ಗೋಕಾಕ ಮತ್ತು ಮೂಡಲಗಿ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಂದ್ ಯಶಸ್ವಿಗೊಳಿಸಲು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ನೇತೃತ್ವ ವಹಿಸಿಕೊಂಡಿರುವ ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಕೋರಿದರು.
ಕನ್ನಡಪ್ರಭ ವಾರ್ತೆ ಗೋಕಾಕ
ಗೋಕಾಕ ನೂತನ ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಡಿ.3ರಂದು, ಬುಧವಾರ ಗೋಕಾಕ ಬಂದ್ಗೆ ಕರೆ ನೀಡಲಾಗಿದ್ದು, ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲಾಗುತ್ತದೆ. ಗೋಕಾಕ ಮತ್ತು ಮೂಡಲಗಿ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಂದ್ ಯಶಸ್ವಿಗೊಳಿಸಲು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ನೇತೃತ್ವ ವಹಿಸಿಕೊಂಡಿರುವ ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ಕೋರಿದರು.ನಗರದ ಶೂನ್ಯ ಸಂಪಾದನಾ ಮಠದಲ್ಲಿ ಮಂಗಳವಾರ ನಿಯೋಜಿತ ಗೋಕಾಕ ಜಿಲ್ಲಾ ಚಾಲನಾ ಹೋರಾಟ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಕಾಕನ್ನು ಜಿಲ್ಲಾ ಕೇಂದ್ರ ಮಾಡುವ ಹೋರಾಟಕ್ಕೆ ಉಭಯ ತಾಲೂಕಿನ ಎಲ್ಲ ಜನರು ಬೆಂಬಲ ನೀಡಿ ಹೋರಾಟಕ್ಕೆ ಶಕ್ತಿಯನ್ನು ತುಂಬುವಂತೆ ಅವರು ಹೇಳಿದರು.
ಕಳೆದ ನಾಲ್ಕು ದಶಕಗಳಿಂದ ಗೋಕಾಕ ಜಿಲ್ಲೆಗಾಗಿ ಹೋರಾಟ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಗೋಕಾಕ ಜಿಲ್ಲಾ ಕೇಂದ್ರ ರಚನೆ ಮಾಡಲು ಜಾರಕಿಹೊಳಿ ಸಹೋದರರ ನೇತೃತ್ವದಲ್ಲಿ ನಿಯೋಗವೊಂದನ್ನು ಕರೆದುಕೊಂಡು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಅರ್ಪಿಸಲಾಗುವುದು. ಬೆಳಗಾವಿಯಲ್ಲಿ ಡಿ.8 ರಿಂದ ನಡೆಯುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಗೋಕಾಕದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಅದಕ್ಕೆ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಜನರು ಬೆಂಬಲಿಸಿ, ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಬುಧವಾರ ನಡೆಯುವ ಬಂದ್ನಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಚುನಾಯಿತ ಸದಸ್ಯರು, ವರ್ತಕರು, ವಕೀಲರು, ರಾಜಕೀಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಬುಧವಾರ ಬೆಳಗ್ಗೆ 10ಕ್ಕೆ ನಗರದ ಸಂಗೊಳ್ಳಿ ರಾಯಣ್ಣನ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಿ ತಹಶೀಲ್ದಾರ್ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಗುವುದು ಎಂದರು.
ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿ ಅತಿದೊಡ್ಡ ಜಿಲ್ಲೆಯಾಗಿದೆ. ದೊಡ್ಡ ಜಿಲ್ಲೆಗಳಿಗೂ ಅಷ್ಟೇ ಅನುದಾನ. ಸಣ್ಣ ಜಿಲ್ಲೆಗಳಿಗೂ ಅಷ್ಟೇ ಅನುದಾನ ಬರುತ್ತದೆ. ಇದು ಅಭಿವೃದ್ಧಿಗೆ ಕುಂಠಿತವಾಗುತ್ತದೆ. ಹೀಗಾಗಿ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ತಾಲೂಕನ್ನು ನೂತನ ಜಿಲ್ಲೆಯನ್ನಾಗಿ ಮಾಡಿ ಅಭಿವೃದ್ಧಿಗೆ ಸಹಕರಿಸಬೇಕು. ಗೋಕಾಕ ಹೊಸ ಜಿಲ್ಲೆಯನ್ನಾಗಿ ಮಾಡಲು ನಮ್ಮ ಜಾರಕಿಹೊಳಿ ಕುಟುಂಬವು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತ ಬಂದಿದೆ. ಆದಷ್ಟು ಬೇಗ ಗೋಕಾಕವು ನೂತನ ಜಿಲ್ಲೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಗೋಕಾಕ ವಕೀಲರ ಸಂಘದ ಅಧ್ಯಕ್ಷ ಸುಭಾಸಗೌಡ ಬಿರಾದಾರ ಪಾಟೀಲ ಮಾತನಾಡಿ, ವಕೀಲರ ಸಂಘದಿಂದ ಹಲವು ರೀತಿಯ ಚಳವಳಿಗಳನ್ನು ಹಮ್ಮಿಕೊಂಡು ಸರ್ಕಾರದ ಗಮನ ಸಳೆಯಲಾಗುತ್ತಿದೆ. ವರ್ತಕರು, ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಬೃಹತ್ ಹೋರಾಟ ಮಾಡಬೇಕು. ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ನಾವು ಜಿಲ್ಲಾ ಹೋರಾಟಕ್ಕೆ ಸದಾ ಬೆಂಬಲ ಕೊಡುತ್ತೇವೆ ಎಂದರು.
