ಬಾಳೆಹೊನ್ನೂರುಪಟ್ಟಣದ ವಿಜಯಮಾತೆ ಚರ್ಚ್ ನಲ್ಲಿ ಶುಕ್ರವಾರ ನಡೆಯಲಿರುವ ಗುಡ್‌ಫ್ರೈಡೆ ಪೂರ್ವಭಾವಿಯಾಗಿ ಗರಿಗಳ ಭಾನುವಾರ ಹಬ್ಬವನ್ನು ಆಚರಿಸಲಾಯಿತು

ಗರಿಗಳನ್ನು ಹಿಡಿದು ಏಸು ಕ್ರಿಸ್ತರ ಜಯಘೋಷಗಳೊಂದಿಗೆ ಮೆರವಣಿಗೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ವಿಜಯಮಾತೆ ಚರ್ಚ್ ನಲ್ಲಿ ಶುಕ್ರವಾರ ನಡೆಯಲಿರುವ ಗುಡ್‌ಫ್ರೈಡೆ ಪೂರ್ವಭಾವಿಯಾಗಿ ಗರಿಗಳ ಭಾನುವಾರ ಹಬ್ಬವನ್ನು ಆಚರಿಸಲಾಯಿತು.ಗರಿಗಳ ಭಾನುವಾರದ ಅಂಗವಾಗಿ ಕ್ರೈಸ್ತ ಬಾಂಧವರು ಧರ್ಮಗುರುಗಳು ಆಶೀರ್ವದಿಸಿ ನೀಡಿದ ಗರಿಗಳನ್ನು ಹಿಡಿದು ಏಸು ಕ್ರಿಸ್ತರ ಜಯಘೋಷಗಳೊಂದಿಗೆ ಮೆರವಣಿಗೆ ನಡೆಸಿ, ಏಸುಕ್ರಿಸ್ತರ ಸ್ತುತಿಗಳನ್ನು ಪಠಿಸಿದರು. ವಿಜಯಮಾತೆ ಚರ್ಚ್ ಧರ್ಮಗುರು ಪೌಲ್ ಡಿಸೋಜಾ ಆರ್ಶೀವಚನ ನೀಡಿ, ಕ್ರೈಸ್ತ ಬಾಂಧಧವರಿಗೆ ಇದೇ ವಾರ ಬರಲಿರುವ ಪವಿತ್ರ ಶುಕ್ರವಾರವನ್ನು ವಿಶೇಷವಾಗಿ ಏಸುಕ್ರಿಸ್ತರ ಸ್ಮರಣೆಯೊಂದಿಗೆ ಆಚರಿಸಬೇಕು. ಅವರು ನೀಡಿದ ಸಂದೇಶದಂತೆ ಪವಿತ್ರ ವಾರದ ಸಂದರ್ಭದಲ್ಲಿ ಜಾತಿ, ಮತ ಬೇಧವಿಲ್ಲದೆ ಬಡವರು, ದೀನ ದಲಿತರಿಗೆ ಕ್ರೈಸ್ತ ಬಾಂಧವರು ಸಹಾಯಹಸ್ತ ಚಾಚಬೇಕು. ವಿಶ್ವದಲ್ಲಿ ನಡೆಯುತ್ತಿರುವ ಯುದ್ಧದ ವಾತಾವರಣ ಕಡಿಮೆಯಾಗಿ ಎಲ್ಲೆಡೆ ಶಾಂತಿ, ಸೌಹಾರ್ದತೆ ನೆಲೆಸಬೇಕು ಎಂದು ಪ್ರತಿ ಯೊಬ್ಬರೂ ಪ್ರಾರ್ಥಿಸಬೇಕಿದೆ ಎಂದರು. ಏಸುವಿನ ಮರಣದ ಐದು ದಿನಗಳ ಮೊದಲು ಆಚರಿಸುವ ಹಬ್ಬವೇ ಗರಿಗಳ ಭಾನುವಾರವಾಗಿದೆ. ಒಂದು ಹೇಸರುಗತ್ತೆಯ ಮೇಲೆ ಏಸುಕ್ರಿಸ್ತರು ಜೆರುಸಲೇಂ ಅನ್ನು ಪ್ರವೇಶಿಸಿದ ವಿಶೇಷ ಘಟನೆಯನ್ನು ಈ ಭಾನುವಾರ ಸ್ಮರಿಸುತ್ತದೆ. ಜನರ ದೊಡ್ಡ ಗುಂಪು ಏಸು ಕ್ರಿಸ್ತರನ್ನು ಹಿಂಬಾಲಿಸುತ್ತ ಜೈಕಾರ ಹಾಕುತ್ತ ಗರಿಗಳನ್ನು ಹಿಡಿದು ಜೆರುಸಲೇಂ ಅನ್ನು ಪ್ರವೇಶಿಸುತ್ತಾರೆ. ಆದರೆ ಇದೇ ಜನರು ಕೆಲವು ವಿರೋಧಿಗಳಿಂದ ಏಸುಕ್ರಿಸ್ತರ ವಿರುದ್ಧ ಹೇಳಿಕೆಗಳನ್ನು ನೀಡಿ ಅವರ ಯಾತನೆಯ ಬದುಕಿಗೆ ನಾಂದಿ ಹಾಡುತ್ತಾರೆ. ಈ ಎರಡು ಆಚರಣೆಗಳ ಸಮಾಗಮವೇ ಗರಿಗಳ ಭಾನುವಾರವಾಗಿದೆ ಎಂದರು. ೨೯ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ವಿಜಯಮಾತೆ ಚರ್ಚ್ ನಲ್ಲಿ ಗುಡ್‌ಫ್ರೈಡೆ ಪೂರ್ವಭಾವಿಯಾಗಿ ಗರಿಗಳ ಭಾನುವಾರ ಹಬ್ಬವನ್ನು ಆಚರಿಸಲಾಯಿತು.