ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೊಮ್ಮೆ ಗಾಣಿಗ ಸಮಾಜಕ್ಕೆ ಅನ್ಯಾಯವಾಗುತ್ತಲಿದ್ದು, ಕಳೆದ ಎಂಟು ದಶಕಗಳಿಂದ ಕಾಂಗ್ರೆಸ್ ಸರ್ಕಾರದಲ್ಲಿ ಗಾಣಿಗ ಸಮಾಜದ ಒಬ್ಬ ಶಾಸಕರೂ ಸಚಿವರಾಗಿಲ್ಲ. ಈ ಬಾರಿಯಾದರೂ ಸಮಾಜದ ಹಿರಿಯ ಶಾಸಕ ಲಕ್ಷ್ಮಣ ಸವದಿ ಸೇರಿ ಕನಿಷ್ಠ ಇಬ್ಬರು ಶಾಸಕರಿಗೆ ಸಚಿವ ಸ್ಥಾನ ನಿಡಬೇಕು ಎಂದು ಅಖಿಲ ಭಾರತ ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಾರಿಯಾದರೂ ರಾಜ್ಯ ಕಾಂಗ್ರೆಸ್ ಸರ್ಕಾರಲ್ಲಿ ಗಾಣಿಗ ಸಮಾಜಕ್ಕೆ ಪ್ರಾಧಾನ್ಯತೆ ಕೊಡಬೇಕು. ರಾಜ್ಯದಲ್ಲಿ 45 ಲಕ್ಷ ಜನಸಂಖ್ಯೆ ಹೊಂದಿರುವ ನಮ್ಮ ಸಮಾಜದ ಶಾಸಕರಾದ ಲಕ್ಷ್ಮಣ ಸವದಿ, ಬಿ.ಕೆ. ಸಂಗಮೇಶ ಹಾಗೂ ವೀರೇಂದ್ರ ಪಪ್ಪಿ ಇವರಲ್ಲಿ ಯಾರಾದರೂ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ಧರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಪಕ್ಷದ ಹಿರಿಯ ನಾಯಕರಿಗೆ ಒತ್ತಾಯಿಸಿದರು.

