ಸಾರಾಂಶ
ನರೇಗಾ ಯೋಜನೆಯಡಿ ಕೆಲಸ ಮಾಡುವಂತೆ ಪ್ರೇರೇಪಿಸಲು ಜನ ಜಾಗೃತಿ ಮೂಡಿಸಬೇಕು ಹಾಗೂ ನಮೂನೆ-6ರಲ್ಲಿ ಕೆಲಸಕ್ಕಾಗಿ ಬೇಡಿಕೆ ಪಡೆದುಕೊಂಡ ಬಡ ಕುಟುಂಬಗಳಿಗೆ ಕೆಲಸ ನೀಡಿ ಆರ್ಥಿಕ ಸಹಾಯ ಮಾಡಬೇಕು.
ಕನ್ನಡಪ್ರಭ ವಾರ್ತೆ ಯಾದಗಿರಿ
ಹಿಂದಿನ ವರ್ಷದ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ನರೇಗಾ ಯೋಜನೆಯಡಿ ಕೆಲಸ ಮಾಡುವಂತೆ ಪ್ರೇರೇಪಿಸಲು ಜನ ಜಾಗೃತಿ ಮೂಡಿಸಬೇಕು ಹಾಗೂ ನಮೂನೆ-6ರಲ್ಲಿ ಕೆಲಸಕ್ಕಾಗಿ ಬೇಡಿಕೆ ಪಡೆದುಕೊಂಡ ಬಡ ಕುಟುಂಬಗಳಿಗೆ ಕೆಲಸ ನೀಡಿ ಆರ್ಥಿಕ ಸಹಾಯ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರೀಮಾ ಪನ್ವಾರ ತಿಳಿಸಿದರು.ಇಲ್ಲಿನ ತಾಲೂಕು ಪಂಚಾಯ್ತಿ ಕಾರ್ಯಾಲಯದ ಸಭಾಂಗಣದಲ್ಲಿ ಮನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿ, ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರಿಗೆ ನಿರಂತರವಾಗಿ ಕೆಲಸ ನೀಡಲು ಸೂಚಿಸಿದರು.
ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಮನರೇಗಾ ಯೋನೆಯಡಿಯಲ್ಲಿ ಏ.1ರಿಂದ ಇಲ್ಲಿಯವರೆಗೆ ಪ್ರತಿ ಗ್ರಾಮ ಪಂಚಾಯ್ತಿಗೆ ಕೂಲಿ ಕಾರ್ಮಿಕರಿಗೆ ಕೆಲಸ ಒದಗಿಸಿಕೊಡಲು ಗುರಿ ನೀಡಿದ್ದು, ಗುರಿಗೆ ಅನುಗುಣವಾಗಿ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಕೆಲಸ ನೀಡಿದ ಕುರಿತು ಅವರು ಪರಿಶೀಲಿಸಿದರು. ಗುರಿ ಸಾಧನೆ ಮಾಡದೆ ಇರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಗತಿ ಸಾಧಿಸುವಂತೆ ಸೂಚಿಸಿದರು.ಬೇಸಿಗೆಯ ಸಮಯದಲ್ಲಿ ಕೂಲಿ ಕಾರ್ಮಿಕರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಕೆಲಸ ಇರುವುದಿಲ್ಲ. ಈ ಸಮಯದಲ್ಲಿ ಬಡ ಕುಟುಂಬಗಳಿಗೆ ನರೇಗಾ ಯೋಜನೆಯಡಿಯಲ್ಲಿ ಕೆಲಸ ಒದಗಿಸಿ ಕಾಮಗಾರಿ ಯೋಜನೆ ನಿಯಮಾನುಸಾರವಾಗಿ ಅನುಷ್ಠಾನಗೊಳಿಸುವಂತೆ ತಿಳಿಸಿದರು.
ಶಿಶುಪಾಲನಾ ಕೇಂದ್ರ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಪ್ರಾರಂಭಿಸಿ, ಕೂಲಿ ಕೂಲಿಕಾರ್ಮಿಕರ ಮಕ್ಕಳಿಗೆ ಉತ್ತಮವಾದ ಪೌಷ್ಟಿಕ ಆಹಾರ ನೀಡುವಂತೆ ಸೂಚಿಸಿದರು.ಅಕಾಲಿಕ ಮಳೆಯಾಗಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರಿನ ಸ್ವಚ್ಛತೆ ಕಾಪಾಡುವುದರೊಂದಿಗೆ ಪೈಪ್ ಲಿಕೆಜ್ ಆಗದಂತೆ ನೋಡಿಕೊಳ್ಳಬೇಕು. ಮತ್ತು ಕುಡಿಯುವ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು, ಚರಂಡಿ ಸ್ವಚ್ಛಗೊಳಿಸುವುದು, ನೈರ್ಮಲ್ಯ ಕಾಪಾಡುವ ಕೆಲಸ ಕಟ್ಟುನಿಟ್ಟಾಗಿ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಯೋಜನಾ ನಿರ್ದೆಶಕ ಬಲವಂತ ರಾಠೋಡ್, ಯಾದಗಿರಿ ಮತ್ತು ಗುರುಮಠಕಲ್ ಕಾರ್ಯನಿರ್ವಾಹಕ ಅಧಿಕಾರಿ ವಿಲಾಸ್ ರಾಜ್, ಸಹಾಯಕ ನಿರ್ದೆಶಕ ಮಲ್ಲಣ್ಣ ಸಂಕನೂರ, ರಾಮಚಂದ್ರ ಮಸೂದೆ, ವಿಜಯಲಕ್ಷ್ಮಿ ಶಹಬಾದಿ, ಸಹಾಯಕ ಲೆಕ್ಕಾಧಿಕಾರಿ ಕಾಶಿನಾಥ, ತಾಲೂಕು ಯೋಜನಾ ಅಧಿಕಾರಿ ಶಶಿಧರ ಹಿರೇಮಠ, ವ್ಯವಸ್ಥಾಪಕ ಶಿವರಾಯ ಸೇರಿದಂತೆ ಇತರರಿದ್ದರು.