ಸಾರಾಂಶ
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ ನಾಡಹಬ್ಬ ದಸರಾ ಸಮಿತಿಯ ೩೬ನೇ ವರ್ಷದ ದಸರಾ ಉತ್ಸವದಲ್ಲಿ ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಪ್ರಕೃತಿ ದುರಂತ, ಆರೋಗ್ಯ, ಶಿಕ್ಷಣ, ಕೃಷಿ, ವಿಚಾರಗಳು ಪ್ರದರ್ಶನ ಗೊಂಡವು.ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಿಂದ ಶ್ರೀ ಉಮಾಶ್ರೀ ದೇವಸ್ಥಾನದ ವರೆಗೆ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು.ವಯನಾಡು ಭೂಕುಸಿತದಿಂದ ಉಂಟಾದ ದುರಂತ, ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಬರುವಂತೆ, ಡೆಂಘೀ ಸೊಳ್ಳೆ ನಿಯಂತ್ರಣ ಜಾಗೃತಿ, ಪೌರಕಾರ್ಮಿಕರ ಭವಣೆ ಸೇರಿದಂತೆ ೧೩ ಸ್ತಬ್ಧ ಚಿತ್ರಗಳು ಗೋಣಿಕೊಪ್ಪ ದಸರಾ ಮೆರವಣಿಗೆಯಲ್ಲಿ ಗಮನ ಸೆಳೆದವು.ನಾಡಹಬ್ಬ ದಸರಾ ಸಮಿತಿ ಗೌರವ ಅಧ್ಯಕ್ಷ ಪ್ರಭಾಕರ್ ನಲ್ಲಿತ್ತಾಯ ಸ್ತಬ್ಧ ಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು.ಸರ್ಕಾರಿ ಇಲಾಖೆಯಿಂದ ಏಳು ಮತ್ತು ಇತರ ಸಂಘ ಸಂಸ್ಥೆಗಳಿಂದ ಆರು ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು.ಶಾಲೆಗೆ ಮರಳಿ ಬನ್ನಿ ಎಂಬ ಜಾಗೃತಿ ಅಭಿಯಾನನ್ನು ಬಿಂಬಿಸುವ ಸ್ತಬ್ಧ ಚಿತ್ರವನ್ನು ಶಿಕ್ಷಣ ಇಲಾಖೆ ನಿರ್ಮಿಸಿತು.ಆರೋಗ್ಯ ಇಲಾಖೆ ಡೆಂಘೀ ಸೊಳ್ಳೆ ನಿಯಂತ್ರಣದ ಬಗ್ಗೆ ಜಾಗೃತಿ ಅರಿವು ಮೂಡಿಸಲು ಸ್ತಬ್ಧ ಚಿತ್ರದ ಮೂಲಕ ಪ್ರಯತ್ನಿಸಿತು.ತೋಟಗಾರಿಕೆ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತಾಲೂಕು ಪಂಚಾಯಿತಿ, ಜಲ್ ಜೀವನ್, ಪರಿಶಿಷ್ಟ ಕಲ್ಯಾಣ ಇಲಾಖೆಯ ಯೋಜನೆಗಳನ್ನು ಸಾರಿತು.ಪೊನ್ನಂಪೇಟೆ ಗೆಳೆಯರ ಬಳಗ ಪೌರಕಾರ್ಮಿಕರ ಬವಣೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿತು.ಸರ್ವಂ ಗೋಣಿಕೊಪ್ಪ ಸಂಘ, ವಯನಾಡು ದುರಂತ, ಪರಿಸರ ನಾಶ ಮತ್ತು ಭೂಕುಸಿತಕ್ಕೆ ಮಾನವನ ಅತಿರೇಕದ ವರ್ತನೆ ಕಾರಣ ಎಂಬ ಚಿತ್ರಣವನ್ನು ನೀಡಿತು. ಭಗತ್ ಸಿಂಗ್ ಯುವಕ ಸಂಘ, ರೈತರೇ ಈ ದೇಶದ ಬೆನ್ನೆಲುಬು, ಆಹಾರವಿದ್ದರಷ್ಟೇ ಪ್ರಪಂಚ ಮತ್ತು ಮನುಷ್ಯ ಉಳಿದುಕೊಳ್ಳಲು ಸಾಧ್ಯ ಎಂಬುದನ್ನು ತಿಳಿಸಿದರು.ಪರಿಸರ ಪ್ರೇಮಿ ಕೈಕೇರಿ, ವಯನಾಡಿನ ಭೂಕುಸಿತಕ್ಕೆ ಕೊಚ್ಚಿಹೋದ ತಾಯಿ ಮಗುವಿನ ಚಿತ್ರಣವನ್ನು ಬಿಂಬಿಸಿತು. ಮಹಿಳಾ ಸ್ತಬ್ಧ ಚಿತ್ರ ಸಂಘದಲ್ಲಿ ತಲಕಾವೇರಿಯ ಚಿತ್ರಣವನ್ನು ಅನಾವರಣಗೊಳಿಸಿದರು.ಗೋಣಿಕೊಪ್ಪ ಪ್ರಜಾಪಿತ ಬ್ರಹ್ಮ ಕಮಾರಿ ಸಂಸ್ಥೆ, ಮಹಿಳೆಯರ ಮೇಲಾಗುತ್ತಿರುವ ಶೋಷಣೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನಿಸುವ ಮನೋಭಾವದ ಜಾಗೃತಿಯನ್ನು ಹುಟ್ಟು ಹಾಕಿದರು.