ಚಾರಣಿಗರಿಗೆ ಮೂಲಭೂತ ಸವಲತ್ತು ನೀಡುತ್ತಿದೆ: ಎಚ್.ರವಿಕುಮಾರ್

| Published : May 20 2024, 01:35 AM IST

ಸಾರಾಂಶ

ಚಿಕ್ಕಮಗಳೂರಿನ ಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಸರ್ವ ಸದಸ್ಯರ ಮಹಾಸಭೆಯನ್ನು ರವಿಕುಮಾರ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸ್ವಚ್ಚಂದ ಪರಿಸರ ಸವಿಯಲು ಆಗಮಿಸುವ ಪ್ರವಾಸಿಗರು ಹಾಗೂ ಪರ್ವತರೋಹಿಗಳಿಗೆ ಅನುಕೂಲವಾಗಲು ಕಡಿಮೆ ಮೊತ್ತದಲ್ಲಿ ಮೂಲ ಸೌಕರ್ಯದ ವ್ಯವಸ್ಥೆ ಕಲ್ಪಿಸಲು ಮುಂದಾಗುತ್ತಿದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ರವಿಕುಮಾರ್ ಹೇಳಿದರು.

ನಗರದ ಭುವನೇಂದ್ರ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಸರ್ವ ಸದಸ್ಯರ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹಾಸ್ಟೆಲ್ ನಿರ್ಮಾಣದ ಉದ್ದೇಶದಿಂದ ಜಿಲ್ಲಾಡಳಿತವು ಅಸೋಸಿಯೇಷನ್ ನಾಲ್ಕು ದಶಕಗಳ ಹಿಂದೆ ಒಂದು ಎಕರೆ ಭೂಮಿಯನ್ನು ಜಿಪಂ ಸಮೀಪ ಮಂಜೂರು ಮಾಡಿದೆ. ಹಿಂದಿನ ಸಮಿತಿ ತಟಸ್ಥಗೊಂಡ ಹಿನ್ನೆಲೆ ನೂತನ ಘಟಕ ಸ್ಥಾಪಿಸಲಾಗಿದೆ. ಪ್ರಸ್ತುತ ರಾಷ್ಟ್ರೀಯ ಸಂಸ್ಥೆಯು 5 ಲಕ್ಷ ರು. ದೇಣಿಗೆ ನೀಡಿ ಅಭಿವೃದ್ಧಿಗೆ ಮುಂದಾಗುತ್ತಿದೆ ಎಂದರು.

ನಿವೇಶನದ ಸುತ್ತಮುತ್ತ ಕಾಂಪೌಂಡ್ ನಿರ್ಮಿಸುವ ಜೊತೆಗೆ ಪರ್ವತರೋಹಿಗಳಿಗೆ ತಂಗುವ ಸಲುವಾಗಿ ಗುಣಮಟ್ಟದ ಶೌಚಾಲಯ, ಟೆಂಟ್‌ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಿದೆ ಎಂದ ಅವರು, ನೂತನ ಘಟಕವು ಮುತುವರ್ಜಿ ವಹಿಸುವ ಮೂಲಕ ಪ್ರವಾಸಿಗರ ಶ್ರೇಯೋಭಿವೃದ್ಧಿ ಹಾಗೂ ಅಸೋಸಿಯೇಷನ್ ಬೆಳವಣಿಗೆಗೆ ಸಹಕರಿಸಬೇಕು ಎಂದು ಹೇಳಿದರು.

ಪ್ರವಾಸಿಗರು ತಂಗಲು ಸ್ಥಳವಿಲ್ಲದೇ ಪರದಾಡುವ ಸ್ಥಿತಿ ಜಿಲ್ಲೆಯಲ್ಲಿ ಎದುರಾಗಿದೆ. ಕೆಲವು ಹೋಂ ಸ್ಟೇಗಳು ಅಧಿಕ ಮೊತ್ತದ ಶುಲ್ಕ ವಸೂಲಿ ಮಾಡುತ್ತಿವೆ. ಹಾಗಾಗಿ ಅಸೋಸಿಯೇಷನ್ ಸ್ಥಳೀಯ ಹೋಟೆಲ್‌ಗಳ ಸಹಭಾಗಿತ್ವದ ಮೇರೆಗೆ ಪ್ರವಾಸಿಗರನ್ನು ಅನುಕೂಲಕ್ಕೆ ಮುಂದಾಗುತ್ತಿದ್ದು ಸಂಸ್ಥೆಯ ಸದಸ್ಯತ್ವ ಪಡೆದುಕೊಂಡವರಿಗೆ ರಿಯಾಯಿತಿ ದರದಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ವೈ.ಎಚ್.ಎ. ಸಂಸ್ಥೆ ರಾಜ್ಯಾಧ್ಯಕ್ಷ ಡಾ. ಎಲ್.ಕೆ.ರಾಜೀವ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಿವೇಶನವು ಪ್ರವಾಸಿಗರಿಗೆ ಸೆಳೆಯುವುದರಲ್ಲಿ ಸಂಶಯವಿಲ್ಲ. ವಾರದ ರಜೆಗಳಲ್ಲಿ ಆಗಮಿಸುವವರಿಗೆ ಅಸೋಸಿಯೇಷನ್‌ನಿಂದ ಸಕಲ ಸೌಕರ್ಯದ ವ್ಯವಸ್ಥೆ ಕಲ್ಪಿಸಿದರೆ, ಪ್ರವಾಸಿಗರು ಹಾಗೂ ಜಿಲ್ಲಾ ಘಟಕವು ಬೆಳವಣಿಗೆ ಹೊಂದಲು ಸಹಕಾರಿ ಎಂದರು.

