ಸಾರಾಂಶ
ಸಾಮಾಜಿಕ ಮಾಧ್ಯಮದಿಂದ ಉಂಟಾಗುವ ದುಷ್ಪರಿಣಾಮಗಳು, ವಿದ್ಯಾರ್ಥಿಗಳ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕೆಂದು, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಹೊಂದಿ ಅದನ್ನು ಬೆನ್ನಟ್ಟಿದರೆ ಸಾಧಿಸಬಹುದು. ಹೆಣ್ಣು ಮಕ್ಕಳು ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ಸಂಸ್ಕಾರವನ್ನು ಬಿಡಬಾರದು
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಹೆಣ್ಣು ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ಕಡಿಮೆ ಮಾಡಿ ಓದಿನ ಕಡೆ ಹೆಚ್ಚಿನ ಗಮನಕೊಟ್ಟು, ಉನ್ನತ ಹುದ್ದೆಗಳನ್ನು ಅಲಂಕರಿಸಿ ಉತ್ತಮ ಪ್ರಜೆಗಳಾಗಿ ಬಾಳಬೇಕೆಂದು ನ್ಯಾಯಾಧೀಶರಾದ ಶಿಲ್ಪಾ ಕಿವಿಮಾತು ಹೇಳಿದರು.ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಡೆದ ಕಾನೂನಿನ ನೆರವು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಹೆಣ್ಣು ಮಕ್ಕಳು ಎಷ್ಟೇ ದೊಡ್ಡ ಹುದ್ದೆಯನ್ನು ಅಲಂಕರಿಸಿದರೂ ಸಂಸ್ಕಾರವನ್ನು ಬಿಡಬಾರದು ಎಂದರು.
ನಿಮ್ಮ ಜೀವನ ನೀವೆ ರೂಪಿಸಿಕೊಳ್ಳಿಸಾಮಾಜಿಕ ಮಾಧ್ಯಮದಿಂದ ಉಂಟಾಗುವ ದುಷ್ಪರಿಣಾಮಗಳು, ವಿದ್ಯಾರ್ಥಿಗಳ ಜೀವನವನ್ನು ತಾವೇ ರೂಪಿಸಿಕೊಳ್ಳಬೇಕೆಂದು, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಹೊಂದಿ ಅದನ್ನು ಬೆನ್ನಟ್ಟಿದರೆ ಸಾಧಿಸಬಹುದು, ಹಾಗೆಯೇ ತಾವು ಹೊಂದಿದ್ದ ಗುರಿಯನ್ನು ಹೇಗೆ ಸಾಧಿಸಲಾಯಿತು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು.
ಹಿರಿಯ ವಕೀಲ ನರಸಿಂಹಪ್ಪ ಮಾತನಾಡಿ ಸಮಾಜದಲ್ಲಿನ ಏರುಪೇರುಗಳ ಬಗ್ಗೆ, ಕಾನೂನಿನಲ್ಲಿರುವ ಮಾಹಿತಿ, ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕುಟುಂಬ ದೌರ್ಜನ್ಯದ ಕಾಯಿದೆ, ಬಾಲ್ಯ ವಿವಾಹದಿಂದಾಗುವ ಪರಿಣಾಮಗಳ ಬಗ್ಗೆ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆಯ ದಂದೆಯ ಬಗ್ಗೆ ತಿಳಿಸಿಕೊಟ್ಟರು.ಫುಲೆ ಎದುರಿಸಿದ ಸಮಸ್ಯೆ
ದಲಿತ ಮುಖಂಡ ಗಡ್ಡಂ ವೆಂಕಟೇಶ್ ಮಾತನಾಡಿ ಡಾ. ಬಿ.ಆರ್.ಅಂಬೇಡ್ಕರ್ ವಿದ್ಯಾಭ್ಯಾಸದಲ್ಲಿ ಅವರ ಪತ್ನಿ ರಮಾಬಾಯಿ ಪತಿಯ ವಿದ್ಯಾಭ್ಯಾಸಕ್ಕೆ ಹೇಗೆ ನೆರವಾದರು, ಸಾವಿತ್ರಿ ಬಾಫುಲೆ ಮೊದಲ ಶಾಲೆಯನ್ನು ಹೇಗೆ ಪ್ರಾರಂಭಿಸಿದರು, ಮನು ಧರ್ಮಶಾಸ್ತ್ರ, ಸಮಾಜ ಸುಧಾರಕರ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.ಈ ಕಾರ್ಯಕ್ರಮದಲ್ಲಿ ಇನ್ಸ್ಪೆಕ್ಟರ್ ಶಿವರಾಜ್, ವಕೀಲ ಶಿವಾರೆಡ್ಡಿ, ತಾಲೂಕು ಕಲ್ಯಾಣಾಧಿಕಾರಿ ಆರ್. ಸಕ್ಪಾಲ್, ವಿಸ್ತರಣಾಧಿಕಾರಿ ಎಸ್.ಬೇಬಿರಾಣಿ, ನಿಲಯ ಪಾಲಕರಾದ ಟಿ.ಎಂ.ಸುಮಿತ್ರಮ್ಮ, ಮೆಹಬೂಬ್ಪಾಷ, ನಿಲಯ ಮೇಲ್ವಿಚಾರಕ ಎನ್.ಹರಿಕೃಷ್ಣ ಉಪಸ್ಥಿತರಿದ್ದರು.