ಸಾರಾಂಶ
ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್ಪೋ 2024 ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಎಲ್ಲಿ ನಿಸ್ವಾರ್ಥ ಸೇವೆ ಗುಣ ಗೌರವ ಇರುತ್ತದೆಯೋ ಅಲ್ಲಿ ಭಗವಂತ ನಲಿದಾಡುತ್ತಾನೆ ಎಂಬುದಕ್ಕೆ ಜನಮಾನಸದಲ್ಲಿ ತೋರುವ ಆಶಾಕಿರಣ ಅಂಧ ಮಕ್ಕಳ ವಸತಿ ಶಾಲೆ ಅರ್ಥಪೂರ್ಣವಾಗಿದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ಹೇಳಿದರು.ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಆಶಾಕಿರಣ ಚಾರಿಟಬಲ್ ಟ್ರಸ್ಟ್ ಮತ್ತು ಮೆಕೋಶಾ ಸಂಸ್ಥೆಯಿಂದ ಏರ್ಪಡಿಸಿದ್ದ ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್ಪೋ 2024 ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ದೇವರ ಕಾಣಬೇಕು, ಅವನ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ದೇವಸ್ಥಾನಗಳಿಗೆ ಭೇಟಿ ನೀಡುವಂತೆ ಈ ಆಶಾಕಿರಣ ಅಂಧಮಕ್ಕಳ ಶಾಲೆಗೆ ಭೇಟಿ ಕೊಟ್ಟು ಅಲ್ಲಿರುವವರ ಸೇವೆ ಮಾಡಿದರೆ ವಿಶೇಷವಾಗಿ ದೇವರ ಅನುಗ್ರಹಕ್ಕೆ ಪಾತ್ರರಾಗುವ ಭಾಗ್ಯ ದೊರೆಯುತ್ತದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರದಿಂದ ಜೀವಭಾವ ಕಾರ್ಯಕ್ರಮ ಆರಂಭಿಸಿದಾಗ ಮೊಟ್ಟಮೊದಲನೆ ವ್ಯಕ್ತಿ ಮತ್ತು ಸಂಸ್ಥೆ ಯಾವುದೆಂದರೆ ಅದು ಡಾ.ಜೆ.ಪಿ ಕೃಷ್ಣೇಗೌಡರ ಮಾರ್ಗದರ್ಶನದಲ್ಲಿ ಅವರ ಕೂಸಾದ ಆಶಾಕಿರಣ ಅಂಧಮಕ್ಕಳ ಪಾಠಶಾಲೆ ಪಾತ್ರವಾಗಿ ಶ್ರೀಮಾತೆ ಪ್ರಶಸ್ತಿಗೆ ಭಾಜನವಾಗಿದೆ ಎಂದು ಹೇಳಿದರು.ಒಂದು ಜೀವ ಸೃಷ್ಟಿಯಾಗುವಾಗ ಅದರಲ್ಲಿ ಭಾವ ಒಡ ಮೂಡುತ್ತದೆ. ಸರ್ವೇಂದ್ರಿಯಗಳೂ ಚೆನ್ನಾಗಿದ್ದರೆ ಕೊರತೆ ಕಾಣು ವುದಿಲ್ಲ, ಆದರೆ ಇಂದು ಸಮಾಜದ ಕೆಲವರಲ್ಲಿ ಸಹಾಯ ಹಸ್ತದ ಕೊರತೆ ಕಾಣುತ್ತಿದೆ ಎಂದು ವಿಷಾಧಿಸಿದರು.ತಮ್ಮ ಕೊರತೆಯನ್ನೇ ಭೂಮಿಕೆಯಾಗಿ ಮಾಡಿಕೊಂಡು ಅದರ ಮೇಲೆ ತಮ್ಮ ಸಾರ್ವಭೌಮತ್ವ ನಿರ್ಮಿಸುವ ವ್ಯವಸ್ಥೆಗೆ ಕಾರಣ ಮಾಡಿದ ಪರಿಣಾಮ ಅವರೆಲ್ಲಾ ಇಂದು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆಂದು ಶ್ಲಾಘಿಸಿದರು.ಮಕ್ಕಳ ಮನಸ್ಸು ಅರಿಯುವುದು ಮಾತೃ ಸ್ವರೂಪಿಗೆ ಮಾತ್ರ, ಅಂತಹ ವಿಶೇಷ ಗುಣ ಡಾ.ಜಿ.ಪಿ ಕೃಷ್ಣೇಗೌಡರಲ್ಲಿ ಸಂಪನ್ನ ವಾಗಿದೆ. ಸಮರ್ಪಣಾ ಭಾವ ಇಟ್ಟುಕೊಂಡಿದ್ದ ಜಯಪ್ರಕಾಶ ನಾರಾಯಣ ಮಾದರಿಯಂತೆ ಇವರನ್ನೂ ಅದೇ ಹೆಸರಿನಲ್ಲಿ ಕರೆದರೆ ಬಹಳ ವಿಶೇಷ ಎಂದು ಹೇಳಿದರು.