ನೂತನ ಅಧ್ಯಕ್ಷ ಎಚ್.ಎಂ.ನಾರಾಯಣ ಮಾತನಾಡಿ, ರಾಷ್ಟ್ರೀಯ ಹಾಗೂ ರಾಜ್ಯ ಅಸೋಸಿಯೇಷನ್ ಸಹಕಾರದಿಂದ ಜಿಲ್ಲಾ ಘಟಕಕ್ಕೆ ದೇಣಿಗೆ ಲಭಿಸಿದೆ. ಮುಂಬರುವ ದಿನಗಳಲ್ಲಿ ನೂತನ ಕಟ್ಟಡ ನಿರ್ಮಿಸುವ ಜೊತೆಗೆ ತರಬೇತಿ ಕೇಂದ್ರ, ಹೋಟೆಲ್, ತಂಗಲು ಕೊಠಡಿ ನಿರ್ಮಿಸುವ ಜೊತೆಗೆ ನೂರಕ್ಕೆ ಹೆಚ್ಚು ಸದಸ್ಯತ್ವ ನೋಂದಾಯಿಸುವ ಗುರಿ ಹೊಂದಿದ್ದು ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಇದೇ ವೇಳೆ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್‌ಗೆ ನೂತನ ಅಧ್ಯಕ್ಷರಾಗಿ ಎಚ್.ಎಂ.ನಾರಾಯಣ, ಚೇರ್‌ಮನ್‌ ಸಿ.ಆರ್.ಶಿವಾನಂದ, ಖಜಾಂಚಿ ಜಿ.ಎಸ್.ಚೇತನ್, ಕಾರ್ಯದರ್ಶಿ ಬಿ.ಎಚ್. ಅಲ್ತಾಫ್ ರೆಹಮಾನ್, ಸಂಘಟನಾ ಕಾರ್ಯದರ್ಶಿ ಎಂ.ಎಸ್.ನಟರಾಜ್, ನಿರ್ದೇಶಕರುಗಳಾಗಿ ಎಸ್.ಎನ್.ಸಚ್ಚಿದಾನಂದ, ಬಿ.ಎಂ.ಕುಮಾರ್, ಜಿ.ಅರವಿಂದ್, ಇ.ಎಂ.ಮಧುಸೂದನ್, ಕೆ.ವಿಶ್ವನಾಥ್ ಸೇರಿ 18 ಮಂದಿಯನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಸೋಸಿಯೇಷನ್ ರಾಜ್ಯ ಕಾರ್ಯದರ್ಶಿ ಡಾ.ಅರವಿಂದ ಗೋಪಾಲ್, ಚೇರ್‌ಮನ್ ಎಸ್.ಎಸ್.ಪ್ರಸನ್ನ, ಮುಖ್ಯ ಸಂಚಾಲಕರಾದ ಡಿ.ಪಾರ್ಥನಾಥ್, ಎಚ್.ಎಸ್.ಮಂಜಪ್ಪ, ಮುಖಂಡರುಗಳಾದ ಡಾ.ಸಾರಗೋಡು ಕೌಶಿಕ್, ಎಚ್.ಆರ್.ಚಂದ್ರೇಗೌಡ, ಬಿ.ಎಸ್.ನಾಗೇಶ್‌ಕುಮಾರ್, ಸಿ.ಎಸ್. ಅಭಿನೇತ್ರಿ, ವಿಲಿಯಂ ಪೆರೇರಾ ಉಪಸ್ಥಿತರಿದ್ದರು.