ಉತ್ತಮ ಪುಸ್ತಕಗಳು ಆದರ್ಶ ಜೀವನದ ಮಾರ್ಗದರ್ಶಿಗಳು

| Published : Jun 20 2024, 01:13 AM IST

ಸಾರಾಂಶ

ಗದಗ ಜಿಲ್ಲಾ ಕಾರಾಗೃಹದಲ್ಲಿ ಕಾರಾಗೃಹ ಬಂದಿಗಳ ಮನ ಪರಿವರ್ತನೆಗಾಗಿ ಸಾಹಿತ್ಯದ ಪುಸ್ತಕ ಹಾಗೂ ಮಹಿಳಾ ಬಂದಿಗಳಿಗೆ ವಸ್ತ್ರದಾನ ವಿತರಣಾ ಕಾರ್ಯಕ್ರಮ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ನಡೆಯಿತು.

ಗದಗ: ಉತ್ತಮ ಪುಸ್ತಕಗಳು ಮೌಲ್ಯಾಧಾರಿತ ಆದರ್ಶ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಹೇಳಿಕೊಡುವ ಮಾರ್ಗದರ್ಶಿಗಳಾಗಿವೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಹೇಳಿದರು.

ಅವರು ಮಂಗಳವಾರ ಗದಗ ಜಿಲ್ಲಾ ಕಾರಾಗೃಹದಲ್ಲಿ, ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮದ್ದೂರಿನ ಕರ್ನಾಟಕ ರಾಜ್ಯ ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆ ಹಾಗೂ ಜಿಲ್ಲಾ ಕಾರಾಗೃಹದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರಾಗೃಹ ಬಂದಿಗಳಿಗೆ ಮನ ಪರಿವರ್ತನೆಗಾಗಿ ಸಾಹಿತ್ಯದ ಪುಸ್ತಕ ಹಾಗೂ ಮಹಿಳಾ ಬಂದಿಗಳಿಗೆ ವಸ್ತ್ರದಾನ ವಿತರಣಾ ಕಾರ್ಯಕ್ರಮ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಚಾರಣಾ ಖೈದಿಗಳ ಮನಪರಿವರ್ತನೆಗಾಗಿ ಪುಸ್ತಕಗಳನ್ನು ವಿತರಿಸಿದ್ದು, ಖೈದಿಗಳು ಪುಸ್ತಕಗಳನ್ನು ಓದುವ ಮೂಲಕ ಅದರ ವಿಚಾರಧಾರೆಗಳನ್ನು, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಜೈಲಿನಿಂದ ಹೊರ ಬಂದ ಆನಂತರ ಉತ್ತಮವಾದ ಜೀವನ ನಡೆಸಬೇಕು. ಈ ಹಿನ್ನೆಲೆಯಲ್ಲಿ ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯು ಸಾಮಾಜಿಕ ಕಳಕಳಿಯಿಂದ ಪುಸ್ತಕಗಳನ್ನು ವಿತರಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳುವ ಮೂಲಕ ಬಿಡುಗಡೆಗೆಯ ಬಳಿಕ ಉತ್ತಮ ಜೀವನ ನಡೆಸಿ ಎಂದು ವಿಚಾರಣಾ ಕೈದಿಗಳಿಗೆ ಹೇಳಿದರು.

ಕಾನೂನು ಕೈಗೆತ್ತಿಕೊಂಡು ಅಪರಾಧ ಎಸಗುವುದರಿಂದಾಗಿ ಅನೇಕ ಬಾರಿ ತಮ್ಮ ಅವಲಂಬಿತರು, ಮಕ್ಕಳು ಅನಾಥರಾಗುತ್ತಾರೆ. ಯಾವುದೇ ಸಮಸ್ಯೆ ಇದ್ದರೂ ಕಾನೂನಿನ ಅಡಿಯಲ್ಲೇ ಬಗೆಹರಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ರಜನಿ ರಾಜ್ ಮಾತನಾಡಿ, ಸಂಸ್ಥೆಯ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ರೀತಿ ಖೈದಿಗಳಿಗೆ ಪುಸ್ತಕಗಳನ್ನು ವಿತರಿಸಿದ್ದು, ಖೈದಿಗಳು ಪುಸ್ತಕಗಳನ್ನು ಓದುವ ಮೂಲಕ ಸಮಾಜದಲ್ಲಿ ಉತ್ತಮ ನಾಗರಿಕರಾಗಬೇಕು ಎಂದರು.

ಧ್ವನಿ ಮಹಿಳಾ ಮತ್ತು ಮಕ್ಕಳ ಸಂಸ್ಥೆಯ ಗದಗ ಜಿಲ್ಲಾಧ್ಯಕ್ಷೆ ಸುಗುಲಾ ಯಳಮಲಿ ಹಾಗೂ ಜಿಲ್ಲಾ ಕಾರಾಗೃಹದ ಅಧೀಕ್ಷಕ ಎಚ್.ಎ. ಚೌಗಲೆ ಮಾತನಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಸ್. ಶಿವನಗೌಡ್ರ, ಹೆಚ್ಚುವರಿ ಪೊಲೀಸ್ ಉಪಾಧೀಕ್ಷಕ ಎಂ.ಬಿ. ಸಂಕದ, ಲೈಯನ್ಸ್ ಕ್ಲಬ್ ಅಧ್ಯಕ್ಷ ಸತೀಶ ಶಾಬಾದಿಮಠ ಉಪಸ್ಥಿತರಿದ್ದರು. ಶಿರಸ್ತೇದಾರ ಬಿ.ಎಂ. ಕುಕನೂರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.