ಸಾರಾಂಶ
ಹೊಳೆಹೊನ್ನೂರು: ಪ್ರತಿಯೊಬ್ಬ ತಂದೆ ತಾಯಿಯರು ಮಕ್ಕಳಗೆ ನಿಮ್ಮ ಅಮೂಲ್ಯವಾದ ಸಮಯವನ್ನು ನೀಡಬೇಕು ಎಂದು ಶಿವಮೊಗ್ಗದ ಪಾಸಿಟಿವ್ ಮೈಂಡ್ ಆಸ್ಪತ್ರೆಯ ವೈದ್ಯೆ ಹಾಗೂ ಆಪ್ತ ಸಮಾಲೋಚಕಿ ಡಾ.ವಿ.ಎಚ್.ಐಶ್ವರ್ಯ ಹೇಳಿದರು.
ಸಮೀಪದ ಜ್ಞಾನದೀಪ ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್ನಲ್ಲಿ ನಡೆದ ಪೋಷಕರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಇವತ್ತಿನ ಪೋಷಕರು ಪ್ರತಿದಿನ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳನ್ನು ಉತ್ತಮವಾಗಿ ಬೆಳೆಸುವುದು ಸುಲಭದ ಕೆಲಸವಲ್ಲ. ತಮ್ಮ ಅಮೂಲ್ಯ ಸಮಯ ನೀಡಿ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಸರಿಯಾದ ಕಲಿಕೆಯ ಅಭ್ಯಾಸಗಳನ್ನು ಬೆಳೆಸಬೇಕು. ಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದಾಗ ಹೇಳುವುದಕ್ಕಿಂತಲೂ ಅವರು ಪ್ರಾಥಮಿಕ ಹಂತದಲ್ಲಿದ್ದಾಗ ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಮಕ್ಕಳು ದೊಡ್ಡವರಾದ ಮೇಲೆ ಏನಾಗುತ್ತಾರೆ ಎಂಬುದಕ್ಕಿಂತ ಈಗ ನಾವು ಮಕ್ಕಳಿಗೆ ಏನನ್ನು ಹೇಳಿಕೊಡಬೇಕು ಎಂಬುದು ಪೋಷಕರು ಯೋಚಿಸುವ ಅಗತ್ಯತೆ ಇದೆ. ಪೋಷಕರನ್ನು ನೋಡಿ ಮಕ್ಕಳು ಕಲಿಯುತ್ತಿರುವುದರಿಂದ ನಾವು ಅವರಿಗೆ ಮಾದರಿಯಾಗಿರಬೇಕು. ಪ್ರೇರಣೆ, ಕರುಣೆ, ಸಹಾನುಭೂತಿ, ಜಾಗೃತಿ ಹಾಗೂ ಆತ್ಮವಿಶ್ವಾಸ ಗುಣಗಳನ್ನು ಪೋಷಕರು ಮಕ್ಕಳಲ್ಲಿ ಬೆಳೆಸಬೇಕೆಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಶ್ರೀ ಅರಬಿಂದೊ ಫೌಂಡೇಶನ್ ಫಾರ್ ಎಜುಕೇಶನ್ನ ಕಾರ್ಯದರ್ಶಿ ಬಿ.ಎಲ್.ನೀಲಕಂಠ ಮೂರ್ತಿ, ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಚ್.ಎನ್.ಎಸ್.ರಾವ್ , ಶಾಲೆಯ ಪ್ರಾಚಾರ್ಯ ಶ್ರೀಕಾಂತ್ ಎಂ.ಹೆಗಡೆ, ಹಿರಿಯ ಉಪ ಪ್ರಾಂಶುಪಾಲ ಡಾ.ರೆಜಿಜೋಸೆಫ್, ಉಪ ಪ್ರಾಂಶುಪಾಲೆ ವಾಣಿ ಕೃಷ್ಣಪ್ರಸಾದ್, ಶಾಲೆಯ ಆಪ್ತ ಸಮಾಲೋಚಕ ಶಿಕ್ಷಕ ಆಂಥೋನಿ ಪಾಲ್ ಹಾಗೂ ಶಿಕ್ಷಕರು ಇದ್ದರು.