ಗಂಗಾವತಿ: ಜ್ಞಾನ, ಶಿಸ್ತು ಮತ್ತು ಸಂಸ್ಕಾರದಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ಡಿಐಜಿ ರವಿ.ಡಿ. ಚನ್ನಣ್ಣನವರ ಹೇಳಿದರು.

ಅವರು ನಗರದ ಐಎಂಎ ಭವನದಲ್ಲಿ ಜ್ಞಾನಸಿರಿ ಪ್ರಥಮ ದರ್ಜೆ ಕಲಾ ಮತ್ತು ಮಹಿಳಾ ವಾಣಿಜ್ಯ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಶಕ್ತಿಯಾಗಿದೆ. ವಿದ್ಯಾರ್ಥಿನಿಯರು ಜೀವನದಲ್ಲಿ ದೊಡ್ಡ ಗುರಿ ಹೊಂದಿ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಪ್ರತಿಯೊಬ್ಬರೂ ಸಮಯದ ಮಹತ್ವ ಅರಿತು ಶಿಸ್ತು, ಪ್ರಾಮಾಣಿಕತೆ ಮತ್ತು ಪರಿಶ್ರಮ ಜೀವನದ ಮೌಲ್ಯಗಳನ್ನಾಗಿ ಅಳವಡಿಸಿಕೊಳ್ಳಬೇಕು. ಇಂದಿನ ಯುವಜನತೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಜ್ಞಾನವೃದ್ಧಿಗೆ ಬಳಸಬೇಕು ಹೊರತು ದುರ್ಬಳಕೆಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.ಮಹಿಳೆಯರು ಶಿಕ್ಷಣದ ಮೂಲಕ ಸಮಾಜದಲ್ಲಿ ನಾಯಕತ್ವ ವಹಿಸುವ ಸಾಮರ್ಥ್ಯ ಹೊಂದಿದ್ದು, ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಆತ್ಮಸ್ಥೈರ್ಯ, ನಿರಂತರ ಅಧ್ಯಯನ ಮತ್ತು ಕಠಿಣ ಪರಿಶ್ರಮ ಅಗತ್ಯ. ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನ ಗೌರವಿಸಿ ಉತ್ತಮ ನಾಗರಿಕರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ದೇಶದ ಅಭಿವೃದ್ಧಿಗೆ ವಿದ್ಯಾವಂತ, ಸಂಸ್ಕಾರವಂತ ಮತ್ತು ಜವಾಬ್ದಾರಿಯುತ ಯುವ ಸಮುದಾಯ ಅಗತ್ಯವಾಗಿದೆ. ವಿದ್ಯಾರ್ಥಿನಿಯರು ತಮ್ಮ ಪ್ರತಿಭೆ ಗುರುತಿಸಿಕೊಂಡು ಉನ್ನತ ಗುರಿಯೊಂದಿಗೆ ಮುನ್ನಡೆದರೆ ಕುಟುಂಬ, ಸಮಾಜ ಹಾಗೂ ರಾಷ್ಟ್ರಕ್ಕೂ ಕೀರ್ತಿ ತಂದುಕೊಡಬಹುದು ಎಂದರು.

ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ನ್ಯಾಯಾಧೀಶರಾಗಿ ನಿವೃತ್ತಿಯಾಗಿರುವ ಎನ್.ಎಸ್.ಪಾಟೀಲ್ ಕಾಲೇಜು ಪ್ರಾರಂಭಿಸಿ ಮಕ್ಕಳಿಗೆ ವಿದ್ಯಾರ್ಜನೆ ನೀಡಿದ್ದಾರೆ. ಈ ಸಂಸ್ಥೆಗೆ ಸದಾ ಸಹಕಾರ ನೀಡುವದಾಗಿ ಹೇಳಿದರು.


ಶಾಸಕ ಶಿವರಾಜ ತಂಗಡಗಿ ಮಾತನಾಡಿ, ನ್ಯಾಯಾಧೀಶರಾಗಿ ನಿವೃತ್ತಿಯಾಗಿರುವ ಪಾಟೀಲ್ ಅವರು ರಾಜಕೀಯ ಕ್ಷೇತ್ರದಲ್ಲಿ ಭಾಗವಹಿಸಬೇಕಾಗಿತ್ತು. ಈ ಹಿಂದೆಯು ಸಹ ರಾಜಕೀಯ ಕ್ಷೇತ್ರದಲ್ಲಿದ್ದು ನಂತರ ನ್ಯಾಯಾಂಗ ಕ್ಷೇತ್ರಕ್ಕೆ ಹೋಗಿದ್ದಾರೆ. ಇವರು ಕಾಲೇಜು ಪ್ರಾರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿರುವದು ಪ್ರಶಂಸನೀಯವಾಗಿದೆ ಎಂದರು.

ಅಂಕಲಿಮಠ ವೀರಭದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಅದ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ , ನಿವೃತ್ತ ನ್ಯಾಯಾಧೀಶ ಎನ್.ಎಸ್.ಪಾಟೀಲ್ ವಹಿಸಿದ್ದರು.

ಈ ವೇಳೆ ಸುಕ್ಷೇತ್ರ ಸುಳೇಕಲ್ ಭುವನೇಶ್ವರಯ್ಯ ತಾತಾನವರು, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹಿರೇಮಠ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಶಾಸಕ ಜಿ.ವೀರಪ್ಪ, ಮಾಜಿ ಎಂಎಲ್ ಸಿ ಎಚ್.ಆರ್.ಶ್ರೀನಾಥ, ಮಾಜಿ ಸಂಸದ ಶಿವರಾಮಗೌಡ, ವಾಲ್ಮೀಕಿ ಸಮಾಜದ ಮುಖಂಡ ಜೋಗದ ನಾರಾಯಣಪ್ಪ ನಾಯಕ, ಕಂಪ್ಲಿ ತಹಸೀಲ್ದಾರ ಜಾಗಲ್ ಮಂಜುನಾಥ ನಾಯಕ, ಕೆ. ನಿಂಗಜ್ಜ, ರಾಮಮೂರ್ತಿ ನವಲಿ, ಟ್ರಸ್ಟ್ ಉಪಾಧ್ಯಕ್ಷ ಶರಣಪ್ಪ ಎಲ್. ಕೇಸರಹಟ್ಟಿ, ನಿವೃತ್ತ ಅಭಿಯಂತರ ಕೃಷ್ಣಯ್ಯ, ಡಾ. ಶಿವಕುಮಾರ, ಬಸವರಾಜ ಬಿ. ಡಂಕನಕಲ್ ಸೇರಿದಂತೆ ಇತರರು ಭಾಗವಹಿಸಿದ್ದರು.