ಸಾರಾಂಶ
ಬಯಲು ಸೀಮೆಯ ರೈತರ ನೆರವಿಗಾಗಿ ಉಚಿತ ವಿದ್ಯುತ್ ಕಲ್ಪಿಸಲಾಗಿತ್ತು. ಆದರೆ ಸರ್ಕಾರ ಈಗ ಈ ಯೋಜನೆ ರದ್ದುಗೊಳಿಸಿರುವುದರಿಂದ ಸಮಸ್ಯೆ ಎದುರಾಗಿದೆ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಸರ್ಕಾರದ ಖರ್ಚಿನಲ್ಲಿಯೇ ರೈತರ ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಜೆಟ್ನಲ್ಲಿ ಹಣ ಮೀಸಲಿಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಇಲ್ಲಿನ ಬೆಸ್ಕಾಂ ಕಚೇರಿ ಆವರಣದಲ್ಲಿ ಸೋಮವಾರ ಮನವಿ ಸಲ್ಲಿಸಿ, ಈ ಹಿಂದೆ ಕೃಷಿ ಪಂಪುಸೆಟ್ ಅಕ್ರಮ ಸಕ್ರಮಕ್ಕಾಗಿ ರೈತರಿಂದ 25 ಸಾವಿರ ಪಡೆದುಕೊಂಡು ಕಂಬ, ವೈರ್, ಟಿ ಸಿ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ಸರ್ಕಾರ ಈ ಯೋಜನೆ ರದ್ದು ಮಾಡಿದೆ ಎನ್ನುವ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಯಲು ಸೀಮೆಯ ರೈತರ ನೆರವಿಗಾಗಿ ಉಚಿತ ವಿದ್ಯುತ್ ಕಲ್ಪಿಸಲಾಗಿತ್ತು. ಆದರೆ ಸರ್ಕಾರ ಈಗ ಈ ಯೋಜನೆ ರದ್ದುಗೊಳಿಸಿರುವುದರಿಂದ ಸಮಸ್ಯೆ ಎದುರಾಗಿದೆ. ಸರ್ಕಾರ ಕೂಡಲೇ ಹಿಂದಿನಂತೆಯೇ ಅಕ್ರಮ ಸಕ್ರಮ ಯೋಜನೆ ಮುಂದುವರಿಸಬೇಕು. ಹಿಂದೆ ನೀಡಿದಂತೆ ರೈತರ ನೆರವಿಗೆ ಬೆಸ್ಕಾಂಗೆ ಅನುದಾನ ಒದಗಿಸಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡಿ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ.ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ತಾಲೂಕು ಅಧ್ಯಕ್ಷ ಕೋನಸಾಗರ ಮಂಜುನಾಥ, ಕೋನಸಾಗರ ಈರ ಬೊಮ್ಮಯ್ಯ, ಮಂಜಣ್ಣ, ಪಿ.ಟಿ.ಹಟ್ಟಿ ಚಂದ್ರಣ್ಣ, ಡಿ.ಬಿ. ಕೃಷ್ಣ ಮೂರ್ತಿ, ಕನಕ ಶಿವಮೂರ್ತಿ, ಕುರಾಕಲ ಹಟ್ಟಿ ನಾಗರಾಜ, ಯುವ ಘಟಕದ ಗೌತಮ್ ಇದ್ದರು.