ನ್ಯಾಯಾಧೀಕರಣದ ಪ್ರಕಾರ ನಮಗೆ ಮಹದಾಯಿ ನೀರು ಕೊಡಿ- ಸೊಬರದಮಠ

| Published : Dec 09 2023, 01:15 AM IST

ಸಾರಾಂಶ

ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರನ್ನು ನಮಗೆ ಕುಡಿಯಲಿಕ್ಕೆ ನ್ಯಾಯಾಧಿಕರಣದ ಆದೇಶ ಪ್ರಕಾರ ನೀಡಬೇಕೆಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರು 3067ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಆಗ್ರಹಿಸಿದರು.

ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ

ನರಗುಂದ: ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರನ್ನು ನಮಗೆ ಕುಡಿಯಲಿಕ್ಕೆ ನ್ಯಾಯಾಧಿಕರಣದ ಆದೇಶ ಪ್ರಕಾರ ನೀಡಬೇಕೆಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆಗ್ರಹಿಸಿದರು.

ಅವರು 3067ನೇ ದಿನದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ನರಗುಂದ ಬಂಡಾಯ ನೆಲದಲ್ಲಿ ಕಳೆದ 9 ವರ್ಷದಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ನಮ್ಮ ನೆಲದಲ್ಲಿ ಹರಿಯುವ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳ ನೀರು ನೀಡಬೇಕೆಂದು ಹಲವಾರು ರೀತಿ ಹೋರಾಟ ಮಾಡಿದ ನಂತರ ಮಹದಾಯಿ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧಿಕರಣದ ನ್ಯಾಯಾಧೀಶರು ಕಳಸಾ ಪೋಟ್ಲ, ಹಳತಾರ, ನಾಲಾ, ಈ ಮೂರು ಹಳ್ಳಗಳಿಂದ 3.33 ಟಿಎಂಸಿ, ಬಂಡೂರಿ ಹಳ್ಳದ 4 ಟಿಎಂಸಿ ಸೇರಿ ಒಟ್ಟು 7.33 ಟಿಎಂಸಿ ನೀರನ್ನು ಕರ್ನಾಟಕ ರಾಜ್ಯ ಕುಡಿಯಲಿಕ್ಕೆ ಬಳಕೆ ಮಾಡಕೊಳ್ಳಲು ಅಂದಿನ ನ್ಯಾಯಾಧಿಕರಣ ಆದೇಶ ಮಾಡಿದೆ. ಮೇಲಾಗಿ ಕೇಂದ್ರ ಸರ್ಕಾರವು ಕೂಡ ಗೆಜೆಟ್ ನೋಟಿಫಿಕೇಶನ್‌ ಹೊರಡಿಸಿದೆ. ಆದರೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಪಕ್ಷಗಳ ನಾಯಕರ ಇಚ್ಛಾಶಕ್ತಿ ಕೊರತೆಯಿಂದ ಈ ಭಾಗದ ಜನತಗೆ 7.33 ಟಿಎಂಸಿ ನೀರು ಸಿಗುತ್ತಿಲ್ಲವೆಂದು ವಿಷಾದ ವ್ಯಕ್ತಪಡಿಸಿದರು. ಆಳುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಇನ್ನು ಕಾಲ ಮಿಂಚಿಲ್ಲ. ರೈತರು ಮತ್ತೊಂದು ರೈತ ಬಂಡಾಯ ಹಮ್ಮಿಕೊಳ್ಳುವ ಮೊದಲೆ ಸರ್ಕಾರ ಎಚ್ಚೆತ್ತುಕೊಂಡು ನಮ್ಮ ಪಾಲಿನ ನೀರು ಕೊಡಲು ಮುಂದಾಗಬೇಕೆಂದು ಎಚ್ಚರಿಕೆ ನೀಡಿದರು. ಪ್ರಸಕ್ತ ವರ್ಷ ತೀವ್ರ ಬರಗಾಲದಿಂದ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ರೈತರು ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆಗಳನ್ನು ಹಾನಿ ಮಾಡಿಕೊಂಡು ಕಷ್ಟದಲ್ಲಿದ್ದಾರೆ. ಆದ್ದರಿಂದ ಸರ್ಕಾರ ಬೆಳೆ ಹಾನಿ ಮಾಡಿಕೊಂಡ ರೈತರ ಪ್ರತಿ 1 ಎಕರೆಗೆ 50 ಸಾವಿರ ಪರಿಹಾರ ನೀಡಬೇಕು, 2023-24ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ತುಂಬಿದ ಬೆಳೆ ವಿಮೆ ಬಿಡುಗಡೆ ಮಾಡಿ, ರೈತರು ಕೃಷಿಗಾಗಿ ಪಡೆದ ಎಲ್ಲಾ ರೀತಿಯ ಕೃಷಿ ಸಾಲ ಮನ್ನಾ ಮಾಡಲು ಈ ಅಧಿವೇಶನದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂದು ಮನವಿ ಮಾಡಿಕೊಂಡರು. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಪ್ರತಿಷ್ಠೆ ಬಿಟ್ಟು ಉತ್ತರ ಕರ್ನಾಟಕ ಭಾಗದ ನೀರಾವರಿ, ಶಿಕ್ಷಣ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಸುರ್ದಿಘ ಚರ್ಚೆ ಮಾಡಿ ಈ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ತಿಳಿಸಿದರು. ರೈತ ಮುಖಂಡರಾದ ವೀರಭಸಪ್ಪ ಹೂಗಾರ, ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಸುಭಾಸ ಗಿರಿಯಣ್ಣವರ, ಸಿ.ಎಸ್. ಪಾಟೀಲ, ಶ್ರೀಶೈಲ ಮೇಟಿ, ಹನಮಂತ ಸರನಾಯ್ಕರ, ಶರಣಗೌಡ ಪಾಟೀಲ, ಎಚ್.ಬಿ. ಪಠಾಣ, ಯಲ್ಲಪ್ಪ ಚಲವಣ್ಣವರ, ವಾಸು ಚವಾಣ, ಅರ್ಜುನ ಮಾನೆ, ಶಂಕ್ರಪ್ಪ ಜಾಧವ, ಶಿವಪ್ಪ ಸಾತಣ್ಣವರ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ಬಸವ್ವ ಪೂಜಾರ, ವಿಜಯಕುಮಾರು ಹೂಗಾರ, ಮಲ್ಲೇಶಪ್ಪ ಅಣ್ಣಗೇರಿ, ಚನ್ನಬಸಪ್ಪ ಆಯಿಟ್ಟಿ, ಮುಧೋಳೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.