ಸಾರಾಂಶ
ಪಟ್ಟಣದ ಪುರಭವನದಲ್ಲಿ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರ ಸಂಘ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಕೊಪ್ಪಸರ್ಕಾರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಇದರಿಂದ ೧೦ನೇ ತರಗತಿ ಉತ್ತೀರ್ಣರಾದ ಅನೇಕ ಮಕ್ಕಳು ಸ್ವಂತ ದುಡಿಮೆ ಮೂಲಕ ಸ್ವಾವಲಂಬಿಯಾಗುತ್ತಿದ್ದಾರೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಯಶೋಧ ಆರ್.ಒ. ಹೇಳಿದರು. ಪಟ್ಟಣದ ಪುರಭವನದಲ್ಲಿ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರ ಸಂಘ ಉದ್ಘಾಟಿಸಿ ಮಾತನಾಡಿ, ಅನುದಾನರಹಿತ ಖಾಸಗಿ ಶಾಲೆಗಳು ಉತ್ತಮ ಶಿಕ್ಷಣ ನೀಡತ್ತಿದ್ದು ಉತ್ತಮ ಫಲಿತಾಂಶ ದಾಖಲಿಸುತ್ತಿವೆ. ಕೇವಲ ಶಿಕ್ಷಣ ಮತ್ತು ಫಲಿತಾಂಶಕ್ಕೆ ಸೀಮಿತವಾಗದೆ ಮೌಲ್ಯಾಧಾರಿತ ಶಿಕ್ಷಣಕ್ಕೂ ಆದ್ಯತೆ ನೀಡುವ ಮೂಲಕ ಖಾಸಗಿ ಶಾಲೆಗಳು ಮಕ್ಕಳ ಜೀವನ ರೂಪಿಸುವ ಕೇಂದ್ರಗಳಾಗಬೇಕು ಎಂದರು. ಚಿಕ್ಕಮಗಳೂರು ಜಿಲ್ಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಛಾಯಾಪತಿ ಮಾತನಾಡಿ ಸರ್ಕಾರಿ ವ್ಯವಸ್ಥೆಗಳಲ್ಲಿ ಮಾನ್ಯತೆ ಪಡೆದ ಮೂರು ಸಂಘಗಳು ಸೇರಿದಂತೆ ಅನೇಕ ಸಂಘಸಂಸ್ಥೆಗಳಿದ್ದು ಅವು ಸರ್ಕಾರಿ ಶಾಲಾ ಶಿಕ್ಷಕರ ಹಿತ ಕಾಯುತ್ತಿವೆ. ಶಿಕ್ಷಕರಿಗೆ ಸೌಲಭ್ಯ-ಪ್ರಶಸ್ತಿ ನೀಡುವಾಗ ಅನುದಾನಿತ ಹಾಗೂ ಅನುದಾನರಹಿತ ಶಾಲಾ ಶಿಕ್ಷಕರ ಬಗ್ಗೆ ಸರ್ಕಾರ ಗಮನವಹಿಸಬೇಕು ಎಂದರು. ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ ಮಾತನಾಡಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾರೆ. ಇವರ ಕಾರ್ಯವೈಖರಿ ಮೆಚ್ಚಬೇಕು. ತಾಲೂಕಿನಲ್ಲಿ ೧೩ ಅನುದಾನರಹಿತ ಶಾಲೆಗಳಿದ್ದು ಶಿಕ್ಷಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತೀ ಶಾಲೆ ಓರ್ವ ಶಿಕ್ಷಕರಂತೆ ಈ ಕಾರ್ಯಕ್ರಮದಲ್ಲಿ ೧೩ ಜನ ಶಿಕ್ಷಕರನ್ನು ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತಮ ಅಂಕ ಗಳಿಸಿದ ೮ ಖಾಸಗಿ ಶಾಲಾ ಶಿಕ್ಷಕರ ಮಕ್ಕಳನ್ನು ಅಭಿನಂದಿಸಿ ಗೌರವಿಸಲಾಗಿದೆ ಎಂದರು.ಸಂಘದ ಉಪಾಧ್ಯಕ್ಷ ಪ್ರದೀಪ್, ಕಾರ್ಯದರ್ಶಿ ಶಶಿಕಿರಣ್, ಖಜಾಂಚಿ ವಸಂತ್ ಖಾಸಗಿ ಶಾಲಾ ಶಿಕ್ಷಕರ ಸಂಘದ ಸದಸ್ಯರು ಇದ್ದರು.