ಸಾರಾಂಶ
ಸಂಡೂರು: ಪಟ್ಟಣದ ಗುರುಭವನದಲ್ಲಿ ಕೂಡ್ಲಿಗಿ ತಾಲ್ಲೂಕಿನ ಹಿರೇಹೆಗ್ಡಾಳ್ ಗ್ರಾಮದ ಕಲಾಭಾರತಿ ಕಲಾ ಸಂಘದ ನಾಲ್ವನೇ ವರ್ಷದ ಸಾಂಸ್ಕೃತಿಕ ಕಲೋತ್ಸವ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಗಜೇಂದ್ರಗಡದ ತಳ್ಳಿಹಾಳ ಸಂಸ್ಥಾನ ಕೋಡಿಮಠದ ಡಾ. ಕಾಲಜ್ಞಾನಿ ಬ್ರಹ್ಮ ಸದ್ಗುರು ವಿಶ್ವಕಾಲ ಜ್ಞಾನ ಶಿವಯೋಗಿ ಶರಣ ಬಸವ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಭಾರತದ ಸಂಸ್ಕೃತಿ ಉಜ್ವಲವಾಗಿದೆ. ಇಲ್ಲಿ ವೈವಿದ್ಯತೆಯನ್ನು ಕಾಣುತ್ತಿದ್ದೇವೆ. ಮಕ್ಕಳಿಗೆ ಪಾಲಕರು ಸಂಸ್ಕಾರವನ್ನು ಕಲಿಸುವ ಅಗತ್ಯವಿದೆ. ಮಕ್ಕಳಿಗೆ ಸಂಸ್ಕಾರ ಕಲಿಸಿಕೊಟ್ಟರೆ ದೇಶ, ಭಾಷೆ ಹಾಗೂ ಸಂಸ್ಕೃತಿ ಉಳಿಯುತ್ತದೆ ಎಂದರು.
ಭೂಮಿಯ ಮೇಲೆ ೨ ರಾಷ್ಟ್ರಗಳು ಉಳಿಯಲ್ಲ: ಸ್ವಾಮೀಜಿಯವರು ಕಾಲಜ್ಞಾನವನ್ನು ನುಡಿದು, ಅಕ್ಟೋಬರ್, ನವಂಬರ್ ತಿಂಗಳಲ್ಲಿ ಭೂಕಂಪ ಆಗಲಿದೆ. ಈ ಭೂಕಂಪ ಭಾರತದಲ್ಲಿ ಆಗುವುದಿಲ್ಲ. ದೇಶದಲ್ಲಿ ಸಮೃದ್ಧಿ ಕಾಣಬಹುದು. ರೈತರು ನೆಲ್ಲು (ಭತ್ತ)ದ ಎರಡು ಬೆಳೆ ಪಡೆಯುತ್ತಾರೆ. ಮೆಣಸಿನಕಾಯಿ ಮತ್ತು ಜೋಳಕ್ಕೆ ಉತ್ತಮ ಬೆಲೆ ದೊರೆಯಲಿದೆ. ದೇಶದಲ್ಲಿ ಕೊಲೆ ದರೋಡೆ ಹೆಚ್ಚಾಗಲಿದೆ. ಡಿಸೆಂಬರ್, ಜನವರಿಯಲ್ಲಿ ದುಷ್ಟರನ್ನು ಮೆಟ್ಟಿ ನಿಲ್ಲುವ ಕಾಲ ಬರಲಿದೆ. ಭಾರತವನ್ನು ವಿರೋಧಿಸುವ ಎರಡು ರಾಷ್ಟ್ರಗಳು ಉಳಿಯಲ್ಲ. ಜನತೆ ಪ್ಲಾಸ್ಟಿಕ್ ಬಳಕೆಯನ್ನು ಬಿಡಬೇಕಿದೆ. ಜನತೆ ಧರ್ಮವಂತರೂ, ನೀತಿವಂತರೂ ಆಗಬೇಕು ಎಂದು ತಿಳಿಸಿದರು.