ಸಾರಾಂಶ
ಅನ್ನಭಾಗ್ಯ ಯೋಜನೆಯಲ್ಲಿ ಪಡಿತರವನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಆದಷ್ಟು ಬಗೆಹರಿಸಿದ್ದೇವೆ.
ಕನ್ನಡಪ್ರಭ ವಾರ್ತೆ ಬೇಲೂರು
ಗ್ಯಾರಂಟಿ ಯೋಜನೆಯ ಶೇ. 100ರಷ್ಟು ಸಾಧನೆಗಾಗಿ ಫಲಾನುಭವಿಗಳ ಮನೆಗೆ ತೆರಳಿ ನೋಂದಣಿ ಮಾಡಿಸಲಾಗುವುದು ಎಂದು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ದೇಶಾಣಿ ಆನಂದಮೂರ್ತಿ ತಿಳಿಸಿದರು.ಇಲ್ಲಿನ ತಾಲೂಕು ಪಂಚಾಯಿತಿ ಸಂಭಾಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯ ಪ್ರಯೋಜನವನ್ನು ಪಡೆಯಲು ತಾಲೂಕಿನ 89 ಮಹಿಳೆಯರು ನೋಂದಣಿ ಮಾಡಿಕೊಂಡಿಲ್ಲ ಹಾಗೂ ಸಾಕಷ್ಟು ಜನ ಗೃಹಜ್ಯೋತಿ ಪ್ರಯೋಜನವನ್ನು ಸಹ ಪಡೆದುಕೊಂಡಿಲ್ಲ. ಅಂಥವರನ್ನು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯರು ಮತ್ತು ನಾನು ಭೇಟಿ ಮಾಡಿ ನೋಂದಣಿ ಮಾಡಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಅನ್ನಭಾಗ್ಯ ಯೋಜನೆಯಲ್ಲಿ ಪಡಿತರವನ್ನು ಸರಿಯಾಗಿ ವಿತರಿಸುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಆದಷ್ಟು ಬಗೆಹರಿಸಿದ್ದೇವೆ. ಶಕ್ತಿ ಯೋಜನೆಯ ಪ್ರಗತಿಗೆ ಬಸ್ ಗಳ ಕೊರತೆ ಇರುವ ಬಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿದ್ದರಿಂದ 4 ಹೊಸ ಬಸ್ ಗಳನ್ನು ಬೇಲೂರು ಬಸ್ ಡಿಪೋ ನೀಡಿದ್ದು ಇನ್ನು 10 ಬಸ್ ನೀಡಿ, ಚಾಲಕ ಮತ್ತು ನಿರ್ವಾಹಕರ ವ್ಯವಸ್ಥೆ ಮಾಡುವಂತೆ ಕೋರಿದ್ದೇನೆ ಎಂದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ಆಹಾರ ಇಲಾಖೆಯ ಶಿರಸ್ತೇದಾರ್ ಗೀತಾಂಜಲಿ, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ರಮ್ಯಾ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಸದಸ್ಯರಾದ ಶರತ್, ಪ್ರತಾಪ್, ಸುರೇಶ್, ಮಹೇಶ್, ಇಂದ್ರೇಶ್, ಚಂದ್ರಶೇಖರ್, ಅಬ್ಬಿಬ್, ಮನ್ಸೂರ್ ಅಹಮ್ಮದ್, ಅಶೋಕ್, ನಿಶ್ಚಲ್, ವಿಶಾಲಾಕ್ಷಿ, ಧರ್ಮಭೋವಿ ಪಾಲ್ಗೊಂಡಿದ್ದರು.