ಕನಸು ನನಸಾಗೋವರೆಗೂ ದೇವರು ನನ್ನನ್ನು ಕರೆದುಕೊಳ್ಳಲ್ಲ

| Published : Oct 29 2025, 11:30 PM IST

ಕನಸು ನನಸಾಗೋವರೆಗೂ ದೇವರು ನನ್ನನ್ನು ಕರೆದುಕೊಳ್ಳಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ ನನ್ನ ಮನಸ್ಸಿನಲ್ಲಿ ಒಂದು ಕನಸಿದೆ, ನಾನು ಸಾಯುವುದರೊಳಗಾಗಿ ದೇವರು ನನ್ನ ಗುರಿ‌ ಮುಟ್ಟಿಸುತ್ತಾನೆ ಎಂಬ ವಿಶ್ವಾಸ ನನ್ನಲ್ಲಿದೆ. ಕನಸು ನನಸಾಗುವವರೆಗೆ ಆ ದೇವರು ನನ್ನನ್ನು ಕರೆದುಕೊಳ್ಳುವುದಿಲ್ಲ. ಗುರಿ ಸಾಧಿಸಿಯೇ ತಿರುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ

ನನ್ನ ಮನಸ್ಸಿನಲ್ಲಿ ಒಂದು ಕನಸಿದೆ, ನಾನು ಸಾಯುವುದರೊಳಗಾಗಿ ದೇವರು ನನ್ನ ಗುರಿ‌ ಮುಟ್ಟಿಸುತ್ತಾನೆ ಎಂಬ ವಿಶ್ವಾಸ ನನ್ನಲ್ಲಿದೆ. ಕನಸು ನನಸಾಗುವವರೆಗೆ ಆ ದೇವರು ನನ್ನನ್ನು ಕರೆದುಕೊಳ್ಳುವುದಿಲ್ಲ. ಗುರಿ ಸಾಧಿಸಿಯೇ ತಿರುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ, ಈದ್ಗಾ, ಮರಗಮ್ಮ ದೇವಿ ಪಾದಗಟ್ಟಿ ಲೋಕಾರ್ಪಣೆ, ಬೀರಲಿಂಗೇಶ್ವರ, ವಿಠಲ-ರುಕ್ಮೀಣಿ ದೇವಸ್ಥಾನ ಜೀರ್ಣೋದ್ಧಾರ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾನು ವಯಸ್ಸಾಗಿದೆ ಚುನಾವಣೆ ಬಿಡಬೇಕು ಅಂತ ಮಾಡಿದ್ದೆ. ಆದರೆ ಮೋದಿ ಸಾಹೇಬರು ನನಗೆ ಒತ್ತಾಯ ಮಾಡಿ ಟಿಕೇಟ್‌ ಕೊಟ್ಟು ಚುನಾವಣೆಗೆ ನಿಲ್ಲಿಸಿದ್ದಾರೆ. ನಾನು ಎಲ್ಲಿದ್ದರೂ ನಿಮ್ಮ ಪರವಾಗಿ, ಗ್ರಾಮದ ಪರವಾಗಿ, ನಿಮ್ಮ ಜತೆಗಿರುತ್ತೇನೆ ಎಂದು ಹೇಳಿದರು.