ಕೂಡ್ಲಿಗಿಯ ಉಪನ್ಯಾಸಕರಾದ ವಿವೇಕಾನಂದಸ್ವಾಮಿಯವರು ಉಪನ್ಯಾಸ ನೀಡಿದರು. ಕಲಾಭಾರತಿ ಕಲಾ ಸಂಘದ ಸಂಸ್ಥಾಪಕರಾದ ಬಣಕಾರ ಮೂಗಪ್ಪ ಹಿರೇಹೆಗ್ಡಾಳ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೆ. ಬಸವರಾಜ ಅವರು ಸ್ವಾಗತಿಸಿದರು. ಬಸವರಾಜ ಬಣಕಾರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ವಿವಿಧ ಕ್ಷೇತ್ರಗಳ ಸಾಧಕರನ್ನು ಕಲಾಭಾರತಿ ಕಲಾ ಸಂಘದ ವತಿಯಿಂದ ಸನ್ಮಾನಿಸಲಾಯಿತು. ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಂಜುನಾಥ ಹಿರೇಮಠ, ಮುಖಂಡರಾದ ನಾಗರಾಜ ಗುಡೆಕೋಟೆ, ಅಚ್ಯುತ್, ಎಚ್.ಎನ್. ಭೋಸ್ಲೆ, ಗೀತಾ ಕೊಟ್ರೇಶ್, ಜೆ. ಶಿವಪ್ರಕಾಶ್, ಎ.ಎಂ. ಶರಣಯ್ಯ, ಕಿನ್ನೂರೇಶ್ವರ, ಜಿ.ಎಸ್. ಗಿರೀಶ್, ಡಾ. ಎಸ್.ಎಸ್. ಪಾಟೀಲ್, ಬಿಂದು ನವೀನ್, ಬಿ.ಎಂ. ಗಿರೀಶ್, ಮಿಲ್ಟ್ರಿ ಮಂಜು, ಧರ್ಮನಗೌಡ, ದೇವರಮನಿ ಮಹೇಶ್, ಹುಲಿಯೂರುದುರ್ಗ ಲಕ್ಷ್ಮಿನಾರಾಯಣ, ಡಾ. ನವೀನ್ ಬಸವರಾಜ್ ಸಜ್ಜನ್, ರವಿಕುಮಾರಸ್ವಾಮಿ ಹಿರೇಮಠ, ವರದರಾಜ ಆಚಾರ್ಯ, ಅಬ್ದುಲ್ ರೆಹೆಮಾನ್, ಎಂ.ಕೆ. ಬಸವರಾಜ್, ಎಂ. ವಿರುಪಾಕ್ಷಯ್ಯ, ಎಂ. ರುದ್ರಗೌಡ, ಮಂಜುನಾಥ ಬೇವೂರ್ ಮುಂತಾದವರು ಉಪಸ್ಥಿತರಿದ್ದರು.ಇಂದ್ರಾಣಿ ಕಲಾ ಟ್ರಸ್ಟ್, ಬಳ್ಳಾರಿ ಇವರ ತಂಡದಿಂದ ಭರತ ನಾಟ್ಯ ಹಾಗೂ ಕೂಡ್ಲಿಗಿಯ ವಿನಾಯಕ ಶಾಲೆಯ ವಿದ್ಯಾರ್ಥಿಗಳಿಂದ ಒನಕೆ ಓಬವ್ವ ಕುರಿತಾದ ರೂಪಕವನ್ನು ಪ್ರಸ್ತುತ ಪಡಿಸಲಾಯಿತು.
ಸಂಡೂರಿನ ಗುರುಭವನದಲ್ಲಿ ಕೂಡ್ಲಿಗಿಯ ಹಿರೇಹೆಗ್ಡಾಳ್ ಗ್ರಾಮದ ಕಲಾಭಾರತಿ ಕಲಾ ಸಂಘದ ವತಿಯಿಂದ ವಿವಿಧ ಕ್ಷೇತ್ರಗಳ ಹಲವು ಸಾಧಕರನ್ನು ಸನ್ಮಾನಿಸಲಾಯಿತು.