ಮಲೆನಾಡಿನ ವೈಶಿಷ್ಟ್ಯ, ಸಂಸ್ಕೃತಿ, ಶ್ರೇಷ್ಟತೆ ನಾಗ ಸ್ವರೂಪ, ಮಲೆನಾಡಿನ ಆಹಾರ ಪದ್ಧತಿಗಳನ್ನು ಜನರಿಗೆ ಮತ್ತೊಮ್ಮೆ ಪರಿಚಯಿಸುವ ಮಲೆನಾಡು ಮಹೋತ್ಸವ ವಿಶ್ವಾಸನೀಯ ಎಂದರು.ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಮಲೆನಾಡು ಮಹೋತ್ಸವ ದಾನಿಗಳಿಗೆ ಪ್ರೇರಣೆ ನೀಡುವ ಕಾರ್ಯಕ್ರಮ. ಅರ್ಥ ಪೂರ್ಣವಾಗಿದೆ. ರಾಜ್ಯಾದೆಲ್ಲೆಡೆಯಿಂದ ಅಂಧಮಕ್ಕಳ ಶಾಲೆಗೆ ದಾಖಲಾದ ವಿದ್ಯಾರ್ಥಿಗಳಿಗೆ ಅಭಿರುಚಿಗೆ ತಕ್ಕಂತೆ ಶಿಕ್ಷಣ, ಸಂಗೀತ, ಕ್ರೀಡೆ ಮುಂತಾದವನ್ನು ಕೊಡಿಸುವಲ್ಲಿ ಡಾ. ಜೆ.ಪಿ. ಕೃಷ್ಣೇಗೌಡ ಮತ್ತು ಅವರ ಕುಟುಂಬದ ಸಾಧನೆ ಪ್ರಶಂಸನೀಯ ಎಂದು ಹೇಳಿದರು.ಶಾಲೆಗೆ ಉಚಿತ ವಿದ್ಯುತ್ ನೀಡಲು ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಮೆಸ್ಕಾಂ ಇಲಾಖೆ ಈಗಾಗಲೇ ಆದೇಶಿಸಿದೆ. ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿಗೆ ಮಾಜಿ ಸಚಿವ ಸಿ.ಟಿ. ರವಿ ಹಾಗೂ ತಾವು ಮುಖ್ಯಮಂತ್ರಿ ಗಳೊಂದಿಗೆ ಚರ್ಚಿಸಿ ಪ್ರಶಸ್ತಿ ಕೊಡಿಸಲು ಶ್ರಮಿಸುವ ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಹಣದ ಹಿಂದೆ ಹೋಗುವ ಇಂದಿನ ವ್ಯವಸ್ಥೆಯಲ್ಲಿ ಜನಸೇವೆ ಮೂಲಕ ಜನಾನುರಾಗಿಯಾದ ಡಾ. ಜೆ.ಪಿ ಕೃಷ್ಣೇಗೌಡರು ಬದುಕಿನ ಭರವಸೆ ಕಳೆದುಕೊಂಡ ಮಕ್ಕಳಲ್ಲಿ ವಿಶ್ವಾಸ ಮೂಡಿಸಿ ಬದುಕು ಕಟ್ಟಿಕೊಳ್ಳಲು ಅಂಧಮಕ್ಕಳ ಶಾಲೆ ಆರಂಭಿಸಿ ನೆರವಾಗಿದ್ದಾರೆಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಜೆ.ಪಿ. ಕೃಷ್ಣೇಗೌಡ ಶಾಲೆಯ ಆರಂಭದಿಂದ ಈವರೆಗೆ ನಡೆದು ಬಂದ ದಾರಿ ವಿವರಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಮ್ಮ ತಂದೆ ತಾಯಿ ಹೆಸರಿನಲ್ಲಿ ಅಂಧಮಕ್ಕಳ ಶಾಲೆಗೆ ಒಂದು ಲಕ್ಷ ರು. ದೇಣಿಗೆ ನೀಡುವುದಾಗಿ ಘೋಷಷಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಬಸವರಾಜ್ ಸ್ವಾಮಿಜಿ, ಡಾ. ಜ್ಯೋತಿಕೃಷ್ಣ, ವರ್ಷಾ ಅಭಿಷೇಕ್, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಕಲ್ಪನಾ ಪ್ರದೀಪ್, ಎ.ಪಿ.ಸಾಗರ್ ಇದ್ದರು. 24 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಮಲೆನಾಡು ಮಹೋತ್ಸವ ಚಾರಿಟಿ ಎಕ್ಸ್ಪೋ 2024 ಕಾರ್ಯಕ್ರಮವನ್ನು ಡಾ. ಭೀಮೇಶ್ವರ ಜೋಷಿ ಅವರು ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಸಿ.ಟಿ. ರವಿ, ಡಾ. ಜೆ.ಪಿ. ಕೃಷ್ಣೇಗೌಡ ಇದ್ದರು.