ಬಿಜೆಪಿಗೆ ರಾಜೀನಾಮೆ ನೀಡಿ ತಟಸ್ಥರಾಗಿದ್ದ ಲಕ್ಷ್ಮಣ ಸವದಿಯವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ಕೊಡುತ್ತೇವೆ ಎಂದು ಮನವೊಲಿಸಿ ಕಾಂಗ್ರೆಸ್‌ಗೆ ಕರೆತಂದು, ಈಗ ಅನ್ಯಾಯ ಮಾಡಲಾಗುತ್ತಿದೆ. ಲಕ್ಷ್ಮಣ ಸವದಿ ಕಾಂಗ್ರೆಸ್‌ಗೆ ಬಂದಿದ್ದರಿಂದ ಉತ್ತರ ಕರ್ನಾಟಕದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಚುನಾಯಿತರಾಗಿರುವುದು ಪಕ್ಷ ಗಮನಿಸಬೇಕು. ಸವದಿ ರವರ ಸೇವೆ ಹಾಗೂ ಹಿರಿತನ ನೋಡಿ ಸಚಿವ ಸ್ಥಾನ ಕೊಡಬೇಕು ಎಂದರು. ಎಲ್ಲಾ ಪಕ್ಷಗಳಲ್ಲೂ ಆಯಾ ಧರ್ಮ, ಆಯಾ ಜಾತಿಗೆ ಅನುಗುಣವಾಗಿ ಸಚಿವಸ್ಥಾನ ಕೊಡುವ ರೂಢಿ ಇವುದರಿಂದ ಕಾಂಗ್ರೆಸ್‌ನಲ್ಲಿಯೂ ಗಾಣಿಗ ಸಮಾಜಕ್ಕೆ ಸಚಿವ ಸ್ಥಾನ ಕೊಡಬೇಕು ಎಂದರು. ಒಂದುವೇಳೆ ಲಕ್ಷ್ಮಣ ಸವದಿಯವರನ್ನು ಸಚಿವ ಸ್ಥಾನದಿಂದ ಕೈಬಿಟ್ಟರೆ ರಾಜ್ಯಾದ್ಯಂತ ಸಮಾಜದ ಜನರೊಂದಿಗೆ ಚರ್ಚಿಸಿ, ಮುಂದಿನಬಾರಿ ಗಟ್ಟಿ ನಿರ್ಧಾರ ಮಾಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಬಿ.ಬಿ.ಪಾಸೋಡಿ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಎಂಟು ದಶಕವಾದರೂ ರಾಜ್ಯದಲ್ಲಿ ನಮ್ಮ ಸಮಾಜದಲ್ಲಿ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಈಗಲಾದರೂ ಶಾಸಕ ಲಕ್ಷ್ಮಣ ಸವದಿ ಸೇರಿ ಸಮಾಜದ ಇಬ್ಬರಿಗೆ ಸಚಿವ ಸ್ಥಾನ ನೀಡಲೇಬೇಕು‌ ಎಂದು ಹಕ್ಕೊತ್ತಾಯಿಸಿದರು. ಎಸ್.ಎಸ್.ಶಿರಾಡೋಣ ಮಾತನಾಡಿ, ಸತತವಾಗಿ ಗಾಣಿಗ ಸಮಾಜ ತುಳಿತಕ್ಕೊಳಗಾಗುತ್ತಿದೆ. ಲಕ್ಷ್ಮಣ ಸವದಿಯವರನ್ನು ಮಂತ್ರಿ ಮಾಡುತ್ತೇವೆ ಎಂದು ಕಾಂಗ್ರೆಸ್‌ಗೆ ಕರೆತಂದಿದ್ದು ಮರೆಯದೆಗೀ ಬಾರಿ ಸವರನ್ನು ಸಚಿವರನ್ನಾಗಿಸಲೇಬೇಕು ಎಂದು ಒತ್ತಾಯಿಸಿದರು.


ಸುದ್ದಿಗೋಷ್ಠಿಯಲ್ಲಿ ಸಮಾಜದ ಹಿರಿಯರಾದ ಡಾ.ಅಶೋಕ ತರಡಿ, ಎಸ್.ಜಿ.ಪಾಟೀಲ, ಬಾಬು ಸಜ್ಜನ, ಶರಣಪ್ಪ ಯಕ್ಕುಂಡಿ, ರಾಕೇಶ ಕಲ್ಲೂರ ಇದ್ದರು.---

ಸಚಿವ ಸಂಪುಟ ಪುನರ್‌ ರಚನೆಯಾಗಿರುವುದರಿಂದ ಇನ್ನೂ 19 ಜನರಿಗೆ ಸಚಿವಸ್ಥಾನ ಕೊಡಬೇಕಿದ್ದು, ಅದರಲ್ಲಿ ಸವದಿ ರವರಿಗೆ ಸ್ಥಾನಮಾನ ಕೊಡುವ ಭರವಸೆಯನ್ನು ಸಿಎಂ ಅವರು ಕೊಟ್ಟಿದ್ದಾರೆ ಎಂದು ಲಕ್ಷ್ಮಣ ಸವದಿ ನಮಗೆ ತಿಳಿಸಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಕೊಡದಿದ್ದರೆ ಗಾಣಿಗ ಸಮಾಜಕ್ಕಾಗಲಿ ಅಥವಾ ಲಕ್ಷ್ಮಣ ಸವದಿಯವರಿಗಾಗಲಿ ಕಾಂಗ್ರೆಸ್ ಅನಿವಾರ್ಯವಲ್ಲ. ಸಮಾಜದ ಜನತೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ಧಾರೆ.

- ಮಲ್ಲಿಕಾರ್ಜುನ ಲೋಣಿ ರಾಜ್ಯಾಧ್ಯಕ್ಷರು ಅಖಿಲ ಭಾರತ ಗಾಣಿಗ ಸಮಾಜ