ಧಾರವಾಡ:

ಡಾ. ಮನೋಜ ಹಾನಗಲ್ ಅವರ ಆಂಗ್ಲ ಕೃತಿ `ದಿ. ಲ್ಯಾಂಪ್ ಬೆರರ್ಸ್‌’ ಎಂಬುದು ಬಾಲ್ಕಿ ಹಿರೇಮಠ ಗಡಿಭಾಗದಲ್ಲಿ ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿ ಉಳಿಸಿ-ಬೆಳೆಸಿಕೊಂಡು ಬಂದ ಸುದೀರ್ಘ ಇತಿಹಾಸ ಬಿಂಬಿಸುವ ಅಮೋಘ ಕೃತಿ ಎಂದು ಕವಿವಿ ಕುಲಪತಿ ಡಾ. ಎ.ಎಂ. ಖಾನ್‌ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಬೀದರಿನ ಬಾಲ್ಕಿ ಹಿರೇಮಠ ಸಂಸ್ಥಾನದ ಆಶ್ರಯದಲ್ಲಿ ಏರ್ಪಡಿಸಿದ್ದ ಡಾ. ಮನೋಜ ಹಾನಗಲ್ಲ ರಚಿಸಿದ `ದಿ. ಲ್ಯಾಂಪ್ ಬೆರರ್ಸ್‌’ ಗ್ರಂಥ ಬಿಡುಗಡೆ ಮಾಡಿದ ಅವರು, ಭಾಲ್ಕಿ ಹಿರೇಮಠ ಸಂಸ್ಥಾನದ ಭವ್ಯ ಪರಂಪರೆ ಹಾಗೂ ಇತಿಹಾಸವನ್ನು ಲೇಖಕರು ಸರಳವಾಗಿ ಬರೆದಿದ್ದಾರೆ. ಈ ಕೃತಿ ಕನ್ನಡಕ್ಕೆ ಅನುವಾದ ಆದರೆ ಬಾಲ್ಕಿಯ ಹೆಚ್ಚಿನ ಕಾರ್ಯಗಳನ್ನು ಅರಿಯಲು ಅನುಕೂಲವಾಗುತ್ತದೆ ಎಂದರು.

ಶೇಗುಣಸಿಯ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಗ್ರಂಥ ಪರಿಚಯಿಸಿ, `ಈ ಕೃತಿ 13 ಅಧ್ಯಾಯ ಹಾಗೂ 200 ಪುಟಗಳ ಮೌಲಿಕ ಕೃತಿ. ಅಂದು ಚನ್ನಬಸವ ಪಟ್ಟದೇವರು ಹಚ್ಚಿದ ದೀಪ ಇಂದಿಗೂ ನಂದಾದೀಪವಾಗಿ ಪ್ರಜ್ವಲಿಸುವಂತೆ ಮಾಡಿದ ಕೀರ್ತಿ ಈಗಿನ ಡಾ. ಬಸವಲಿಂಗ ಪಟ್ಟದೇವರಿಗೆ ಸಲ್ಲುತ್ತದೆ. 45ಕ್ಕೂ ಹೆಚ್ಚು ಕೃತಿ ಪೂಜ್ಯರಿದಂ ಬರೆಯಲ್ಪಟ್ಟಿವೆ ಎಂದು ಹೇಳಿದರು.

ರುದ್ರಾಕ್ಷಿಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಭಾಲ್ಕಿಯ ಶ್ರೀಗಳು ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ, ಸಂಸ್ಕೃತಿ, ಕನ್ನಡತನ ಕಟ್ಟಿ ಬೆಳೆಸುವ ಜತೆಗೆ ಶಿಕ್ಷಣ ಕ್ರಾಂತಿ ಮಾಡಿದ್ದಾರೆ. ಇದೊಂದು ಇಡೀ ದೇಶಕ್ಕೆ ಮಾದರಿ. ಈ ಕೃತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಲ್ಕಿಯ ಹಿರಿಮೆ, ಗರಿಮೆ ಹೆಚ್ಚಿಸುವುದಾಗಿದೆ ಎಂದರು.


ಭಾಲ್ಕಿ ಹಿರೇಮಠ ಗುರುಬಸವ ಪಟ್ಟದೇವರು ಮಾತನಾಡಿ, ಕೇವಲ 40 ವಿದ್ಯಾರ್ಥಿಗಳಿಂದ ಪ್ರಾರಂಭವಾದ ವಿದ್ಯಾ ಸಂಸ್ಥೆಗಳಲ್ಲಿ ಇಂದು 20 ಸಾವಿರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಜತೆಗೆ 120 ಅನಾಥ ಮಕ್ಕಳಿಗೆ ಶಿಕ್ಷಣದ ಜತೆ ಆಶ್ರಯ ನೀಡಿ ಬೆಳೆಸುತ್ತಿದೆ ಎಂದು ತಿಳಿಸಿದರು.

ಕೃತಿಕಾರರಾದ ಡಾ. ಮನೋಜ ಹಾನಗಲ್ಲ ಮಾತನಾಡಿದರು. ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಉಪಾಧ್ಯಕ್ಷ ಡಾ. ಸಂಜೀವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು.