ಸಾರಾಂಶ
ರಾಮನಗರ: ವಿಶ್ವ ಮಾನವ ತತ್ವಗಳನ್ನು ಮನುಕುಲಕ್ಕೆ ಸಾರಿದ ರಾಷ್ಟ್ರ ಕವಿ ಕುವೆಂಪು ಅವರ ಆದರ್ಶ ಬದುಕು, ಬರಹಗಳು ಸರ್ವರಿಗೂ ದಾರಿದೀಪ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಅಭಿಪ್ರಾಯಪಟ್ಟರು.
ನಗರದ ನಾರಾಯಣ ಆಸ್ವತ್ರೆಯ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನೇಗಿಲ ಯೋಗಿ ಸಮಾಜಸೇವಾ ಟ್ರಸ್ಟ್ ವತಿಯಿಂದ ವಿಶ್ವ ಮಾನವ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ತಮ್ಮ ಸಾಹಿತ್ಯದಲ್ಲಿ ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವ ತುಂಬುವ ವಿಚಾರ ಸ್ವಾತಂತ್ರ್ಯಕ್ಕೆ ಕರೆಕೊಟ್ಟ ಮಹಾಕವಿ ಕುವೆಂಪು ಒಂದು ದೈತ್ಯ ಪ್ರತಿಭೆ, ಹಲವು ಪ್ರಥಮತೆಗೆ ಬುನಾದಿ ಹಾಕಿ ಕನ್ನಡ ಭಾಷೆ ಹಾಗೂ ನಾಡಿನ ಬಗೆಗೆ ಅಪಾರ ಪ್ರೇಮ ಹೊಂದಿದ್ದವರು, ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲು ಕೈಯಾಡಿಸಿದ ಅವರು ರೈತರನ್ನು ನೇಗಿಲಯೋಗಿ ಎಂದು ಕರೆದ ರಸಋಷಿ. ಅವರ ಸಾಹಿತ್ಯವನ್ನು ಅಭ್ಯಾಸ ಮಾಡುತ್ತಾ ಅವರ ಆದರ್ಶಗಳನ್ನು ಜೀವನನುದ್ದಕ್ಕೂ ಅಳವಡಿಸಿಕೊಳ್ಳುವ ಮೂಲಕ ವಿಶ್ವಮಾನವರಾಗಿ ಬೆಳೆಯಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಬಿ.ಟಿ.ದಿನೇಶ್ ಮಾನತಾಡಿ, ಕಳೆದ ಎಂಟು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದ್ದು, ನೂರಾರೂ ಯುವಕರು ರಕ್ತದಾನ ಮಾಡಿ ಹಲವಾರು ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತದೆ ಎಂದು ಹೇಳಿದರು.ಸ್ಪಂದನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ. ಮುತ್ತಣ್ಣ, ನೇಗಿಲ ಯೋಗಿ ಸಮಾಜಸೇವಾ ಟ್ರಸ್ಟ್ ಜಿಲ್ಲಾಧ್ಯಕ್ಷ ಪಟೇಲ್ ಸಿ.ರಾಜು, ಜೀವಾಮೃತ ರಕ್ತ ನಿಧಿ ಮಾಲೀಕ ವಿ.ಸಿ.ಚಂದ್ರೇಗೌಡ, ನಾರಾಯಣ ಆಸ್ವತ್ರೆಯ ಮಾಲೀಕರಾದ ಡಾ.ಮಧಸೂದನ್ ಮಾತನಾಡಿದರು. ಶಿಬಿರದಲ್ಲಿ 58 ಮಂದಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ದಾನಿ ಡೇರಿ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿ ಬಿ.ಟಿ.ರಾಜೇಂದ್ರ, ಲಕ್ಕಸಂದ್ರ ಮಹದೇವ, ಸಮದ್, ಕರೀಗೌಡ, ಚೇತನ್ ಗುನ್ನೂರು, ಕಿರಣ್ ನಂದೀಶ್ ಮತ್ತು ಆಸ್ವತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.31ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ನಾರಾಯಣ ಆಸ್ವತ್ರೆ ಆವರಣದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ದಾನಿ ಡೇರಿ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.