ಮಹಿಳಾ ಸಬಲೀಕರಣ ಉತ್ತೇಜಿಸುವ ದೃಷ್ಠಿಯಿಂದ ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳು ಗರ್ಭಕೋಶದ ಕ್ಯಾನ್ಸರ್‌ ತಡೆಗಟ್ಟುವ ನಿಟ್ಟಿನಲ್ಲಿ ಎಚ್‌ಪಿವಿ ಚುಚ್ಚುಮದ್ದನ್ನು ಉಚಿತವಾಗಿ ನೀಡಲೇಬೇಕಿದೆ. ಕುಟುಂಬದಲ್ಲಿ ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆ ಬಹುಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಉತ್ತಮ ನಿರ್ಧಾರ ಕೈಗೊಂಡು ಚುಚ್ಚುಮದ್ದು ಕೊಡಿಸಲೇಬೇಕು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಮಹಿಳಾ ಸಬಲೀಕರಣ ಉತ್ತೇಜಿಸುವ ದೃಷ್ಠಿಯಿಂದ ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳು ಗರ್ಭಕೋಶದ ಕ್ಯಾನ್ಸರ್‌ ತಡೆಗಟ್ಟುವ ನಿಟ್ಟಿನಲ್ಲಿ ಎಚ್‌ಪಿವಿ ಚುಚ್ಚುಮದ್ದನ್ನು ಉಚಿತವಾಗಿ ನೀಡಲೇಬೇಕಿದೆ. ಕುಟುಂಬದಲ್ಲಿ ಹೆಣ್ಣುಮಕ್ಕಳ ಆರೋಗ್ಯ ರಕ್ಷಣೆ ಬಹುಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಗಳು ಉತ್ತಮ ನಿರ್ಧಾರ ಕೈಗೊಂಡು ಚುಚ್ಚುಮದ್ದು ಕೊಡಿಸಲೇಬೇಕು ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಒತ್ತಾಯಿಸಿದರು.

ತಾಲೂಕಿನ ಗುಡ್ಡೇನಹಳ್ಳಿಯಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಆವರಣದಲ್ಲಿ ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಹಾಗೂ ಹೆಲ್ತ್‌ಕೇರ್ ಫೌಂಡೇಶನ್ ಸಹಕಾರದಲ್ಲಿ ೯ರಿಂದ ೧೪ ವರ್ಷದವರೆಗಿನ ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್‌ಪಿವಿ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳು ಉಚಿತವಾಗಿ ಚುಚ್ಚುಮದ್ದು ಕೊಡಲು ಇನ್ನೂ ಚಿಂತಿಸುತ್ತಿರುವ ಸಂದರ್ಭದಲ್ಲಿ ಹೆಣ್ಣುಮಕ್ಕಳ ಆರೋಗ್ಯ ದೃಷ್ಠಿಯಿಂದ ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ಹಾಗೂ ಹೆಲ್ತ್ ಕೇರ್ ಫೌಂಡೇಶನ್ ಸಹಕಾರದಲ್ಲಿ ಉಚಿತವಾಗಿ ಚುಚ್ಚುಮದ್ದು ನೀಡುವ ವ್ಯವಸ್ಥೆ ಮಾಡಿದ್ದೇವೆ. ಇಂದು ೩೦೦ ಮಕ್ಕಳಿಗೆ ಚುಚ್ಚುಮದ್ದು ನೀಡಲಾಗುತ್ತದೆ, ಇನ್ನೂ ಹೆಚ್ಚಿನ ಮಕ್ಕಳ ನೋಂದಣಿಯಾದರೇ ಇನ್ನೊಂದು ವಾರದಲ್ಲಿ ನೀಡುತ್ತೇವೆ ಎಂದರು.

