ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಸಮರ್ಥ ನಾಯಕ, ತಜ್ಞ ವೈದ್ಯ ಡಾ.ಬಾಬುರಾಜೇಂದ್ರ ನಾಯಕರನ್ನು ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಡುವಂತೆ ತಾಲೂಕು ಬಿಜೆಪಿ ಹಾಗೂ ಬಂಜಾರ ಸಮುದಾಯದ ಮುಖಂಡರು ಬಿಜೆಪಿ ಹೈಕಮಾಂಡ್ಗೆ ಆಗ್ರಹಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸೋಮು ದೇವೂರ ಹಾಗೂ ಬಂಜಾರ ಸಮುದಾಯದ ಮುಖಂಡ ಬಾಳು ಗೋಪು ರಾಠೋಡ ಅವರು, ಡಾ.ಬಾಬುರಾಜೇಂದ್ರ ನಾಯಕ ತಜ್ಞ ವೈದ್ಯರಾಗಿದ್ದು, ಸರ್ವ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ತಮ್ಮದೇ ನೂರಾರು ಯೋಜನೆಗಳ ಕಂಡುಕೊಂಡಿದ್ದಾರೆ. ಕೃಷಿ, ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಉದ್ದಿಮೆಗಳ ಸ್ಥಾಪನೆ, ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸೇರಿದಂತೆ ಹಲವಾರು ವಲಯಗಳು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕೆಂಬ ದೂರ ದೃಷ್ಟಿಯುಳ್ಳವರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಡಾ.ಬಾಬು ರಾಜೇಂದ್ರ ನಾಯಕ್ ಗೆ ಟಿಕೆಟ್ ನೀಡಿದರೆ ಅವರ ಗೆಲುವಿಗೆ ಶ್ರಮಿಸಿ ಮತ್ತೊಮ್ಮೆ ಜಿಲ್ಲೆಯನ್ನು ಬಿಜೆಪಿ ಭದ್ರಕೋಟೆ ಮಾಡುತ್ತೇವೆ ಎಂದರು.
ಜಿಲ್ಲೆಯ ಪ್ರಗತಿಗೆ ಎಲ್ಲ ಸಮಾಜದ ಹಾಗೂ ಸಂಘಟನೆಗಳ ಹೋರಾಟಗಳಲ್ಲಿ ಭಾಗವಹಿಸಿದ್ದು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಕಾರ್ಯಕರ್ತರು. ಬಿಜೆಪಿಯ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕರಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಇವರಿಗೆ ಬಿಜೆಪಿ ಟಿಕೆಟ್ ನೀಡಿದ್ದೆ ಆದಲ್ಲಿ ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಬಂಜಾರ ಸಮುದಾಯ ಬೆನ್ನಿಗೆ ನಿಂತು ಹೆಚ್ಚಿನ ಮತಗಳಿಂದ ಆರಿಸಿ ತರುವ ಭರವಸೆ ಇದೆ ಎಂದು ಹೇಳಿದರು.ಈ ವೇಳೆ ಬಿಜೆಪಿ ಪಪಂ ಸದಸ್ಯರಾದ ಸೋಮು ದೇವೂರ, ವಿನೋದ ಚವ್ಹಾಣ, ಮುಖಂಡರಾದ ಶ್ರೀಕಾಂತ ಕಾಖಂಡಕಿ, ಜಗದೀಶ ಚವ್ಹಾಣ,ಅನೀಲ ರಾಠೋಡ, ಭೀಮು ಚವ್ಹಾಣ, ಮೋಹನ ಚವ್ಹಾಣ, ರಾಜೇಶ ರಜಪೂತ, ಶಿವಾನಂದ ಚವ್ಹಾಣ, ರವಿ ರಾಠೋಡ ಹಾಗೂ ಬಿಜೆಪಿ ಮುಖಂಡರು ಇದ್ದರು.