯಾಲಕ್ಕೆ ಬಂದು ಉಚಿತ ಕಾನೂನು ಸೇವೆ ಪಡೆಯಬಹುದಾಗಿದೆ ಎಂದು ಹಿರಿಯ ಶ್ರೇಣಿ ದಿವಾನಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಎಚ್.ಎ.ಸಾತ್ವಿಕ್ ಅವರು ಹೇಳಿದರು.ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಜತ ಮಹೋತ್ಸವ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳು, ಯೋಜನೆಗಳು ಹಾಗೂ ಬಡತನ ನಿರ್ಮೂಲನೆ ಪರಿಣಾಮಕಾರಿ ಅನುಷ್ಠಾನದ ಕುರಿತು ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಶನಿವಾರ ಮಾತನಾಡಿದರು.
ದೇಶದಲ್ಲಿ ಅನೇಕ ಕಾನೂನುಗಳಿದ್ದು, ಎಲ್ಲರಿಗೂ ಅವುಗಳ ಅರಿವು ಬೇಕಾಗಿದೆ. ಅದಕ್ಕಾಗಿ ನ್ಯಾಯಾಲದಲ್ಲಿ ಉಚಿತ ಕಾನೂನು ಸೇವೆ ಒದಗಿಸಲಾಗಿದ್ದು, ನಿಮಗೆ ಯಾವ ಭಾಷೆಯಲ್ಲಿ ಕಾನೂನು ಅರಿವು ಬೇಕೋ ಆ ಭಾಷೆಯಲ್ಲಿ ಕಾನೂನು ಅರಿವು ನೀಡಲಾಗುತ್ತಿದೆ. ದೇಶದಲ್ಲಿ ಹತ್ತಾರು ಕಾನೂನುಗಳಿದ್ದು, ಅವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಮಿಕರ ಏಳಿಗೆಗಾಗಿ ಅನೇಕ ಕಾಯ್ದೆಗಳು ಜಾರಿಗೆ ಬಂದಿದ್ದು, ಅವುಗಳನ್ನು ಪ್ರತಿಯೊಬ್ಬರೂ ಅವಶ್ಯಕವಾಗಿ ಸದ್ದಪಯೋಗಪಡಿಸಿಕೊಳ್ಳಬೇಕು. ಕೆಳಮಟ್ಟದಿಂದ ಸುಪ್ರೀಂ ಕೋರ್ಟ್ವರೆಗೂ ಕಾರ್ಮಿಕರ ಏಳಿಗೆಗಾಗಿ ಕೋರ್ಟ್ಗಳು ಶ್ರಮಿಸಲಾಗುತ್ತಿವೆಂದು ಕೆಲವೊಂದು ಪ್ರಕರಣಗಳನ್ನು ಉದಾಹರಣೆಯಾಗಿ ತಿಳಿಸಿದರು.ಕಾರ್ಮಿಕ ಅಧಿಕಾರಿ ಆರತಿ ಮಾತನಾಡಿ, ಕಾರ್ಮಿಕರು ತಮಗಿರುವ ಸರ್ಕಾರದ ಯೋಜನೆ ಹಾಗೂ ಕಾನೂನುಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು. ವಿಶ್ವಕ್ಕೆ ಕಾರ್ಮಿಕರ ಕೊಡುಗೆ ಅಪಾರ. ದೇಶಕ್ಕೆ ಅನ್ನ ನೀಡುವವ ರೈತ. ಸಂಘಟಿತ, ಅಸಂಘಟಿತ, ಕಾರ್ಖಾನೆ ಇತರೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರ ಸೇವೆ ಅನನ್ಯವಾಗಿದ್ದು. ಅವರ ಬದುಕು ಉಜ್ವಲಗೊಳ್ಳಲು ಸರಕಾರ ಕಾರ್ಮಿಕ ಇಲಾಖೆ ಮೂಲಕ ಹಲವಾರು ಯೋಜನೆಗಳನ್ನು ಹಲವಾರು ಕ್ಷೇತ್ರಗಳಲ್ಲಿ ದುಡಿಯುವ ಕಾರ್ಮಿಕರಿಗಾಗಿ ಜಾರಿಗೆ ತಂದಿದ್ದು, ಅವುಗಳಿಗಾಗಿ ಮೀಸಲಿರುವ ಅನುದಾನ ಪಡೆದುಕೊಂಡು ಜೀವನದಲ್ಲಿ ಉನ್ನತಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಲ್ಐಸಿ ಶಾಖಾ ವ್ಯವಸ್ಥಾಪಕರು ಮಧುಸೂದನ್, ವಿವಿಧ ಖಾಸಗಿ ಸಂಸ್ಥೆಗಳ ಮಾಲೀಕರ ಪರವಾಗಿ ಎಸ್.ಎನ್.ಜೂಹಿ, ಕಾರ್ಮಿಕ ಮುಖಂಡರಾದ ಎಸ್.ಮಹಾದೇವಪ್ಪ, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಂಗಘಟನೆಗಳ ಪ್ರಮುಖರು,ಕಾರ್ಮಿಕರು,ಜನರು ಇದ್ದರು.