ಅರಕಲಗೂಡು ವಿಭಾಗದಲ್ಲಿ ೧೪ ಸಾವಿರ ಮಕ್ಕಳು ಇದ್ದಾರೆ ಮತ್ತು ಹಳ್ಳಿಮೈಸೂರು ಭಾಗದಲ್ಲೂ ೪ ಸಾವಿರ ಮಕ್ಕಳಿದ್ದೂ, ಇವರುಗಳಿಗೂ ಚುಚ್ಚುಮದ್ದು ನೀಡುವ ಉದ್ದೇಶವಿದೆ. ೩ ಕೋಟಿ ರುಪಾಯಿಗೂ ಹೆಚ್ಚು ಹಣ ಖರ್ಚಾಗುತ್ತೆ, ಸಾಲ ಮಾಡಿಯಾದರೂ ಹೆಣ್ಣುಮಕ್ಕಳ ಕ್ಯಾನ್ಸರ್ ನಿರ್ಮೂಲನೆಗೆ ಚುಚ್ಚುಮದ್ದು ನೀಡಿಸುತ್ತೇವೆ ಎಂದರು. ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ವತಿಯಿಂದ ಆರೋಗ್ಯ, ಶಿಕ್ಷಣ, ಕಲೆ, ಕ್ರೀಡೆ ಹಾಗೂ ಭರತನಾಟ್ಯ ಕಲೆಯನ್ನು ಉತ್ತೇಜಿಸಲಾಗುತ್ತಿದೆ. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸದೃಢಗೊಳಿಸುವ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತೇಜಿಸಿದ್ದಲ್ಲಿ ಅವರುಗಳ ಏಕಾಗ್ರತೆ ಹೆಚ್ಚುತ್ತದೆ, ಇದರಿಂದ ಅವರುಗಳ ಭವಿಷ್ಯ ಉತ್ತಮವಾಗಲಿದೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತೇಜಿಸುವ ದೃಷ್ಠಿಯಿಂದ ಉಚಿತ ತರಬೇತಿ ಶಿಬಿರ ಆಯೋಜನೆ ಮಾಡಲಾಗಿದೆ ಎಂದು ಸಮಾಜ ಸೇವಾ ಕಾರ್ಯಗಳ ಕುರಿತು ಮಾಹಿತಿ ನೀಡಿದರು. ಆಶಾ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ವಿತರಿಸುವ ಸಲುವಾಗಿ ೪೦೦ ಆರೋಗ್ಯ ಕಿಟ್ ತರಿಸಲಾಗಿತ್ತು. ಒಂದು ಕಿಟ್ಟಿನ ಬೆಲೆ ೪೯೦೦ ರು. ನಮೂದಿಸಿದೆ, ಆದರೆ ೧೩೦೦ ರು. ನೀಡಿ ತರಿಸಿದ್ದೇನೆ, ಒಂದು ಕಿಟ್‌ನಲ್ಲಿ ಎಷ್ಟು ಲೂಟಿ ಮಾಡುತ್ತಿದ್ದಾರೆ ಅಲ್ವ ಎಂದು ಪ್ರಶ್ನಿಸಿದರು.

ಹಾಸನದ ಖ್ಯಾತ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ವೈದ್ಯೆ ಡಾ. ಭವ್ಯ ಮಾತನಾಡಿ, ಪ್ರತಿದಿನ ೨೦೦ ಮಹಿಳೆಯರು ಗಭಕೋಶದ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ತಪಾಸಣೆ ಮಾಡಿಸುವುದರಿಂದ ದುರಂತವನ್ನು ತಡೆಯಲು ಸಾದ್ಯವಾಗುತ್ತದೆ ಮತ್ತು ಈ ರೀತಿಯ ಕಾರ್ಯಕ್ರಮಗಳಲ್ಲಿ ಉಚಿತವಾಗಿ ನೀಡುವ ಚುಚ್ಚುಮದ್ದು ಪಡೆಯಲು ಪೋಷಕರು ಮಕ್ಕಳನ್ನು ಕರೆತರಬೇಕು, ಕಾರ್ಯಕ್ರಮ ಆಯೋಜಕರೇ ಬನ್ನ ಬನ್ನಿ ಎಂದು ಕರೆಯೋದು ಎಷ್ಟು ಸರಿ ಎಂದು ಪ್ರಶ್ನಿಸಿ, ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಸುದೀರ್ಘವಾಗಿ ಮಾತನಾಡಿದರು.