ಹುಟ್ಟೂರು ಅಥರ್ಗಾದ ಮೇಲೆ ನನಗೆ ಅಪಾರ ಗೌರವವಿದೆ. ನಿಮ್ಮೇಲ್ಲರ ಆಶೀರ್ವಾದದಿಂದ ರಾಜ್ಯ ರಾಜಕಾರಣದಲ್ಲಿ ಇತಿಹಾಸ ಮಾಡಿದ್ದೇನೆ. ದೇವರು ನನಗೆ ಎಲ್ಲಾ ಕೊಟ್ಟಿದ್ದಾನೆ. ದೇವರು ನನ್ನನ್ನು ಕೈಬಿಡುವುದಿಲ್ಲ. ನಿಮ್ಮೇಲ್ಲ ಹಿರಿಯರ ಬಯಕೆಯಿಂದ 45 ವರ್ಷಗಳವರೆಗೆ ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದಿದ್ದೇನೆ. ನನ್ನ ಜೀವನದಲ್ಲಿ 12 ಚುನಾವಣೆ ಮಾಡಿದ್ದೇನೆ. 11 ಚುನಾವಣೆಯಲ್ಲಿ ನನಗೆ ಆಶೀರ್ವಾದ ಮಾಡಿ ಗೆಲ್ಲಿಸಿದ ತಾಲೂಕಿನ ಜನರ ಋಣವನ್ನು ಮರೆಯುವುದಿಲ್ಲ. 15ವರ್ಷದ ಅವಧಿಯಲ್ಲಿ ₹ 96 ಸಾವಿರ ಕೋಟಿ ಸಂಸದರ ನಿಧಿಯಿಂದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಖರ್ಚು ಮಾಡಿದ್ದೇನೆ. ₹ 1.20 ಲಕ್ಷ ಕೋಟಿ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿ ಮಾಡಿದ್ದೇನೆ. ಎಲ್ಲಿಯೂ ನಾನು ಹೇಳಿಕೊಂಡಿಲ್ಲ, ಕೆಲವರು ಗೋಲಗುಮ್ಮಟ ಕಟ್ಟಿಸಿದ್ದೇನೆ, ಇಂದ್ರ, ಚಂದ್ರ ಎಂದು ಬರೆಯಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಮೃತ್ಯುಂಜಯ ಮಹಾರಾಜರ ಮಠದಲ್ಲಿ ಕಂತಿ ಭಿಕ್ಷೆ ಬೇಡಿ ತಂದ ಪ್ರಸಾದ ಸೇವಿಸಿ ಶಾಲೆ ಕಲಿತ್ತಿದ್ದೇನೆ. ಬದುಕಿರುವವರೆಗೆ ಮಠ, ಮಂದಿರ, ಸ್ವಾಮೀಜಿಯವರನ್ನು ಮನಸ್ಸಿನಲ್ಲಿ ಸ್ಮರಿಸುತ್ತೇನೆ. ಮಠದಲ್ಲಿನ ಪ್ರಸಾದ ಸವಿದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಹುರಕಡ್ಲಿ ಅಜ್ಜನವರ ಶಿಷ್ಯನಾಗಿ ಬೆಳೆದಿದ್ದೇನೆ. ಹುಟ್ಟೂರು ಅಥರ್ಗಾ ಗ್ರಾಮದಲ್ಲಿನ ಕಲಿತ ಶಾಲೆಯ ಮೇಲೆ ಗೌರವವಿಟ್ಟುಕೊಂಡು ₹ 1.30 ಕೋಟಿ ಅನುದಾನದಲ್ಲಿ ಹೈಟೆಕ್ ಶಾಲಾ ಕೋಣೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.

ಮುರುಘೇಂದ್ರ ಮಹಾಸ್ವಾಮೀಜಿ, ಅಡವಿಲಿಂಗ ಮಹಾರಾಜರು, ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು, ಸಂಗೊಳ್ಳಿ ಮಹಾರಾಜ, ಕೆಸರಟ್ಟಿ ಮಹಾರಾಜರು ಸಾನಿಧ್ಯ ವಹಿಸಿದ್ದರು. ಕಾಸುಗೌಡ ಬಿರಾದಾರ, ಬಿ.ಡಿ.ಪಾಟೀಲ, ಗ್ರಾಪಂ ಅಧ್ಯಕ್ಷ ನಾಗುಗೌಡ ಪಾಟೀಲ, ಅರ್ಜುನ ಲಮಾಣಿ, ಹಣಮಂತ್ರಾಯಗೌಡ ಬಿರಾದಾರ, ಶ್ರೀಶೈಲ ನಾಗಣಸೂರ, ಜಟ್ಟೆಪ್ಪ ಸಾಹುಕಾರ ಲೋಣಿ, ಸಲೀಮ ನದಾಪ್ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.