ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ರಾಜ್ಯ ಮುಖಂಡ ಅನ್ಷಾದ್ ಪಾಳ್ಯ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ೮೪ ಲಕ್ಷಕ್ಕೂ ಅಧಿಕ ಮುಸ್ಲಿಂ ಜನಸಂಖ್ಯೆ ಇದ್ದರೂ ಹೊಸ ಸಚಿವ ಸಂಪುಟದಲ್ಲಿ ಆರಂಭಿಕ ಹಂತದಲ್ಲಿ ಕೇವಲ ಒಬ್ಬ ಮುಸ್ಲಿಂ ಪ್ರತಿನಿಧಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಸಮುದಾಯದ ನಿರೀಕ್ಷೆಗಳಿಗೆ ವಿರುದ್ಧವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯವು ನಿರಂತರವಾಗಿ ಬೆಂಬಲ ನೀಡುತ್ತಿದ್ದು, ಆಡಳಿತದಲ್ಲೂ ಅದಕ್ಕೆ ತಕ್ಕ ಪ್ರಾತಿನಿಧ್ಯ ಸಿಗಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಕರ್ನಾಟಕ ರಾಜ್ಯ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಮರ್ಪಕ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿ ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟವು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ರಾಜ್ಯ ಮುಖಂಡ ಅನ್ಷಾದ್ ಪಾಳ್ಯ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದಲ್ಲಿ ೮೪ ಲಕ್ಷಕ್ಕೂ ಅಧಿಕ ಮುಸ್ಲಿಂ ಜನಸಂಖ್ಯೆ ಇದ್ದರೂ ಹೊಸ ಸಚಿವ ಸಂಪುಟದಲ್ಲಿ ಆರಂಭಿಕ ಹಂತದಲ್ಲಿ ಕೇವಲ ಒಬ್ಬ ಮುಸ್ಲಿಂ ಪ್ರತಿನಿಧಿಗೆ ಮಾತ್ರ ಅವಕಾಶ ಕಲ್ಪಿಸಿರುವುದು ಸಮುದಾಯದ ನಿರೀಕ್ಷೆಗಳಿಗೆ ವಿರುದ್ಧವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯವು ನಿರಂತರವಾಗಿ ಬೆಂಬಲ ನೀಡುತ್ತಿದ್ದು, ಆಡಳಿತದಲ್ಲೂ ಅದಕ್ಕೆ ತಕ್ಕ ಪ್ರಾತಿನಿಧ್ಯ ಸಿಗಬೇಕು ಎಂದು ಒತ್ತಾಯಿಸಿದರು.ಹಿಂದಿನ ಚುನಾವಣೆಯಲ್ಲಿ ಸಮುದಾಯದ ಬೆಂಬಲದೊಂದಿಗೆ ೯ ಮುಸ್ಲಿಂ ಶಾಸಕರು ಹಾಗೂ ೪ ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದು, ಒಟ್ಟು ೧೩ ಪ್ರತಿನಿಧಿಗಳು ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಬಹುಪಾಲು ಮತಗಳು ಕಾಂಗ್ರೆಸ್ ಪಕ್ಷದ ಪರವಾಗಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ರಚನೆಯಲ್ಲೂ ಅದರ ಪ್ರತಿಫಲನೆ ಕಾಣಬೇಕು. ಹಿರಿತನ ಮತ್ತು ಅನುಭವದ ಆಧಾರದ ಮೇಲೆ ಕನಿಷ್ಠ ನಾಲ್ವರು ಮುಸ್ಲಿಂ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಜೊತೆಗೆ, ಹಿರಿಯ ನಾಯಕ ಜಮೀರ್ ಅಹಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಮೂಲಕ ಸಮುದಾಯಕ್ಕೆ ಸೂಕ್ತ ಗೌರವ ಕಲ್ಪಿಸಬೇಕು. ಮುಸ್ಲಿಂ ಸಮುದಾಯದ ರಾಜಕೀಯ ಕೊಡುಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಬೆಂಬಲವನ್ನು ಪರಿಗಣಿಸಿ, ಸಮುದಾಯದ ಆಶೋತ್ತರಗಳಿಗೆ ಅನುಗುಣವಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಯೂಸಫ್ ಖಾನ್, ಗೌರವಾಧ್ಯಕ್ಷ ಅಮೀರ್ ಜಾನ್, ಮುಖಂಡ ನವೀದ್, ಜಿಲ್ಲಾ ಸಂಚಾಲಕ ಸಮೀರ್ ಖಾನ್, ಮೊಹಮ್ಮದ್ ಅಜ್ಮಲ್, ಶಾಕೀಲ್ ಸಮೀರ್, ಅತೀಖುರ್ ರೆಹಮನ್ ಇತರರು ಇದ್ದರು.