ಸಾರಾಂಶ
ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಗ್ರಾಮ ಪಂಚಾಯ್ತಿಯ ಕೇಂದ್ರದಲ್ಲಿ ದಶಕಗಳ ಹಿಂದೆ ಪ್ರಾಥಮಿಕ ಆರೋಗ್ಯ ಉಪ ಕೇಂದ್ರವನ್ನು ತೆರೆಯಲಾಗಿತ್ತು, ಕೆಲ ವರ್ಷಗಳು ಕೇಂದ್ರ ಚನ್ನಾಗಿಯೇ ನಡೆಯಿತು. ಬಳಿಕ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಬಾಗಿಲು ಮುಚ್ಚಿದೆ. ಕೇಂದ್ರದ ಬಾಗಿಲು ಮುಚ್ಚಿರುವುದರಿಂದ ಈಗ ಆರೋಗ್ಯ ಕೇಂದ್ರದ ಮುಭಾಗ ಕಸ ಸಂಗ್ರಹ ಕೇಂದ್ರವಾಗಿ ಮಾರ್ಪಟ್ಟಿದೆ.
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಬಡವರ ಆರೋಗ್ಯ ರಕ್ಷಣೆಗಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳನ್ನು ತೆರೆದಿದೆ. ಆದರೆ ಕೆಲವು ಕಡೆ ಪ್ರಾಥಮಿಕ ಆರೋಗ್ಯ ಉಪ ಕೇಂದ್ರಗಳು ಇದ್ದರೂ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದಿರುವುದರಿಂದ ಗ್ರಾಮೀಣರು ಚಿಕಿತ್ಸೆಗಾಗಿ ಮತ್ತೆ ನಗರಗಳಿಗೆ ಅಲೆಯುವಂತಾಗಿದೆ. ತಾಲೂಕಿನ ಕೇಂದ್ರಕ್ಕೆ ಸಮೀಪದಲ್ಲೆ ಇರುವ ಹುಲಿಬೆಲೆ ಗ್ರಾಮ ಪಂಚಾಯ್ತಿಯ ಕೇಂದ್ರದಲ್ಲಿ ದಶಕಗಳ ಹಿಂದೆ ಪ್ರಾಥಮಿಕ ಆರೋಗ್ಯ ಉಪ ಕೇಂದ್ರವನ್ನು ತೆರೆಯಲಾಗಿತ್ತು, ಕೆಲ ವರ್ಷಗಳು ಕೇಂದ್ರ ಚನ್ನಾಗಿಯೇ ನಡೆಯಿತು. ಬಳಿಕ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿಂದ ಬಾಗಿಲು ಮುಚ್ಚಿದೆ. ಕೇಂದ್ರದ ಬಾಗಿಲು ಮುಚ್ಚಿರುವುದರಿಂದ ಈಗ ಆರೋಗ್ಯ ಕೇಂದ್ರದ ಮುಭಾಗ ಕಸ ಸಂಗ್ರಹ ಕೇಂದ್ರವಾಗಿ ಮಾರ್ಪಟ್ಟಿದೆ.ಮನೆ ಬಾಗಿಲಿಗೆ ಆರೋಗ್ಯ ಸೇವೆ?
ಸರ್ಕಾರ ಇತ್ತೀಚಿಗೆ ಗೃಹ ಆರೋಗ್ಯ ಸೇವೆ ಮನೆ ಬಾಗಿಲಿಗೆ ಎಂಬ ಹೊಸ ಯೋಜನೆ ಜಾರಿಗೆ ತಂದಿದೆ, ಆದರೆ ಗ್ರಾಮದಲ್ಲಿರುವ ಆರೋಗ್ಯ ಉಪ ಕೇಂದ್ರದ ಬಾಗಿಲೇ ತೆರೆಯದಿರುವಾಗ ಇನ್ನು ಮನೆ ಬಾಗಿಲಿಗೆ ಆರೋಗ್ಯ ಸೇವೆ ಕಲ್ಪಿಸಲು ಹೇಗೆ ಸಾಧ್ಯವೆಂದು ಗ್ರಾಮಸ್ಥರು ಪ್ರಶ್ನಿಸುವಂತಾಗಿದೆ. ಈ ಪಂಚಾಯ್ತಿಯ ೨೦ಕ್ಕೂ ಹೆಚ್ಚಿನ ಗ್ರಾಮಗಳ ರೋಗಿಗಳು ಿದೇ ಕೇಂದ್ರವನ್ನು ಅವಲಂಬಿಸಿದ್ದರು. ಈಗ ಪಟ್ಟಣಕ್ಕೆ ಅಲೆಯುವಂತಾಗಿದೆ.ಬಾಗಿಲಿ ತೆರೆಯದ ‘ಆಯುಷ್ಮಾನ್’ಗ್ರಾಮದಲ್ಲಿರುವ ಆರೋಗ್ಯ ಉಪ ಕೇಂದ್ರದಲ್ಲಿ ಕಳೆದ ಹಲವು ತಿಂಗಳಿಂದಲೂ ಸಕಾಲಕ್ಕೆ ವೈದ್ಯರು ಸಿಗದ ಕಾರಣ ಜನರು ಜ್ವರ,ಕೆಮ್ಮು,ನೆಗಡಿ ಬಂದರೂ ಪಕ್ಕದ ಪಟ್ಟಣದ ಕಡೆ ಮುಖಮಾಡುವರು. ಹುಲಿಬೆಲೆ ಗ್ರಾಮದ ಉಪ ಕೇಂದ್ರಕ್ಕೆ ಬಣ್ಣ ಹಚ್ಚಲಾಗಿದೆ, ಕಟ್ಟಡ ನೋಡಲು ಸುಂದರವಾಗಿದೆ. ಇತ್ತೀಚಿಗೆ ಆಯುಷ್ಮಾನ್ ಭಾರತ ಕೇಂದ್ರವನ್ನು ತೆರೆಯಲಾಗಿದೆ, ಆದರೆ ಇದುವರೆಗೂ ಒಮ್ಮೆಯೂ ಬಾಗಿಲು ಮಾತ್ರ ತೆರೆದಿಲ್ಲ,
ಸುಸಜ್ಜಿತ ಕಟ್ಟಡ ಇದ್ದರೂ ವೈದ್ಯರು ಮತ್ತು ಸಿಬ್ಬಂದಿ ಇಲ್ಲದ ಕಾರಣ ಆರೋಗ್ಯ ಕೇಂದ್ರಕ್ಕೇ ರೋಗ ಬಂದಂತಾಗಿದೆ. ಸರ್ಕಾರ ಕೂಡಲೇ ಸಿಬ್ಬಂದಿಯನ್ನು ನೇಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.