ಬಂಗಾರಪೇಟೆ: ಮೀಸಲು ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಎರಡನೇ ಸುತ್ತಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು
ಬಂಗಾರಪೇಟೆ: ಮೀಸಲು ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಎರಡನೇ ಸುತ್ತಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಗಾಣಿಗರ ಸಂಘ ಕಾಂಗ್ರೆಸ್ ಹೈಕಮಾಂಡ್ರನ್ನು ಒತ್ತಾಯಿಸಿದೆ.
ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶಾಸಕರು ಸಲ್ಲಿಸಿರುವ ಸೇವೆ ಗಮನಾರ್ಹ. ಕ್ಷೇತ್ರದಲ್ಲಿ ಸೌಕರ್ಯ, ಶಿಕ್ಷಣ, ಕುಡಿವ ನೀರು ಸೇರಿ ನಾನಾ ಅಭಿವೃದ್ಧಿ ಕಾಮಗಾರಿ ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಜಿಲ್ಲೆಯಲ್ಲಿರುವ ನಾಲ್ವರು ಕಾಂಗ್ರೆಸ್ ಶಾಸಕರ ಪೈಕಿ ಇವರು ಹಿರಿಯ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆನ್ನು ಭದ್ರಕೋಟೆಯಾಗಿ ರೂಪಿಸಿ ಪ್ರತಿಪಕ್ಷಗಳಿಗೆ ನೆಲೆ ಇಲ್ಲದಂತೆ ಶ್ರಮಿಸಿದ್ದಾರೆ. ಇದರೊಟ್ಟಿಗೆ ಎಲ್ಲಾ ಪರ ಸಮುದಾಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸಮುದಾಯದ ಮುಖಂಡರಿಗೆ ಸ್ಥಾನಮಾನವನ್ನು ಕಲ್ಪಿಸಿದ್ದಾರೆ ಎಂದು ಗಾಣಿಗರ ಸಂಘದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.ಇಂತಹ ಶಾಸಕರಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಸಚಿವ ಸ್ಥಾನ ನೀಡಲು ಒತ್ತಡ ಇತ್ತಾದರೂ ಮುಂದಿನ ಸಂಪುಟ ಪುನರಾಚನೆಯಲ್ಲಿ ಖಚಿತವಾಗಿ ಸಚಿವ ಸ್ಥಾನ ಕೊಡಲಾಗುವುದು ಎಂದು ಹೈಕಮಾಂಡ್ ಭರವಸೆ ನೀಡುವ ಮೂಲಕ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಮಾಡಿದ್ದರು. ಈಗ ಹೈಕಮಾಂಡ್ ನೀಡಿದ ಭರವಸೆಯಂತೆ ಸಚಿವ ಸ್ಥಾನ ನೀಡಬೇಕು. ಜಿಲ್ಲೆಯವರಿಗೆ ಸಚಿವ ಸ್ಥಾನ ನೀಡದೆ ಎಲ್ಲಾ ಸರ್ಕಾರಗಳು ಹೊರಗಿನವರಿಗೆ ಅವಕಾಶ ನೀಡುವ ಮೂಲಕ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಈ ತಾರತಮ್ಯವನ್ನು ಸರಿಪಡಿಸಲು ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಜನಪರ ಹಾಗೂ ಅಭಿವೃದ್ಧಿ ಕಾರ್ಯನಿರ್ವಹಿಸುತ್ತಿರುವ ಚಿಂತನೆಯೊಂದಿಗೆ ನಾರಾಯಣಸ್ವಾಮಿಗೆ ಸಚಿವ ಸ್ಥಾನ ದೊರೆತರೆ ರಾಜ್ಯದ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಗಾಣಿಗ ಸಂಘ ಅಧ್ಯಕ್ಷ ಜಿ.ಆರ್ ರಘುನಾಥ್ ಶೆಟ್ಟಿ, ಸಮಾಜ ಸೇವಕ ಎ.ಬಾಬು, ಕಸಾಪ ತಾಲೂಕು ಅಧ್ಯಕ್ಷ ಆರ್. ಅಶ್ವತ್, ಜಿಎನ್ ರಮೇಶ್, ಮಧುಸೂದನ್, ಮುನಿಸ್ವಾಮಿ ಶೆಟ್ಟಿ ಲಕ್ಷ್ಮೀನಾರಾಯಣ ಶೆಟ್ಟಿ, ಎಸ್.ಎಂ.ಕುಮಾರ್, ಬಿ.ವಿ. ಕೃಷ್ಣ ಶೋಭನ್ ಶಿವಕುಮಾರ್, ನಾಗರಾಜಶೆಟ್ಟಿ ಚಲಪತಿ, ಭಾಸ್ಕರ್, ಶ್ಯಾಂಸುಂದರ್ ಉಪಸ್ಥಿತರಿದ್ದರು. ಬಾಬು, ರಾಮಶೆಟ್ಟಿ ವೆಂಕಟೇಶ್ ಇದ್ದರು.