ಗ್ಲೋಬಲ್ ಎಂಟರ್‌ಪ್ರೈಸಸ್ ಆರೋಪಿಗಳಿಂದ ಸ್ಥಳ ಮಹಜರು

| Published : Nov 21 2025, 02:30 AM IST

ಸಾರಾಂಶ

ಪಟ್ಟಣದ ಕಾರ್ ಸ್ಟ್ರೀಟ್‌ನ ಕಟ್ಟಡ ಬಾಡಿಗೆಗೆ ಪಡೆದು ಗ್ಲೋಬಲ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಗೃಹೋಪಯೋಗಿ ವಸ್ತುಗಳನ್ನು ಅರ್ಧ ಬೆಲೆಗೆ ನೀಡುತ್ತೇವೆ ಎಂದು ಜನರನ್ನು ಪ್ರೇರೇಪಿಸಿ ವಂಚಿಸುತ್ತಿದ್ದ ಗ್ಲೋಬಲ್ ಎಂಟರ್‌ಪ್ರೈಸಸ್ ಸಂಸ್ಥೆಯ ಮೂವರು ಆರೋಪಿಗಳು ಕೊನೆಗೂ ಬಲೆಗೆ ಬಿದ್ದಿದ್ದು, ನಗರ ಠಾಣೆ ಪೊಲೀಸರು ಅವರನ್ನು ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದರು.

ತಲೆಮರೆಸಿಕೊಂಡ ಇನ್ನೊಬ್ಬ ಆರೋಪಿಗೆ ಶೋಧ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಕಾರ್ ಸ್ಟ್ರೀಟ್‌ನ ಕಟ್ಟಡ ಬಾಡಿಗೆಗೆ ಪಡೆದು ಗ್ಲೋಬಲ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಗೃಹೋಪಯೋಗಿ ವಸ್ತುಗಳನ್ನು ಅರ್ಧ ಬೆಲೆಗೆ ನೀಡುತ್ತೇವೆ ಎಂದು ಜನರನ್ನು ಪ್ರೇರೇಪಿಸಿ ವಂಚಿಸುತ್ತಿದ್ದ ಗ್ಲೋಬಲ್ ಎಂಟರ್‌ಪ್ರೈಸಸ್ ಸಂಸ್ಥೆಯ ಮೂವರು ಆರೋಪಿಗಳು ಕೊನೆಗೂ ಬಲೆಗೆ ಬಿದ್ದಿದ್ದು, ನಗರ ಠಾಣೆ ಪೊಲೀಸರು ಅವರನ್ನು ಸ್ಥಳಕ್ಕೆ ಕರೆತಂದು ಸ್ಥಳ ಮಹಜರು ನಡೆಸಿದರು.

ಬಂಧಿತರಾದ ತಮಿಳುನಾಡು ಮೂಲದ ಎಂ. ಗಣೇಶ ತಂದೆ ಮುತ್ತಯ್ಯ, ತ್ಯಾಗರಾಜನ್ ತಂದೆ ಶಿವಕದಾಸನ್, ಮೈಯನಾದನ್ ತಂದೆ ಕರುಪ್ಪಯ ಅವರನ್ನು ಪೊಲೀಸರು ಗ್ಲೋಬಲ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದ ಕಚೇರಿಗೆ ಪೊಲೀಸ್ ಭದ್ರತೆಯಲ್ಲಿ ಕರೆದುಕೊಂಡು ಚಟುವಟಿಕೆಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಆರೋಪಿಗಳು ವಾಸವಿದ್ದ ಮನೆಗೂ ಭೇಟಿ ನೀಡಿ ಅವರ ವರ್ತನೆ, ಸ್ಥಳೀಯ ಸಂಪರ್ಕ, ಕಾರ್ಯಪ್ರವೃತ್ತಿ ಕುರಿತ ಮಾಹಿತಿ ದಾಖಲಿಸಿದರು. ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಅದರಲ್ಲಿ ಇರುವ ಹಣದ ವಿವರ, ವಹಿವಾಟು, ಸಂಶಯಾಸ್ಪದ ವ್ಯವಹಾರಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ಡಿವೈಎಸ್‌ಪಿ ಮಹೇಶ್ ನೇತೃತ್ವದಲ್ಲಿ ಸಿಪಿಐ ದಿವಾಕರ, ಪಿಎಸ್‌ಐ ನವೀನ್ ನಾಯ್ಕ, ತಿಮ್ಮಪ್ಪ ಮೊಗೇರ್, ಸಿಬ್ಬಂದಿ ಭಾಗಿಯಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ಉದಯಕುಮಾರ್ ರೇಂಗರಾಜು ವಂಚನೆ ಬೆಳಕಿಗೆ ಬರುತ್ತಲೇ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಸಮುದ್ರಕ್ಕಿಳಿದ ಪ್ರವಾಸಿಗ ಅಸ್ವಸ್ಥ:

ಸಮುದ್ರದಲ್ಲಿಳಿದು ಆಟವಾಡಲು ತೆರಳಿದ್ದ ವ್ಯಕ್ತಿಯೊಬ್ಬರು ಅಸ್ವಸ್ಥಗೊಂಡ ಘಟನೆ ಗುರುವಾರ ಸಂಜೆ ಗೋಕರ್ಣದ ಓಂ ಕಡಲತೀರದಲ್ಲಿ ನಡೆದಿದೆ. ತಕ್ಷಣ ಖಾಸಗಿ ಆ್ಯಂಬುಲೆನ್ಸ್‌ ಮೂಲಕ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದು, ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಅಂಕೋಲಾ ತಾಲೂಕಾ ಆರೋಗ್ಯಾಧಿಕಾರಿ ಡಾ. ಜಗದೀಶ ನಾಯ್ಕ ಹಾಗೂ ಸಿಬ್ಬಂದಿ ತಂಡ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.

ಸಾಗರ ಮೂಲದ ವ್ಯಕ್ತಿ ಜೀವಾಪಾಯದಿಂದ ಪಾರಾಗಿದ್ದವರು ಎಂದು ತಿಳಿದು ಬಂದಿದ್ದು, ಇಲ್ಲಿನ ಬ್ಯಾಂಕ್ ಒಂದರ ಲೆಕ್ಕಪರಿಶೋಧನೆಗೆ ಬಂದಿದ್ದ ನಾಲ್ವರು ತಂಡದಲ್ಲಿ ಇವರು ಓರ್ವರು ಎಂಬ ಮಾಹಿತಿ ದೊರೆತಿದೆ.ಈ ನಾಲ್ಕು ಜನ ಓಂ ಕಡಲತೀರದ ವೀಕ್ಷಣೆಗೆ ತೆರಳಿದಾಗ ನೀರಿಗಿಳಿದಾಗ ಈ ಅವಘಡ ನಡೆದಿದೆ .ಜೀರಕ್ಷಕ ಸಿಬ್ಬಂದಿ ಇವರನ್ನ ಮೇಲೆ ತಂದು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ.