ಸಾರಾಂಶ
ಕನ್ನಡಪ್ರಭ ವಾರ್ತೆ ಕೋಟ
ಇಲ್ಲಿನ ಹಂಗಾರಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳ ಉದ್ಘಾಟನೆ ಹಾಗೂ ತರಗತಿಯ ಪೀಠೋಪಕರಣಗಳ ಹಸ್ತಾಂತರ, ಶೈಕ್ಷಣಿಕ ಪರಿಕರಗಳ ಉಚಿತ ವಿತರಣಾ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ಜರುಗಿತು.ತರಗತಿಗಳನ್ನು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜುಂ ಉದ್ಘಾಟಿಸಿ ಮಾತನಾಡಿ, ಪೋಷಕರು ಆಂಗ್ಲ ಶಿಕ್ಷಣ ವ್ಯಾಮೋಹಕ್ಕೆ ಇತಿಶ್ರೀ ಹಾಡಬೇಕು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು. ಇಂದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಬಹು ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಾರೆ. ಪ್ರಸ್ತುತ ದಿನಗಳಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಸಕಲ ರೀತಿ ಮೂಲಸೌಕರ್ಯಗಳನ್ನು ಕಾಣಬಹುದಾಗಿದೆ. ಶಿಕ್ಷಣ ಗುಣಮಟ್ಟ ಉತ್ತುಂಗದಲ್ಲಿದ್ದು, ಸ್ವಾಗತಾರ್ಹ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ದೇಶಾಭಿಮಾನವನ್ನು ಮೈಗೂಡಿಸಿಕೊಂಡು ಮೊಬೈಲ್ ವ್ಯಾಮೋಹದಿಂದ ದೂರವಿರಬೇರು ಎಂದು ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ರೇಖಾ ಉಡುಪ ವಹಿಸಿದ್ದರು.ಸಮವಸ್ತ್ರವನ್ನು ಆಭರಣ ಜುವೆಲ್ಲರ್ಸ್ನ ಸಿಬ್ಬಂದಿ ಪೂರ್ಣಚಂದ್ರ ವಿತರಿಸಿದರು. ಸ್ಕೂಲ್ ಬ್ಯಾಗ್ಗಳನ್ನು ಉಡುಪಿ ಠಾಣೆಯ ಎಎಸ್ಐ ಜಯಕರ ಐರೋಡಿ ವಿತರಿಸಿದರು.
ದಾನಿಗಳಿಂದ ಕೊಡಮಾಡಿದ ಉಚಿತ ಬ್ಯಾಗ್, ನೋಟ್ ಪುಸ್ತಕ, ಸಮವಸ್ತ್ರ, ಐಡಿ ಕಾರ್ಡ್ ಮತ್ತು ಬೆಲ್ಟ್, ಕಲಿಕೋಪಕರಣ, ಪೀಠೋಪಕರಣಗಳ ಕಲಿಕಾ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.ಮುಖ್ಯ ಅಭ್ಯಾಗತರಾಗಿ ಐರೋಡಿ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಶೆಟ್ಟಿ, ಶಿಕ್ಷಣ ಇಲಾಖೆಯ ಅಧಿಕಾರಿ ಪದ್ಮಾವತಿ, ನಿವೃತ್ತ ಶಿಕ್ಷಕ ರಾಮದೇವ ಐತಾಳ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಭರತ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಐರೋಡಿ ರಾಜಶೇಖರ್ ಹೆಬ್ಬಾರ್, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಆನಂದ್ ಗಾಣಿಗ, ಶಿಕ್ಷಣ ಇಲಾಖೆಯ ಸಂಯೋಜಕರಾದ ಪ್ರಕಾಶ್ ಬಿ.ಬಿ., ರಾಘವ ಶೆಟ್ಟಿ, ದಾನಿಗಳಾದ ಸುರೇಂದ್ರ ಆಚಾರ್ ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕಿ ವೀಣಾ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಉಷಾರಾಣಿ ನಿರೂಪಿಸಿದರು. ಮುಖ್ಯ ಶಿಕ್ಷಕಿ ಪ್ರೆಸ್ಲಿಲ್ಲಾ ಸ್ವಾಗತಿಸಿ, ವಂದಿಸಿದರು.