ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಅಖಿಲ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ ಸಮಾರಂಭ ಆ. 15ರ ಸಂಜೆ 4.30ಕ್ಕೆ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆಯಲಿದೆ.
ಗದಗ: ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ 50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಅಖಿಲ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ ಸಮಾರಂಭ ಆ. 15ರ ಸಂಜೆ 4.30ಕ್ಕೆ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆಯಲಿದೆ.
ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಗದಗ ಉತ್ಸವದ ರಜತ ಮಹೋತ್ಸವ ಹಾಗೂ ಶ್ರೇಷ್ಠ ವರ್ತಕ, ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ತಾತನಗೌಡ ಪಾಟೀಲ ಹೇಳಿದರು.ನಗರದ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.50ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಅಖಿಲ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಮ್ಮೇಳನ ಉದ್ಘಾಟನಾ ಸಮಾರಂಭ ಆ. 15ರಂದು ನಡೆಯಲಿದ್ದು, ಸಾನಿಧ್ಯವನ್ನು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸುವರು. ವಿಪ ಸಭಾಪತಿ ಬಸವರಾಜ ಹೊರಟ್ಟಿ ಉಪಸ್ಥಿತರಿರಲಿದ್ದಾರೆ. ಉದ್ಘಾಟಕರಾಗಿ ಎಚ್.ಕೆ.ಪಾಟೀಲ ಆಗಮಿಸಲಿದ್ದಾರೆ. ಸ್ಮರಣ ಸಂಚಿಕೆ ಬಿಡುಗಡೆ ವಿಜಯ ಸಂಕೇಶ್ವರ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಶರಣಬಸಪ್ಪ ದರ್ಶಾನಾಪುರ, ವಿ.ಪ. ಸದಸ್ಯ ಸಲೀಂ ಅಹ್ಮದ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.ಆ. 16ರಂದು ಸುವರ್ಣ ಮಹೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟದ ಪಾರಿತೋಷಕ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಸಾನಿಧ್ಯವನ್ನು ಡಾ. ಕಲ್ಲಯ್ಯಜ್ಜನವರು ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಕಳಕಪ್ಪ ಬಂಡಿ ಮುಂತಾದವರು ಆಗಮಿಸುವರು. ಇದೇ ವೇಳೆ ಸಂಸ್ಥೆಯ ಮಾಜಿ ಅಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಗೌರವ ಸನ್ಮಾನವನ್ನು ವಿಜಯನಿಧಿ ಆಗ್ರೋ ಇಂಡಸ್ಟ್ರೀಜ್, ಗದಗ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ 2025ನೇ ಸಾಲಿನ ವಾಣಿಜ್ಯ ರತ್ನ ಪ್ರಶಸ್ತಿ ಪುರಸ್ಕೃತ ಶರಣಬಸಪ್ಪ ಸಂಗಪ್ಪ ಗುಡಿಮನಿ ಮಾಡಲಿದ್ದು, ವಿಜೇತ ಕ್ರೀಡಾಪಟುಗಳಿಗೆ ಪಾರಿತೋಷಕ ವಿತರಣೆಯನ್ನು ಮಾಡಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್. ಪಾಟೀಲ ವಹಿಸಿಕೊಳ್ಳಲಿದ್ದಾರೆ ಎಂದರು. ಗದಗ ಉತ್ಸವ ಸಮಿತಿ ಅಧ್ಯಕ್ಷ ಆನಂದ ಪೋತ್ನಿಸ್ ಮಾತನಾಡಿ, ಆ. 17ರಂದು ಗದಗ ಉತ್ಸವದ ರಜತ ಮಹೋತ್ಸವ ಹಾಗೂ ಶ್ರೇಷ್ಠ ವರ್ತಕ, ಶ್ರೇಷ್ಠ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಾನಿಧ್ಯವನ್ನು ಜಗದ್ಗುರು ಡಾ. ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದು, ಮುಖ್ಯ ಅತಿಥಿಗಳಾಗಿ ಸಚಿವ ಎಂ.ಬಿ. ಪಾಟೀಲ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಸಿ. ಪಾಟೀಲ, ಡಾ. ಚಂದ್ರು ಲಮಾಣಿ ಸೇರಿದಂತೆ ಅನೇಕರು ಉಪಸ್ಥಿತರಿರಲಿದ್ದಾರೆ. ಇದೇ ವೇಳೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಪಾರ್ವತಿ ಪಶುಪತಯ್ಯ (ಬಾಬಣ್ಣ) ಶಾಬಾದಿಮಠ, ಪೂರ್ಣಿಮಾ ಕೃಷ್ಣ ಆಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಆ. 18ರಂದು ಮಹಿಳೆಯರಿಗಾಗಿ ಜರುಗಿದ ವಿವಿಧ ಕ್ರೀಡಾಕೂಟ ಹಾಗೂ ಅಡುಗೆ ಸ್ಪರ್ಧೆ ವಿಜೇತರಿಗೆ ಪಾರಿತೋಷಕ ವಿತರಣೆ ಹಾಗೂ ಸಾಂಸ್ಕೃತಿಕ ಸಮಾರಂಭ ನಡೆಯಲಿದೆ. ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳಿಂದ ಫುಡ್ ಫೆಸ್ಟಿವಲ್, ಬೀದಿ ಆಹಾರ ಉತ್ಸವ ಸಾಯಂಕಾಲ ನಡೆಯಲಿದ್ದು, ಸಾನಿಧ್ಯವನ್ನು ಡಾ.ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಶ್ರೀಗಳು ಜುಕ್ತಿಹಿರೇಮಠ, ಸೂಡಿ-ಗದಗ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉತ್ಸವ ಗಾರ್ಡನ ಕಲಾ ನಿರ್ದೇಶಕ ಡಾ. ವೇದಾರಾಣಿ ದಾಸನೂರ, ಕಲಬುರಗಿಯ ಅನ್ನಪೂರ್ಣ ಆರ್. ಸಂಗೋಳಗಿ ಆಗಮಿಸಲಿದ್ದಾರೆ ಅಂತ ಆನಂದ ಪೋತ್ನಿಸ್ ತಿಳಿಸಿದರು.ಆ. 19ರಂದು ಬೆಳಗ್ಗೆ ವಿಚಾರ ಸಂಕಿರಣ ಆಯೋಜಿಸಲಾಗಿದ್ದು, ಸರಕು ಮತ್ತು ಸೇವಾ ತೆರಿಗೆಗೆ ಇತ್ತಿಚಿನ ಬೆಳವಣಿಗೆ ಕುರಿತು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಸುಕನ್ಯಾ ನಾಯಕ ಉಪನ್ಯಾಸ ನೀಡಲಿದ್ದಾರೆ. ರಪ್ತು ಉತ್ತೇಜನ ಹಾಗೂ 2025-2030ರ ಕೈಗಾರಿಕಾ ನೀತಿ ಕುರಿತು ಗದಗ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಟಿ. ಎಸ್. ಉಪನ್ಯಾಸ ನೀಡಲಿದ್ದಾರೆ. ಸಾಯಂಕಾಲ ಶ್ರೇಷ್ಠ ಮಳಿಗೆ ಪ್ರಶಸ್ತಿ ಪ್ರದಾನ ಹಾಗೂ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ, ಜಿ. ಪಂ ಸಿಇಓ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶರಣಬಸಪ್ಪ ಗುಡಿಮನಿ, ವಿಜಯಕುಮಾರ ಮಾಟಲದಿನ್ನಿ, ಶಿವಯ್ಯ ನಾಲತ್ವಾಡಮಠ, ಅಶೋಕಗೌಡ ಪಾಟೀಲ, ರಾಘವೇಂದ್ರ ಕಾಲವಾಡ, ಸೋಮನಾಥ ಜಾಲಿ, ಸಂಜಯ ಬಾಗಮಾರ, ನಂದಾ ಬಾಳಿಹಳ್ಳಿಮಠ, ದೀಪಾ ಗದಗ, ಸುಷ್ಮಾ ಜಾಲಿ, ಸುಜಾತ ಗುಡಿಮನಿ, ಜ್ಯೋತಿ ದಾನಪ್ಪಗೌಡ್ರ, ಲಲಿತಾ ತಡಸದ, ಸುಧಾ ಹುಣಸಿಕಟ್ಟಿ, ಪೂರ್ಣಿಮಾ ಆಟದ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಸಮಾಜಮುಖಿ ಕಾರ್ಯದಲ್ಲಿ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿಗೆ, ಪೋಸ್ಟ್ ಮ್ಯಾನ್, ಕೆಇಬಿ, ಪೊಲೀಸ್ ಸಿಬ್ಬಂದಿ, ಶಿಕ್ಷಕ, ಶಿಕ್ಷಕಿಯರು, ಆಟೋ ಚಾಲಕರು, ರೈತರು, ಎಪಿಎಂಸಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಹಾಗೂ ಗೌಂಡಿ ಮೆಸ್ತ್ರಿಗಳು ಸೇರಿದಂತೆ ಹಲವರಿಗೆ ಸನ್ಮಾನ ಮಾಡಿ ಗೌರವಿಸಲಾಗುವುದು ಗದಗ ಜಿಲ್ಲಾ ಉತ್ಸವ ಸಮಿತಿ ಅಧ್ಯಕ್ಷ ಆನಂದ ಎಲ್. ಪೋತ್ನಿಸ್ ಹೇಳಿದರು.