ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಮಹತ್ವ ನೀಡಿ-ಡಾ. ಈರಣ್ಣ ಹಳೇಮನಿ

| Published : Feb 09 2024, 01:46 AM IST

ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಮಹತ್ವ ನೀಡಿ-ಡಾ. ಈರಣ್ಣ ಹಳೇಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ, ಅದರಲ್ಲೂ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಪಾಲಕ ಪೋಷಕರು ನೀಡಬೇಕು ಎಂದು ಭಾರತೀಯ ಮಕ್ಕಳ ವೈದ್ಯರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ಈರಣ್ಣ ಹಳೇಮನಿ ಹೇಳಿದರು.

ಗದಗ: ಹೆಣ್ಣು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ, ಅದರಲ್ಲೂ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಪಾಲಕ ಪೋಷಕರು ನೀಡಬೇಕು ಎಂದು ಭಾರತೀಯ ಮಕ್ಕಳ ವೈದ್ಯರ ಸಂಘಟನೆಯ ಜಿಲ್ಲಾ ಅಧ್ಯಕ್ಷ ಡಾ. ಈರಣ್ಣ ಹಳೇಮನಿ ಹೇಳಿದರು.

ನಗರದ ಆಶ್ರಯ ಆಸ್ಪತ್ರೆಯ ಸಭಾಂಗಣದಲ್ಲಿ ಭಾರತೀಯ ಮಕ್ಕಳ ತಜ್ಞರ ಸಂಘಟನೆ ಶಾಖೆ, ಲಯನ್ಸ್ ಕ್ಲಬ್ ಆಫ್ ಗದಗ ಬೆಟಗೇರಿ ಮತ್ತು ಆಶ್ರಯ ವೈದ್ಯಕೀಯ ಮತ್ತು ಕೃಷಿ ಸಂಶೋಧನಾ ಟ್ರಸ್ಟ್ ಸಹಯೋಗದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಹೆಣ್ಣು ಮಗುವನ್ನು ಉಳಿಸಿ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಮಹಿಳೆ ಮತ್ತು ಹೆಣ್ಣು ಮಕ್ಕಳ ಆರೋಗ್ಯ ಸುಧಾರಣೆಗೆ ಸರ್ಕಾರ ಹಲವಾರು ಕಾರ್ಯಯೋಜನೆಗಳನ್ನು ರೂಪಿಸಿವೆ ಎಂದರಲ್ಲದೆ, ೯-೧೪ ವರ್ಷದ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಲಸಿಕೆಗಳನ್ನು ಕೇಂದ್ರ ಸರ್ಕಾರ ತರುವ ವಿಷಯ ಸ್ವಾಗತಾರ್ಹ ಎಂದರು.

ಆಶ್ರಯ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ. ಸುನೀತಾ ಕುರಡಗಿ ಮಾತನಾಡಿ, ಹೆಣ್ಣು ಮಗುವಿಗೆ ಸಮಾನ ಅವಕಾಶಗಳು ಮತ್ತು ಸಮಾನ ಹಕ್ಕುಗಳ ಪ್ರಾಮುಖ್ಯ ನೀಡುವುದು ಎಂದಿಗಿಂತ ಇಂದು ಅವಶ್ಯವಿದೆ. ಹೆಣ್ಣು ಮಗು ತನ್ನ ಪೂರ್ಣ ಸಾಮರ್ಥ್ಯವನ್ನು ಸಾಧಿಸಲು ಪ್ರೋತ್ಸಾಹ ನೀಡಬೇಕು ಎಂದು ಅವರು ಪಾಲಕ-ಪೋಷಕರಲ್ಲಿ ಮನವಿ ಮಾಡಿದರು.

ನಿತೀಶ್ ಸಾಲಿ ಅಧ್ಯಕ್ಷತೆ ವಹಿಸಿದ್ದರು. ಗದಗ ಬೆಟಗೇರಿಯ ಲಯನ್ಸ್ ಕ್ಲಬ್‌ನ ಮಂಜುನಾಥ ವೀರಲಿಂಗಯ್ಯಮಠ, ಎಸ್.ಡಿ. ಪಾಟೀಲ, ಅನಿಲ ಕುಷ್ಟಗಿ, ಲಯನ್ಸ್ ಕ್ಲಬ್ ಸದಸ್ಯರು, ಆಶ್ರಯ ಆಸ್ಪತ್ರೆಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು. ಡಾ. ಶ್ರೀಧರ ವಿ. ಕುರಡಗಿ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಪ್ರವೀಣ ವಾರಕರ ಕಾರ್ಯಕ್ರಮ ನಿರೂಪಿಸಿದರು.