ಸಭೆಯಲ್ಲಿ ಜಿಲ್ಲಾ ರಚನಾ ಹೋರಾಟ ಸಮಿತಿ ಸದಸ್ಯರು, ವಕೀಲರ ಸಂಘದ ಪದಾಧಿಕಾರಿಗಳು, ನಗರಸಭೆ ಸದಸ್ಯರು, ಕನ್ನಡಪರ ಸಂಘಟನೆಗಳು, ರೈತ ಸಂಘಟನೆಗಳು, ಚುನಾಯಿತ ಸದಸ್ಯರು, ಸಹಕಾರಿ ಮುಖಂಡರು, ವರ್ತಕರು, ವಿವಿಧ ಸಂಘ- ಸಂಸ್ಥೆಗಳ ಪ್ರಮುಖರು ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.ಚಾಲನಾ ಸಮಿತಿಯಿಂದ ಹಲವು ರೂಪದ ಉಗ್ರ ಪ್ರಮಾಣದಲ್ಲಿ ಹೋರಾಟಗಳು ನಡೆದಿವೆ. ಹಾಗೆ ಪ್ರಸ್ತುತ ದಿನಮಾನಗಳಲ್ಲಿ ಉಗ್ರ ಸ್ವರೂಪದ ಹೋರಾಟಗಳನ್ನು ಮಾಡಬೇಕು. ಜೆ.ಎಚ್. ಪಟೇಲರು ಗೋಕಾಕ ಜಿಲ್ಲೆ ಮಾಡಿದರು. ಆಗ ಹಲವರು ವಿರೋಧ ಮಾಡಿದ್ದರ ಪರವಾಗಿ ಗೆಜೆಟ್ ತಡೆ ಹಿಡಿದಿದ್ದಾರೆ. ಗೋಕಾಕ ಜಿಲ್ಲೆ ಆದರೂ ಜಾರಕಿಹೊಳಿ ಸಹೋದರರಿಂದ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಜಾರಕಿಹೊಳಿ ಸಹೋದರರು ಕೂಡಿಕೊಂಡು ಗೋಕಾಕ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನಿಸಬೇಕು.
-ಬಸಗೌಡ ಪಾಟೀಲ, ಜಿಪಂನ ಮಾಜಿ ಅಧ್ಯಕ್ಷರುಗೋಕಾಕ ಜಿಲ್ಲೆ ಮಾಡಲಿಕ್ಕೆ ಸರ್ಕಾರದ ಇಚ್ಚಾಶಕ್ತಿ ಕೊರತೆಯಿದೆ. ರಾಜ್ಯದಲ್ಲಿ ಬಹಳ ಜಿಲ್ಲೆಗಳು ಅಸ್ತಿತ್ವಕ್ಕೆ ಬಂದರೂ ಕಳೆದ 4 ದಶಕಗಳಿಂದ ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಗೋಕಾಕ ಜಿಲ್ಲೆ ಮಾಡಲಿಲ್ಲ. ಹಲವು ತಾಲೂಕುಗಳು ಜಿಲ್ಲೆ ಬೇಡಿಕೆ ಇಟ್ಟಿವೆ. ಆದರೆ ಸರ್ಕಾರ ಯಾವ ತಾಲೂಕನ್ನು ಜಿಲ್ಲೆ ಮಾಡಿದರೆ ಸೂಕ್ತ ಎಂಬುದನ್ನು ವಿಚಾರ ಮಾಡಿ ನಿಯೋಗಗಳ ವರದಿ ಆಧರಿಸಿ ನೂತನ ಜಿಲ್ಲೆ ಮಾಡಬೇಕು. ಗೋಕಾಕ ಜಿಲ್ಲೆಯಾಗಲಿ ಎಂಬುದು ನಮ್ಮ ಮಹಾದಾಸೆ.
- ಅಶೋಕ ಪೂಜೇರಿ, ರಾಜಕೀಯ ಮುಖಂಡರುಗೋಕಾಕ ಜಿಲ್ಲೆ ಆಗಿ ನಾವೆಲ್ಲರೂ ವಿಜಯೋತ್ಸವ ಮಾಡಿದ್ದೆವು. ಆದರೆ ಕೆಲವರ ಬಲವಾದ ವಿರೋಧದ ನಡುವೆ ಸರ್ಕಾರ ಅದನ್ನು ಹಿಂದಕ್ಕೆ ಪಡೆಯಿತು. ಜಾರಕಿಹೊಳಿ ಸಹೋದದರು ಮನಸು ಮಾಡಿದರೆ ಗೋಕಾಕ ಜಿಲ್ಲೆ ಆಗುವುದರಲ್ಲಿ ಎರಡು ಮಾತಿಲ್ಲ. ಅವರು ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸಬೇಕು.
-ರಾಜೇಂದ್ರ ಸಣ್ಣಕ್ಕಿ, ಪ್ರದೇಶ ಕುರುಬರ ಸಂಘದ ನಿರ್ದೇಶಕರು