ಮನಸ್ಸು ಹತೋಟಿಯಲ್ಲಿದ್ದರೆ ಉತ್ತಮ ಆರೋಗ್ಯ

| Published : Jun 27 2025, 12:48 AM IST

ಸಾರಾಂಶ

ಆರೋಗ್ಯವಾದ ದೇಹದಲ್ಲಿ ಮಾತ್ರ ಆರೋಗ್ಯಕರ ಮನಸ್ಸು ಇರುತ್ತದೆ. ವೈದ್ಯರಾದವರು ವೈಯಕ್ತಿಕ ಸಮಸ್ಯೆ ಬದಿಗಿರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ನನ್ನ 45 ವರ್ಷಗಳ ಜೀವಮಾನದ ಸಾಧನೆಗೆ ಸಿಕ್ಕ ಪ್ರಶಸ್ತಿಯು ಸರ್ಕಾರ ನೀಡುವ ಪ್ರಶಸ್ತಿಗಿಂತ ಮೌಲ್ಯವಾದದ್ದು.

ಧಾರವಾಡ: ಎಲ್ಲ ರೋಗಗಳಿಗೆ ಮೂಲ ಕಾರಣ ಮನಸ್ಸು. ಮನಸ್ಸನ್ನು ಹತೋಟಿಯಲ್ಲಿಟ್ಟುಕೊಂಡರೆ ಯಾವ ರೋಗಗಳಿಗೆ ದೇಹ ಅವಕಾಶ ನೀಡುವುದಿಲ್ಲ ಎಂದು ಹಿರಿಯ ಚಿಂತಕ ರಂಜಾನ ದರ್ಗಾ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ಅನ್ನಪೂರ್ಣಮ್ಮ ಸಿದ್ಧಲಿಂಗಶಾಸ್ತ್ರಿ ಹಿರೇಮಠ ದತ್ತಿ ಅಂಗವಾಗಿ ಆಯೋಜಿಸಿದ್ದ ‘ಆರೋಗ್ಯ ಸೇವಾರತ್ನ ಪ್ರಶಸ್ತಿ’ಪ್ರದಾನ ಮಾಡಿದ ಅವರು, ವೈದ್ಯ ವೃತ್ತಿ ಅತ್ಯಂತ ಪೂಜ್ಯ ಭಾವನೆಯುಳ್ಳದ್ದು. ವೈದ್ಯರಾದವರು ರೋಗಿಯ ಜತೆಗೆ ಸೌಜನ್ಯದಿಂದ ವರ್ತಿಸಿದರೆ ಅರ್ಧ ರೋಗ ಕಡಿಮೆಯಾದಂತೆ ಎಂದರು.

ಪ್ರಶಸ್ತಿ ಪುರಸ್ಕೃತ ಇನಾಂಹೊಂಗಲದ ಖ್ಯಾತ ವೈದ್ಯರಾದ ಡಾ. ಶಿವಯೋಗಿ ಫಕ್ಕೀರಶೆಟ್ಟರ ಮಾತನಾಡಿ, ಆರೋಗ್ಯವಾದ ದೇಹದಲ್ಲಿ ಮಾತ್ರ ಆರೋಗ್ಯಕರ ಮನಸ್ಸು ಇರುತ್ತದೆ. ವೈದ್ಯರಾದವರು ವೈಯಕ್ತಿಕ ಸಮಸ್ಯೆ ಬದಿಗಿರಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ನನ್ನ 45 ವರ್ಷಗಳ ಜೀವಮಾನದ ಸಾಧನೆಗೆ ಸಿಕ್ಕ ಪ್ರಶಸ್ತಿಯು ಸರ್ಕಾರ ನೀಡುವ ಪ್ರಶಸ್ತಿಗಿಂತ ಮೌಲ್ಯವಾದದ್ದು ಎಂದು ಭಾವಪೂರ್ಣವಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಸಂಜೀವ ಕುಲಕರ್ಣಿ ಮಾತನಾಡಿ, ವೈದ್ಯರಾದವರಿಗೆ ಹಣಕ್ಕಿಂತ ಸೇವಾ ಮನೋಭಾವನೆ ಅಗತ್ಯ. ವೈದ್ಯರಾದವರಿಗೆ ಇಂದು ಅನೇಕ ಒತ್ತಡಗಳಿದ್ದು, ಅವರೂ ಸಹ ಅನೇಕ ಜೀವನಶೈಲಿ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಇಂದು ವೈದ್ಯಕೀಯ ವೃತ್ತಿ ವ್ಯಾಪಾರಿಕರಣವಾಗುತ್ತಿರುವುದು ವಿಷಾಧನೀಯ. ರೋಗಿಗಳಿಗೂ ವೈದ್ಯರಲ್ಲಿ ನಂಬಿಕೆ ಇದ್ದಾಗ ರೋಗ ಗುಣಮುಖವಾಗುತ್ತದೆ. ಡಾ. ಶಿವಯೋಗಿ ಫಕ್ಕೀರಶೆಟ್ಟರ ಓರ್ವ ನುರಿತ ಅನುಭವಿ ವೈದ್ಯರು. ವೈದ್ಯ ವೃತ್ತಿ ಕಾಯಕ ನಿಷ್ಠೆ ಇಂದ ಮಾಡಿದ್ದಾರೆ ಎಂದರು.

ಬಸವಪ್ರಭು ಹೊಸಕೇರಿ ಸ್ವಾಗತಿಸಿದರು. ಡಾ. ಮಹೇಶ ಧ. ಹೊರಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀರಣ್ಣ ಒಡ್ಡೀನ ಪರಿಚಯಿಸಿದರು. ಡಾ. ಜಿನದತ್ತ ಹಡಗಲಿ ಪ್ರಶಸ್ತಿ ಫಲಕ ಓದಿದರು. ಶಂಕರ ಕುಂಬಿ ನಿರೂಪಿಸಿದರು. ವಿಶ್ವೇಶ್ವರಿ ಹಿರೇಮಠ ವಂದಿಸಿದರು.