ರಾಣಿಬೆನ್ನೂರು: ರಸ್ತೆ ನಿರ್ಮಾಣದ ವೇಳೆ ನೀಡಿದ ಭರವಸೆಯನ್ನು ಈಡೇರಿಸದ ಕೆಶಿಪ್ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಖಂಡಿಸಿ ಹಾಗೂ ಕುಡಿಯುವ ನೀರು, ಬಸ್‌ ತಂಗುದಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ತಾಲೂಕಿನ ಗೋಡಿಹಾಳ ಗ್ರಾಮದ ಮಹಿಳೆಯರು ಮತ್ತು ರೈತರು ಸೋಮವಾರ ಗ್ರಾಮದ ಬಳಿ ಗದಗ-ಹೊನ್ನಾಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಗದಗ-ಹೊನ್ನಾಳಿ ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಗ್ರಾಮದ ಕುಡಿಯುವ ನೀರಿನ ಬೋರವೆಲ್‌ನ್ನು ತೆರವುಗೊಳಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಹೊಸ ಬೋರವೆಲ್ ಕೊರೆಯಿಸಿ ಟ್ರಾನ್ಸಫಾರ್ಮರ್ ಅಳವಡಿಸಿ ಸುಸಜ್ಜಿತ ಪೈಪ್‌ಲೈನ್ ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕಾಮಗಾರಿ ಮುಗಿದು ಹಲವು ದಿನಗಳಾದರೂ ಅಧಿಕಾರಿಗಳು ನೀಡಿದ ಭರವಸೆ ಈಡೇರಿಸಿಲ್ಲ. ಇದರಿಂದಾಗಿ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಉಂಟಾಗಿದ್ದು ಗ್ರಾಮಸ್ಥರು ಪರದಾಡುವಂತಾಗಿದೆ. ಇದಲ್ಲದೆ ಗೋಡಿಹಾಳ ಗ್ರಾಮದ ಬಳಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಮಾದರಿಯ ಬಸ್ ತಂಗುದಾಣ ನಿರ್ಮಿಸಬೇಕು. ಈಗಾಗಲೆ ಸಮೀಪದ ಗ್ರಾಮಗಳಲ್ಲಿ ನಿರ್ಮಿಸಲಾಗಿರುವ ಬಸ್ ತಂಗುದಾಣಗಳು ಅವೈಜ್ಞಾನಿಕವಾಗಿದ್ದು ಮಳೆ ಗಾಳಿಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುತ್ತಿಲ್ಲ. ಮಹಿಳೆಯರು, ವಿದ್ಯಾರ್ಥಿಗಳು ಮತ್ತು ವೃದ್ಧರು ಬಿಸಿಲಿನಲ್ಲಿ ನಿಲ್ಲುವಂತ ಪರಿಸ್ಥಿತಿಯಿದೆ. ಆದ್ದರಿಂದ ತಕ್ಷಣವೇ ಸುಸಜ್ಜಿತವಾದ ಹೊಸ ಮಾದರಿಯ ಬಸ್ ತಂಗುದಾಣವನ್ನು ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿ ಕೆಶಿಪ್ ಅಧಿಕಾರಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಮ್ಮ ಮಾಗನೂರ, ಹನುಮಂತಪ್ಪ ರೆಡ್ಡಿ, ವಸಂತಪ್ಪ ಸಣ್ಣಪ್ಪನವರ, ಹನುಮಂತಪ್ಪ ಮಾಗನೂರ, ನಾಗನಗೌಡ ಮಾಗನೂರ, ಹೂವನಗೌಡ ಪಾಟೀಲ, ಮಂಜನಗೌಡ ಪಾಟೀಲ, ಅಸ್ಮತ್‌ಬಿ ನಾಸಿಪುಡಿ, ನೂರ್‌ಜಾನ್ ನಾಸಿಪುಡಿ. ಮಾದೇವಕ್ಕ ನಾಗನೂರ, ರತ್ನಮ್ಮ ಮಾಗನೂರ, ಶಾರದ ದೊಡ್ಮನಿ, ತುಂಗಮ್ಮ ಪಾಟೀಲ, ಬಸಣ್ಣ ಜಾಡರ, ಶೋಭಾ ಕಾಯಕದ, ಸುನಿತಾ ಕಾಯಕದ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.