ವಿವಿಐಪಿಗಳಿಗೆ ಏನು ಕೋಡು ಇದೆಯಾ?:

ಚಿತ್ರನಟಿ ರನ್ಯಾರಾವ್ ಅವರು ಒಂದೇ ದಿನ ೧೪ ಕೆಜಿ ಚಿನ್ನವನ್ನು ದುಬೈನಿಂದ ಕಳ್ಳತನ ಮಾಡಿಕೊಂಡು ಭಾರತಕ್ಕೆ ತರುತ್ತಾರೆ ಮತ್ತು ಅವರು ಒಂದು ವರ್ಷದಲ್ಲಿ ೨೮ ಸಲ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ಕನಿಷ್ಠ ೧೦ ಕೇಜಿ ಎಂದರೂ ಒಂದು ವರ್ಷಕ್ಕೆ ೨೮೦ ಕೆಜಿ ಚಿನ್ನವನ್ನು ಒಬ್ಬರು ಕಳ್ಳಸಾಗಣೆ ಮಾಡಿರೋದು, ಕೇಂದ್ರ ಸರ್ಕಾರದ ಕಸ್ಟಮ್ಸ್ ಅಧಿಕಾರಿಗಳು, ವಿಮಾನ ನಿಲ್ದಾಣದಲ್ಲಿ ಅಥಾರಿಟಿ ಅಧಿಕಾರಿಗಳು ಇರ್ತಾರೆ. ಆದರೆ ಪ್ರೋಟೋಕಲ್ ಅಡಿಯಲ್ಲಿ ವಿಐಪಿ, ವಿವಿಐಪಿ ಹೆಸರಿನಲ್ಲಿ ಲೂಟಿ ಮಾಡುವುದನ್ನು ಯಾರೂ ಸಹಿಸಬಾರದು, ಈ ರೀತಿಯ ಅಕ್ರಮಗಳು ರಾಜಾರೋಷವಾಗಿ ನಡೆಯುತ್ತಿದ್ದರೂ ಕೂಡ ಇದಕ್ಕೆ ಕಡಿವಾಣ ಬೀಳುತ್ತಿಲ್ಲ, ಇದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ, ವಿಐಪಿ, ವಿವಿಐಪಿಗಳಿಗೆ ಏನು ಎರಡು ಕೋಡು ಇದೆಯಾ, ಕಾನೂನು ಎಲ್ಲರಿಗೂ ಒಂದೇ ಎಂದು ಆಕ್ರೋಶದಿಂದ ನುಡಿದರು. ಕಾನೂನು ರೂಪಿಸಿದವರು ಹಾಗೂ ಕಾನೂನಿಗೆ ರಕ್ಷಣೆ ಕೊಡಬೇಕಾದವರೇ ಈ ರೀತಿಯ ಕೃತ್ಯದಲ್ಲಿ ಶಾಮೀಲಾಗಿದ್ದಾರೆ ಎಂಬುದು ಪ್ರಜಾಪ್ರಭುತ್ವದ ದುರಂತವೆಂದರು. ಬಲಾಢ್ಯರು ಹಾಗೂ ಹಣವಂತರಿಗೆ ಒಂದು ಕಾನೂನು ಮತ್ತು ಬಡವರು ಹಾಗೂ ಅಮಾಯಕರಿಗೆ ಒಂದು ಕಾನೂನು, ಬಡವರು ಇಂದಿನ ಕಾನೂನಿನ ವ್ಯವಸ್ಥೆಯಲ್ಲಿ ನಲುಗಿ ಹೋಗಿದ್ದಾರೆ, ಈ ವ್ಯವಸ್ಥೆ ಹೋದಾಗ ಮಾತ್ರ ಯಶಸ್ವಿ ಪ್ರಜಾಪ್ರಭುತ್ವ ಆಗುತ್ತದೆ ಎಂದರು. ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮಹದೇವಪ್ಪ, ಸಿಆರ್‌ಪಿ ನಟೇಶ್, ತಾ.ಪಮ. ಮಾಜಿ ಅಧ್ಯಕ್ಷ ಚಂದ್ರಶೇಖರಯ್ಯ ಇತರರು ಇದ್ದರು.