ಮಾನಸಿಕ ಅಸ್ವಸ್ಥೆಗೆ ಹೆರಿಗೆ: ಮಾನವೀಯತೆ ಮೆರೆದ ಪೊಲೀಸರು

| Published : Aug 14 2024, 12:48 AM IST

ಮಾನಸಿಕ ಅಸ್ವಸ್ಥೆಗೆ ಹೆರಿಗೆ: ಮಾನವೀಯತೆ ಮೆರೆದ ಪೊಲೀಸರು
Share this Article
  • FB
  • TW
  • Linkdin
  • Email

ಸಾರಾಂಶ

ಕಲಘಟಗಿ ಪಟ್ಟಣದ ಪಾಳು ಬಿದ್ದ ಕಟ್ಟಡದಲ್ಲಿ ಮಾನಸಿಕ ಅಸ್ವಸ್ಥೆ ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದರು. ಈ ವೇಳೆ ಅದೇ ಮಾರ್ಗದಲ್ಲಿ ಕರ್ತವ್ಯದಲ್ಲಿ ತೆರಳುತ್ತಿದ್ದ ಪೊಲೀಸರಿಗೆ ಅವಳ ಚೀರಾಟ ಕೇಳಿದೆ. ತಕ್ಷಣ ಅವಳ ನೆರವಿಗೆ ಧಾವಿಸಿದ್ದು ಮಗು ಹಾಗೂ ತಾಯಿ ಇದೀಗ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ.

ಕಲಘಟಗಿ:

ತೀವ್ರ ಹೆರಿಗೆ ನೋವಿನಿಂದ ನರಳುತ್ತಿದ್ದು ಮಾನಿಸಿಕ ಅಸ್ವಸ್ಥೆಯ ಧ್ವನಿ ಕೇಳಿ ಸ್ಥಳಕ್ಕೆ ತೆರಳಿದ ಪೊಲೀಸ್‌ ಸಿಬ್ಬಂದಿ ತಾಯಿ ಹಾಗೂ ಮಗುವಿನ ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿರುವುದು ಮಂಗಳವಾರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಹನ್ನೆರಡು ಸಾವಿರ ಮಠದ ಹತ್ತಿರದ ಪಾಳು ಬಿದ್ದ ಶಾಲೆಯಲ್ಲಿ 45 ವರ್ಷದ ಮಾನಸಿಕ ಅಸ್ವಸ್ಥೆ ತೀವ್ರ ಹೆರಿಗೆ ನೋವಿನಿಂದ ಚೀರಾಡುತ್ತಿದ್ದಳು. ಇದೇ ಮಾರ್ಗದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದ ಪಿಎಸ್‌ಐ ಬಸವರಾಜ ಯಲ್ಲದಗುಡ್ಡ, ಪೇದೆಗಳಾದ ಸಿ.ಪಿ. ವಿನಾಯಕ, ಜ್ಯೋತಿ ಚಂದುನವರ್‌ ಅವರು ಈ ಚೀರಾಟ ಕೇಳಿ ತಕ್ಷಣ ಕಾರು ನಿಲ್ಲಿಸಿ ಕಟ್ಟಡದೊಳಗೆ ತೆರಳಿದ್ದಾರೆ. ಆ, ವೇಳೆ ಮಹಿಳೆ ಹೆರಿಗೆ ನೋವಿನಿಂದ ಒದ್ದಾಡುತ್ತಿರುವುದನ್ನು ನೋಡಿದ್ದಾರೆ. ಸ್ಥಳೀಯ ಮಹಿಳೆಯರನ್ನು ಸಹಾಯಕ್ಕೆ ಕರೆದರೂ ಯಾರೂ ಬಂದಿಲ್ಲ. ಆಗ ಪಿಎಸ್‌ಐ ಬಸವರಾಜ ಯಲ್ಲದಗುಡ್ಡ ಅವರು ಸಮೀಪದಲ್ಲಿಯೇ ಇದ್ದ ತಮ್ಮ ಮನೆಗೆ ತೆರಳಿ ಅಗತ್ಯವಾಗಿ ಬೇಕಾದ ಬಟ್ಟೆ, ಬೆಡ್‌ ಶೀಟ್‌ ತೆಗೆದುಕೊಂಡು ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟರೊಳಗೆ ಮಹಿಳೆಗೆ ಹೆರಿಗೆ ಆಗಿದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಕೂಡಲೇ ಆ್ಯಂಬುಲೆನ್ಸ್‌ನಲ್ಲಿ ಇಬ್ಬರನ್ನು ತಾಲೂಕಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ದಾಖಲಿಸಿದ್ದು, ಇಬ್ಬರು ಇದೀಗ ಆರೋಗ್ಯವಾಗಿದ್ದಾರೆ.

ಪೊಲೀಸರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅತ್ತ ಹೆರಿಗೆ ಮಾಡಿಸಲು ಸ್ಥಳೀಯರು ಆಗಮಿಸದೆ ಇರುವುದನ್ನು ಬೇಸರ ವ್ಯಕ್ತಪಡಿಸಿದ್ದಾರೆ.