ಸರ್ಕಾರಕ್ಕೆ ರೈತರ ಬಗ್ಗೆ ಹೆಚ್ಚಿನ ಕಾಳಜಿ ಇಲ್ಲ

| Published : Jan 14 2025, 01:04 AM IST

ಸಾರಾಂಶ

ವಿಧಾನ ಪರಿಷತ್ ಸದಸ್ಯರೊಬ್ಬರು ಹೆಣ್ಣು ಮಗಳಿಗೆ ಬೈದರೆಂದು ಅವರನ್ನ ೧೮ ಗಂಟೆ ವಿನಾಕಾರಣ ಸುತ್ತಿಸುವ ಇಂದಿನ ಆಡಳಿತದಲ್ಲಿ, ರೈತ ಮಹಿಳೆ ಕತ್ತಿನಿಂದ ಸರ ಕಿತ್ತುಕೊಂಡು, ರೆಕಾರ್ಡ್ ಮಾಡುತ್ತಿರುವ ಪಿಯು ವಿದ್ಯಾರ್ಥಿನಿ ಕೈಯಿಂದ ಮೊಬೈಲ್ ಕಿತ್ತುಕೊಂಡ ಸಂಬಂಧ ಪ್ರಕರಣ ದಾಖಲಿಸಿಲ್ಲ ನೋಡಿ ಎಂದು ಶಾಸಕ ಎಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದರು. ರಸ್ತೆ ಮಾಡುವುದಾದರೇ ಬೆಳೆದಿರುವ ಪೈರು ಕಟಾವು ಮಾಡಿದ ನಂತರ ರಸ್ತೆ ಮಾಡಬಹುದಿತ್ತು, ಆದರೆ ಬೆಳೆನಾಶ ಮಾಡಿ ರಸ್ತೆ ಮಾಡಿಕೊಡುವ ಅವಶ್ಯಕತೆ ಏನಿತ್ತು ಎಂದು ಆಕ್ರೋಶದಿಂದ ನುಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ವಿಧಾನ ಪರಿಷತ್ ಸದಸ್ಯರೊಬ್ಬರು ಹೆಣ್ಣು ಮಗಳಿಗೆ ಬೈದರೆಂದು ಅವರನ್ನ ೧೮ ಗಂಟೆ ವಿನಾಕಾರಣ ಸುತ್ತಿಸುವ ಇಂದಿನ ಆಡಳಿತದಲ್ಲಿ, ರೈತ ಮಹಿಳೆ ಕತ್ತಿನಿಂದ ಸರ ಕಿತ್ತುಕೊಂಡು, ರೆಕಾರ್ಡ್ ಮಾಡುತ್ತಿರುವ ಪಿಯು ವಿದ್ಯಾರ್ಥಿನಿ ಕೈಯಿಂದ ಮೊಬೈಲ್ ಕಿತ್ತುಕೊಂಡ ಸಂಬಂಧ ಪ್ರಕರಣ ದಾಖಲಿಸಿಲ್ಲ ನೋಡಿ ಎಂದು ಶಾಸಕ ಎಚ್.ಡಿ.ರೇವಣ್ಣ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತಿದ್ದ ಸಂದರ್ಭದಲ್ಲಿ ರೈತ ಕುಟುಂಬ ಸದಸ್ಯರು ಶಾಸಕರನ್ನು ಭೇಟಿಯಾಗಿ ಸಮಸ್ಯೆ ಕುರಿತು ಅಳಲು ತೋಡಿಕೊಂಡ ನಂತರ ಶಾಸಕರು ಬೇಸರ ವ್ಯಕ್ತಪಡಿಸಿ ಮಾತನಾಡಿದರು. ರಸ್ತೆ ಮಾಡುವುದಾದರೇ ಬೆಳೆದಿರುವ ಪೈರು ಕಟಾವು ಮಾಡಿದ ನಂತರ ರಸ್ತೆ ಮಾಡಬಹುದಿತ್ತು, ಆದರೆ ಬೆಳೆನಾಶ ಮಾಡಿ ರಸ್ತೆ ಮಾಡಿಕೊಡುವ ಅವಶ್ಯಕತೆ ಏನಿತ್ತು ಎಂದು ಆಕ್ರೋಶದಿಂದ ನುಡಿದರು. ವೃತ್ತ ನಿರೀಕ್ಷಕ ಪ್ರದೀಪ್ ಅವರಿಗೆ ಬೆಳೆ ನಾಶ ಮಾಡುತ್ತಿರುವ ಭಾವಚಿತ್ರಗಳನ್ನು ತೋರಿಸಿ, ಬೆಳೆ ನಾಶ ಮಾಡಿದವರ ಮೇಲೆ ಕ್ರಮ ಕೈಗೊಂಡು ಪ್ರಕರಣ ದಾಖಲಿಸಿ, ಯುವತಿಯ ಮೊಬೈಲ್ ಕಿತ್ತುಕೊಂಡ ಸಂಬಂಧ ಇನ್ನೊಂದು ಪ್ರಕರಣ ದಾಖಲಿಸಿ ಮತ್ತು ಮಹಿಳೆಯರನ್ನು ನಿಂದಿಸಿದ ಪ್ರಕರಣ ಒಂದನ್ನು ದಾಖಲಿಸಿ ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಆರೋಪಿತ ವ್ಯಕ್ತಿಯೂ ಶಾಸಕರಿಗೆ ಏನೋ ತಿಳಿಸುಲು ಪ್ರಯತ್ನ ನಡೆಸುತ್ತಿದ್ದಾಗ ಬೆಳೆ ನಾಶ ಮಾಡಿದ್ದೀರ, ಏನೂ ಹೇಳಬೇಡ, ಸುಮ್ಮನೆ ನಿಲ್ಲು ಎಂದು ರೇಗಿದರು.ಘಟನೆ ಹಿನ್ನೆಲೆ : ತಾಲೂಕಿನ ಹಳೇಕೋಟೆ ಹೋಬಳಿಯ ಲಕ್ಷ್ಮಿಪುರ ಗ್ರಾಮದ ಜವರೇಗೌಡರ ಮಕ್ಕಳಾದ ಕುಮಾರ್ ಮತ್ತು ನಾಗರಾಜ್ ಎಂಬ ರೈತರ ಸರ್ವೆ ನಂಬರ್ ೨೫ರ ಕೃಷಿ ಭೂಮಿ ರಸ್ತೆ ಪಕ್ಕದಲ್ಲಿದೆ ಮತ್ತು ಇವರು ಪಕ್ಕದ ಜಮೀನಿನ ರೈತರು ಹಾಗೂ ಎತ್ತಿನಗಾಡಿ ಓಡಾಡಲು ದಾರಿ ಬಿಟ್ಟುಕೊಟ್ಟಿದ್ದಾರೆ. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಪ್ರಭಾವಿ ವ್ಯಕ್ತಿ ಒಬ್ಬರ ಜತೆಗೆ ಶಾಮೀಲಾಗಿ ಬಡ ರೈತರು ಬೆಳೆದ ಬೆಳೆಯನ್ನು ನಾಶ ಮಾಡಿ, ನಷ್ಟ ಉಂಟು ಮಾಡುವ ಜತೆಗೆ ಜಮೀನಿನಲ್ಲೆ ರಸ್ತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಮತ್ತು ಪೊಲೀಸ್ ಇಲಾಖೆಯಲ್ಲಿ ದೂರು ನೀಡಿದಾಗ ಪ್ರಕರಣ ದಾಖಲಿಸಲಿಲ್ಲವೆಂದು ರೈತ ಮಹಿಳೆಯರು ಶಾಸಕರಲ್ಲಿ ಸಮಸ್ಯೆ ಕುರಿತು ವಿವರಿಸಿ, ಭಾವಚಿತ್ರಗಳು ಹಾಗೂ ದಾಖಲೆಗಳನ್ನು ತೋರಿಸಿ, ಸೂಕ್ತ ಕ್ರಮಕೈಗೊಂಡು ಪ್ರಕರಣ ದಾಖಲಿಸಿ, ಮೊಬೈಲ್ ಹಾಗೂ ಸರ ಕೊಡಿಸಿ ಮತ್ತು ನ್ಯಾಯ ಒದಗಿಸಿಕೊಡಿ ಎಂದು ವಿನಂತಿಸಿದರು. ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ತಾಲೂಕಿನ ಕಲ್ಲೇನಹಳ್ಳಿಯಲ್ಲಿ ಪೊಲೀಸರನ್ನು ಕರೆತರುತ್ತೀರ ಕರೆತನ್ನಿ ಹೆದರೊಲ್ಲ ಎಂದು ಹೇಳುತ್ತಾರಂತೆ, ಪೊಲೀಸರಿಗೆ ಬೈಯುತ್ತಾರಂತೆ ಇವರು ಎಂದು ತಿಳಿಸಿ, ತಾಲೂಕಿನ ಇಂದಿನ ವ್ಯವಸ್ಥೆಮಿದು ಎಂದರು. ತಾಲೂಕಿನ ಗವಿಸೋಮನಹಳ್ಳಿಯಲ್ಲಿ ಬಡ ರೈತರೊಬ್ಬರು ಜಮೀನಿನಲ್ಲಿ ಅಳವಡಿಸಿದ್ದ ಮೋಟಾರು ಹಾಗೂ ಪೈಪಿಗೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ, ಆದರೆ ಪೊಲೀಸರು ೮ ದಿನವಾದರೂ ದೂರು ದಾಖಲು ಮಾಡಿರಲಿಲ್ಲ. ಎಸ್‌ಪಿ ಅವರಿಗೆ ಹೇಳಿ ಪ್ರಕರಣ ದಾಖಲು ಮಾಡಿಸಲಾಯಿತು ಎಂದು ಆರೋಪಿಸಿ, ಪಟ್ಟಣದ ನಗರ ಪೊಲೀಸ್ ಠಾಣೆ ಕಾಂಗ್ರೆಸ್ ಕಚೇರಿಯಾಗಿದೆ ಎಂದು ಆಕ್ರೋಶದಿಂದ ನುಡಿದರು. ತಾಲೂಕಿನ ಕಲೋಡೆಬಾರೆಯ ಕ್ವಾರೆಯಲ್ಲಿ ಪ್ರತಿನಿತ್ಯ ೫೦ಕ್ಕೂ ಹೆಚ್ಚು ಲೋಡ್ ಎಂಸ್ಯಾಂಡ್, ಜಲ್ಲಿಕಲ್ಲು ತಾಲೂಕಿನಿಂದ ಹೊರಹೋಗುತ್ತಿದೆ, ಆದರೆ ಐದಾರು ಲೋಡಿಗೆ ಪರ್ಮಿಟ್ ಇರುತ್ತೊ ಇಲ್ಲವೂ ಗೊತ್ತಿಲ್ಲ, ಅಧಿಕಾರಿಗಳು ಇಂತಿಷ್ಟು ಲಂಚ ಪಡೆದು ಸುಮ್ಮನಾಗುತ್ತಾರೆ ಎಂದರು. ಡಿಎಸ್ಪಿ ಶಾಲು ಅವರು ೩ ಎಂಸ್ಯಾಂಡ್ ತುಂಬಿದ್ದ ಲಾರಿಗಳನ್ನು ಹಿಡಿಯಲಾಗಿದೆ, ಅದರಲ್ಲಿ ಎರಡಕ್ಕೆ ಪರ್ಮಿಟ್ ಇದೆ ಮತ್ತು ಇನ್ನೊಂದು ಲಾರಿಗೆ ಪರ್ಮಿಟ್ ಇಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು ಅವರು ಪ್ರಕರಣ ದಾಖಲಿಸಬೇಕಿದೆ ಎಂದರು. ಆಗ ಶಾಸಕರು ನೀವೇ ಪ್ರಕರಣ ದಾಖಲಿಸಿ ಎಂದು ತಾಕೀತು ಮಾಡಿದರು.