ಸರಗಳ್ಳರ ಬಂಧನ: ₹14.50 ಲಕ್ಷದ ಚಿನ್ನ, ಸ್ಕೂಟರ್‌ ಜಪ್ತಿ

| Published : Apr 27 2025, 01:30 AM IST

ಸಾರಾಂಶ

ಸರಣಿ ಸರಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ₹14.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್‌ ವಿದ್ಯಾನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ದಾವಣಗೆರೆ: ಸರಣಿ ಸರಗಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ, ₹14.50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್‌ ವಿದ್ಯಾನಗರ ಪೊಲೀಸರು ಜಪ್ತಿ ಮಾಡಿದ್ದಾರೆ.

ನಗರದ ಭಾರತ್ ಕಾಲನಿ ವಾಸಿ, ಆಟೋ ಚಾಲಕ ಡಿ.ಪಿ. ಅರುಣಕುಮಾರ (28), ಲಾರಿ ಚಾಲಕ ಬಕ್ಕೇಶ (29) ಬಂಧಿತ ಆರೋಪಿಗಳು. ವಿದ್ಯಾನಗರ ಠಾಣೆ ವ್ಯಾಪ್ತಿಯಲ್ಲಿ ಏ.22ರಂದು ಬೆಳಗ್ಗೆ ಡಿ.ಪಿ.ಪುಷ್ಪಾ ಪ್ರೇಮಣ್ಣ ಮನೆಗೆ ಹೋಗುವಾಗ ಎಸ್‌ಎಸ್‌ ಲೇಔಟ್‌ ಬಿ ಬ್ಲಾಕ್‌ನಲ್ಲಿ ಸ್ಕೂಟರ್‌ನಲ್ಲಿ ಬಂದ ಓರ್ವ ಕೊರಳಲ್ಲಿದ್ದ 30 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದನು. ದೂರು ದಾಖಲಿಸಿದ್ದ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಭಾರತ್ ಕಾಲನಿ ಆಟೋ ರಿಕ್ಷಾ ಚಾಲಕ ಆರೋಪಿ ಡಿ.ಪಿ.ಅರುಣಕುಮಾರ, ಲಾರಿ ಚಾಲಕ ಬಕ್ಕೇಶನನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದಾಗ ಇನ್ನೂ ಹಲವು ಪ್ರಕರಣ ಪತ್ತೆಯಾಗಿವೆ.

ವಿದ್ಯಾನಗರ ಠಾಣೆ ವ್ಯಾಪ್ತಿಯ ಒಟ್ಟು 6 ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 176 ಗ್ರಾಂ ತೂಕದ ₹14 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಹೊಂಡಾ ಆಕ್ಟೀವಾ ಸ್ಕೂಟರ್‌ ಜಪ್ತಿ ಮಾಡಲಾಗಿದೆ. ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೊಲೀಸ್‌ ತಂಡದ ಕಾರ್ಯವನ್ನು ಜಿಲ್ಲ ಎಸ್‌ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

ಪಿರ್ಯಾದಿಗಳ ಸ್ವತ್ತನ್ನು ವಿದ್ಯಾನಗರ ಠಾಣೆಯಲ್ಲಿ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ ಮರಳಿಸಿದರು. ಕೆಲ ಮಹಿಳೆಯರಂತೂ ಕಷ್ಟಪಟ್ಟು, ಕೂಡಿಟ್ಟು ಮಾಡಿಕೊಂಡಿದ್ದ ಚಿನ್ನದ ಸರ ಸಿಕ್ಕ ಖುಷಿಯಲ್ಲಿ ಕಣ್ಣೀರು ಹಾಕಿದರು.

- - -

-26ಕೆಡಿವಿಜಿ4:

ದಾವಣಗೆರೆ ವಿದ್ಯಾನಗರ ಠಾಣೆ ವ್ಯಾಪ್ತಿಯ ಸರಗಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ, ₹14.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ ಆಭರಣಗಳನ್ನು ವಾರಸುದಾರರಿಗೆ ಮರಳಿಸಲಾಯಿತು. ಎಸ್‌ಪಿ ಉಮಾ ಪ್ರಶಾಂತ, ಪೊಲೀಸ್ ಅಧಿಕಾರಿ, ಸಿಬ್ಬಂದಿ ಇದ್ದರು.

-26ಕೆಡಿವಿಜಿ5:

ದಾವಣಗೆರೆ ವಿದ್ಯಾನಗರ ಠಾಣೆ ವ್ಯಾಪ್ತಿಯ ಸರಗಳ್ಳತನಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ, ₹14.50 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ ಪೊಲೀಸ್ ಅಧಿಕಾರಿ, ಸಿಬ್ಬಂದಿ ಸೇವೆಯನ್ನು ಎಸ್‌ಪಿ ಉಮಾ ಪ್ರಶಾಂತ ಶ್ಲಾಘಿಸಿದರು. -26ಕೆಡಿವಿಜಿ6:

ಸರಗಳ್ಳರನ್ನು ಹಿಡಿದು, ಮಾಂಗಲ್ಯ ವಶಕ್ಕೆ ಪಡೆದು, ಮಹಿಳೆಗೆ ಸರ ವಾಪಸ್‌ ಕೊಟ್ಟ ಸಂದರ್ಭ ಎಸ್‌ಪಿ ಉಮಾ ಪ್ರಶಾಂತ ಸಮ್ಮುಖ ಮಹಿಳೆ ಭಾವುಕರಾಗಿ ಕಣ್ಣೀರು ಹಾಕುತ್ತ, ಇಲಾಖೆಗೆ ಧನ್ಯತೆ ಅರ್ಪಿಸಿದರು.