ಜನನ, ಮರಣ ಪ್ರಮಾಣಪತ್ರ ಎಚ್ಚರಿಕೆಯಿಂದ ನೀಡಿ-ಜಿಪಂ ಸಿಇಒ

| Published : Dec 09 2023, 01:15 AM IST

ಜನನ, ಮರಣ ಪ್ರಮಾಣಪತ್ರ ಎಚ್ಚರಿಕೆಯಿಂದ ನೀಡಿ-ಜಿಪಂ ಸಿಇಒ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಕ್ತಿಯ ಜನನ ಮತ್ತು ಮರಣ ಪ್ರಮಾಣಪತ್ರಗಳು ಸದ್ಯದ ಹಾಗೂ ಭವಿಷ್ಯದ ದಿನಗಳಲ್ಲಿ ಮಹತ್ವದ ದಾಖಲೆಗಳಾಗಿವೆ. ಜನನ ಪ್ರಮಾಣಪತ್ರ ಪಡೆಯುವುದು ಮಗುವಿನ ಮೊದಲ ಹಕ್ಕಾಗಿದೆ. ಮಗುವನ್ನು ಶಾಲೆಗೆ ಸೇರಿಸಲು, ಉದ್ಯೋಗಕ್ಕಾಗಿ, ಆಧಾರ್ ಕಾರ್ಡ್ ಪಡೆಯಲು, ವಿಮಾ ಪಾಲಿಸಿ ಪಡೆಯಲು, ಪಡಿತರ ಚೀಟಿ ಪಡೆಯಲು, ವಿವಾಹ ನೋಂದಣಿ ಮುಂತಾದ ಸಂದರ್ಭಗಳಲ್ಲಿ ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಅದರಂತೆ ವಿಮಾ ಹಣ ಪಡೆಯಲು, ಆಸ್ತಿಯ ಹಕ್ಕನ್ನು ನಿರ್ಧಾರ ಮಾಡಲು, ಪಿಂಚಣಿ ಹಕ್ಕು ಹೊಂದಲು, ಅನುಕಂಪದ ಆಧಾರದ ನೌಕರಿ, ಅಪಘಾತ ಪರಿಹಾರ ಪಡೆಯಲು, ಮುಂತಾದ ವಿಷಯಗಳಲ್ಲಿ ಮರಣ ಪ್ರಮಾಣದ ಅಗತ್ಯ ಹಾಗೂ ಕಡ್ಡಾಯವಿದೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಜನನ, ಮರಣ ನೋಂದಣಿ ಪ್ರಮಾಣಪತ್ರಗಳು ಮಹತ್ವದ ದಾಖಲೆಗಳಾಗಿದ್ದು, ಅವುಗಳನ್ನು ನೀಡುವಾಗ ಅಧಿಕಾರಿಗಳು, ವಿಷಯ ನಿರ್ವಾಹಕರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಅಧಿಕಾರಿಗಳಿಗೆ ತಿಳಿಸಿದರು.ನಗರದ ಜಿಪಂನ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜನನ, ಮರಣ ನೋಂದಣಿ (ತಿದ್ದುಪಡಿ) ನಿಯಮಗಳು, ಕಾರ್ಯಾಚರಣೆ ವಿಧಾನಗಳ ಕುರಿತು ಪಿಡಿಒಗಳು, ಕಂಪ್ಯೂಟರ್ ಆಪರೇಟರ್‌ಗಳಿಗೆ ಆಯೋಜಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವ್ಯಕ್ತಿಯ ಜನನ ಮತ್ತು ಮರಣ ಪ್ರಮಾಣಪತ್ರಗಳು ಸದ್ಯದ ಹಾಗೂ ಭವಿಷ್ಯದ ದಿನಗಳಲ್ಲಿ ಮಹತ್ವದ ದಾಖಲೆಗಳಾಗಿವೆ. ಜನನ ಪ್ರಮಾಣಪತ್ರ ಪಡೆಯುವುದು ಮಗುವಿನ ಮೊದಲ ಹಕ್ಕಾಗಿದೆ. ಮಗುವನ್ನು ಶಾಲೆಗೆ ಸೇರಿಸಲು, ಉದ್ಯೋಗಕ್ಕಾಗಿ, ಆಧಾರ್ ಕಾರ್ಡ್ ಪಡೆಯಲು, ವಿಮಾ ಪಾಲಿಸಿ ಪಡೆಯಲು, ಪಡಿತರ ಚೀಟಿ ಪಡೆಯಲು, ವಿವಾಹ ನೋಂದಣಿ ಮುಂತಾದ ಸಂದರ್ಭಗಳಲ್ಲಿ ಜನನ ಪ್ರಮಾಣ ಪತ್ರ ಕಡ್ಡಾಯವಾಗಿದೆ. ಅದರಂತೆ ವಿಮಾ ಹಣ ಪಡೆಯಲು, ಆಸ್ತಿಯ ಹಕ್ಕನ್ನು ನಿರ್ಧಾರ ಮಾಡಲು, ಪಿಂಚಣಿ ಹಕ್ಕು ಹೊಂದಲು, ಅನುಕಂಪದ ಆಧಾರದ ನೌಕರಿ, ಅಪಘಾತ ಪರಿಹಾರ ಪಡೆಯಲು, ಮುಂತಾದ ವಿಷಯಗಳಲ್ಲಿ ಮರಣ ಪ್ರಮಾಣದ ಅಗತ್ಯ ಹಾಗೂ ಕಡ್ಡಾಯವಿದೆ. ಇವುಗಳನ್ನು ನೀಡುವಾಗ ಸಕ್ಷಮ ಪ್ರಾಧಿಕಾರಗಳು ಪೂರಕ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ನಿಗದಿತ ಅವಧಿಯೊಳಗೆ ಪ್ರಮಾಣ ಪತ್ರ ನೀಡಬೇಕು. ಬೇಜವಾಬ್ದಾರಿ ತೋರದೆ, ಲೋಪದೋಷಗಳಿಲ್ಲದಂತೆ ಖಾತ್ರಿ ಪಡಿಸಿಕೊಂಡು ಪ್ರಮಾಣಪತ್ರ ವಿತರಿಸಬೇಕು ಎಂದು ಪಿಡಿಒಗಳಿಗೆ ಸೂಚನೆ ನೀಡಿದರು.ಎಡಿಸಿ ಸಾವಿತ್ರಿ ಬಿ.ಕಡಿ ಮಾತನಾಡಿ, ಜನನ ಮರಣ ಮೂಲ ಆಧಾರಗಳನ್ನು ಪರಿಶೀಲಿಸಿ ನೋಂದಣಿ ಪ್ರಮಾಣಪತ್ರ ನೀಡಬೇಕು. ಜವಾಬ್ದಾರಿ ವಹಿಸಿ ಕೆಲಸ ಮಾಡಬೇಕು ಎಂದರು.ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಮಾತನಾಡಿದರು.ಬೆಂಗಳೂರಿನ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಜನನ ಮರಣ ಮುಖ್ಯ ನೋಂದಣಾಧಿಕಾರಿ ಕಚೇರಿಯ ರಾಜ್ಯ ಸಮಾಲೋಚಕ ಮಧುಕುಮಾರ, ಖಜಾನೆ ಇಲಾಖೆಯ ಮುಖ್ಯ ಲೆಕ್ಕ ಅಧಿಕಾರಿ ಮಲ್ಲಪ್ಪ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಿದರು.ತರಬೇತಿ ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಮುಖ್ಯ ಲೆಕ್ಕಾಧಿಕಾರಿ ಅಮೀನ್‌ಸಾಬ್ ಅತ್ತಾರ, ಮುಖ್ಯ ಯೋಜನಾಧಿಕಾರಿ ಡಿ.ಮಂಜುನಾಥ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸುಧಾಕರ ಎ.ಮಾನೆ ಸೇರಿದಂತೆ ಜಿಲ್ಲೆಯ ಪಿಡಿಒಗಳು, ಕಂಪ್ಯೂಟರ್ ಆಪರೇಟರ್‌ಗಳು ಇದ್ದರು.