ಕನ್ನಡಪ್ರಭ ವಾರ್ತೆ ಪಾಂಡವಪುರ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಳೆದ 2013ರಿಂದ ಇಲ್ಲಿಯವರೆಗೆ ರಾಜ್ಯ ಸರ್ಕಾರ 2.94 ಲಕ್ಷ ಕೋಟಿ ರು. ಅನುದಾನ ನೀಡಿದೆ ಎಂದು ಸಿಆರ್‌ಪಿಎಫ್‌ನ ಸಂಸ್ಥಾಪಕ ರಾಜ್ಯಾಧ್ಯಕ್ಷ ಹರಗಲವಾಡಿ ನಾಗೇಂದ್ರ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಎಸ್‌ಸಿಪಿ ಮತ್ತು ಎಸ್‌ಟಿಪಿ ಅನುದಾನಗಳನ್ನು ಬಳಕೆ ಕುರಿತು ಅರಿವು ಮೂಡಿಸುವ ಸಂಬಂಧ ದಸಂಸ ಮುಖಂಡ ಗಿರಿಯಾರಹಳ್ಳಿಮೂರ್ತಿ ನೇತೃತ್ವದಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಬಾಬ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ದುರ್ಬಲ ವರ್ಗದವರ ಅಭಿವೃದ್ಧಿಗಾಗಿ ನೀಡಿದ ಸಂವಿಧಾನವನ್ನು ಅರ್ಪಣೆ ಮಾಡಿದ ಬಳಿಕ ನಾವೆಲ್ಲರು ಸಮಾನರು ಎನ್ನುವ ಸಂದೇಶ ನೀಡಿದರು. ಆದರೆ, ದಲಿತರು ಇನ್ನೂ ಆರ್ಥಿಕ ಹಾಗೂ ಸಾರ್ವತ್ರಿಕವಾಗಿ ಸಾಧನೆ ಮಾಡಬೇಕು ಎಂದು ಹೇಳಿದ್ದರೂ ಇಂದಿಗೂ ದಲಿತರು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕಾಗಿದೆ ಎಂದರು.

ಪಂಚ ವಾರ್ಷಿಕ ಯೋಜನೆಗಳ ಮೂಲಕ ದಲಿತರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸಬೇಕು ಎನ್ನುವ ಪ್ರಯತ್ನ ನಡೆಯಿತು. ಆದರೆ, ಅಲ್ಲಿ ಕೃಷಿ, ನೀರಾವರಿ, ನಗರೀಕರಣಕ್ಕೆ ಆಧ್ಯತೆ ನೀಡಿದ ಹಿನ್ನೆಲೆಯಲ್ಲಿ ದಲಿತರ ಅಭಿವೃದ್ಧಿ ಸಾಧ್ಯವಾಗಲಿಲ್ಲ. ಆ ನಂತರ ಯೋಜನಾ ಆಯೋಗವು 2005ರಲ್ಲಿ ಎಸ್ ಸಿಪಿ ಹಾಗೂ ಎಸ್ ಟಿಪಿ ಯೋಜನೆಯನ್ನು ಜಾರಿಗೆ ತಂದು ದಲಿತರು, ದಲಿತ ಕೇರಿಗಳು, ಸಮುದಾಯವನ್ನು ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಯಿತು ಎಂದರು.


ಸರ್ಕಾರಗಳು ಪ್ರತಿ ವರ್ಷವೂ ಸಾವಿರಾರು ಕೋಟಿ ಹಣವನ್ನು ದಲಿತರ ಅಭಿವೃದ್ಧಿಗಾಗಿ ಮೀಸಲಿಡುತ್ತಿದ್ದು ದಲಿತರ ಅನುದಾನಗಳು ಸಾಕಷ್ಟು ದರ್ಬಳಕೆಯೂ ಆಗುತ್ತಿದೆ. ಜತೆಗೆ ಗ್ಯಾರೆಂಟಿ ಯೋಜನೆಗೂ ದಲಿತರ ಅನುದಾನ ಬಳಕೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕು ಎಂದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಗಾಂಧಿಜೀ ಕಂಡ ಗ್ರಾಮ ಸ್ವರಾಜ್ಯದ ಕನಸ್ಸು ಈಡೇರಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸರ್ಕಾರಗಳಿಂದ ದೊರೆಯುವ ಯೋಜನೆಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲೀಕರಣಗೊಳ್ಳಬೇಕು ಎಂದರು.

ಉಪವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿದರು. ಈ ವೇಳೆ ತಹಸೀಲ್ದಾರ್ ಆದರ್ಶ, ದಸಂಸ ಮುಖಂಡರಾದ ಗಿರಿಯಾರಹಳ್ಳಿ ಮೂರ್ತಿ, ಅಂಕಯ್ಯ, ಟಿಎಚ್‌ಒ ಡಾ.ಸಿ.ಎ.ಅರವಿಂದ್ ಸೇರಿದಂತೆ ಅನೇಕ ಹಾಜರಿದ್ದರು.