ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ವಿಷಯವಾರು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಒತ್ತಾಯಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತದಲ್ಲಿ ಶಾಲಾ ಕಾಲೇಜುಗಳು ಮಂಜೂರಾತಿ ಹಾಗೂ ಶಿಕ್ಷಕರ ಹಾಗೂ ಉಪನ್ಯಾಸಕರ ನೇಮನವನ್ನು ಮಾಡಲಾಗಿತ್ತು ಎಂಬ ಮಾಹಿತಿ ನೀಡಿದರು. ಸುದೀರ್ಘವಾಗಿ ಮಾತನಾಡಿದ ಶಾಸಕರು, ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿ ಎಂದು ಶುಭಕೋರಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರನಮ್ಮ ತಾಲೂಕಿನ ಸರ್ಕಾರಿ ಶಾಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದರೂ ಸಹ, ಮಕ್ಕಳಿಗೆ ಸರಿಯಾದ ರೀತಿಯ ಶಿಕ್ಷಣ, ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ ಮತ್ತು ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಾದ ವಿಷಯವಾರು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಬೇಕಿದೆ ಎಂದು ಶಾಸಕ ಎಚ್.ಡಿ. ರೇವಣ್ಣ ಒತ್ತಾಯಿಸಿದರು.ಪಟ್ಟಣದ ಪ್ರಿಯದರ್ಶಿನಿ ವಿದ್ಯಾ ಸಂಸ್ಥೆ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜನೆ ಮಾಡಿದ್ದ ೨೦೨೫, ೨೬ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತದಲ್ಲಿ ಶಾಲಾ ಕಾಲೇಜುಗಳು ಮಂಜೂರಾತಿ ಹಾಗೂ ಶಿಕ್ಷಕರ ಹಾಗೂ ಉಪನ್ಯಾಸಕರ ನೇಮನವನ್ನು ಮಾಡಲಾಗಿತ್ತು ಎಂಬ ಮಾಹಿತಿ ನೀಡಿದರು. ಸುದೀರ್ಘವಾಗಿ ಮಾತನಾಡಿದ ಶಾಸಕರು, ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಒಳ್ಳೆಯದಾಗಲಿ ಎಂದು ಶುಭಕೋರಿದರು.ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿ, ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಏಕಾಗ್ರತೆ ಮತ್ತು ಉತ್ತಮ ಆರೋಗ್ಯ ರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಭಾಗವಹಿಸಿದ ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು. ಪುಟ್ಟಮಕ್ಕಳಾಗಿದ್ದಾಗ ತಂದೆತಾಯಿ ಮಕ್ಕಳ ಬೆಳವಣಿಗೆಗೆ ಬಹಳ ಕಾಳಜಿ ಹಾಗೂ ಪ್ರೀತಿಯಿಂದ ಬೆಳೆಸುತ್ತಾರೆ. ಶಾಲೆಗೆ ದಾಖಲಾದ ನಂತರ ವಿದ್ಯಾರ್ಥಿಗಳ ಏಳಿಗೆಗೆ ಶಿಕ್ಷಕರು ತೋರುವ ಜವಾಬ್ದಾರಿ ಹಾಗೂ ಅವರ ಕರ್ತವ್ಯ ನಿಷ್ಠೆ ಪ್ರಶ್ನಾತೀತವಾಗಿದೆ. ಆದ್ದರಿಂದ ಎರಡನೇ ತಂದೆತಾಯಿ ಸ್ಥಾನ ತುಂಬುವ ಶಿಕ್ಷಕರಿಗೆ ನಾವು ಋಣಿಯಾಗಿರಬೇಕು ಎಂದು ಸಲಹೆ ನೀಡಿ, ಪಠ್ಯೇತರ ಚಟುವಟಿಕೆಗಳ ಜತೆಗೆ ಕಲಿಕೆಗೂ ಹೆಚ್ಚು ಮಹತ್ವ ನೀಡುವಂತೆ ಸಲಹೆ ನೀಡಿದರು. ಹಂಗರಹಳ್ಳಿ, ಆನೆಕನ್ನಂಬಾಡಿ, ಇತರೆ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು, ಪಟ್ಟಣದ ಸೀತವಿಲಾಸ ರಸ್ತೆಯ ಜ್ಞಾನ ಗಂಗೋತ್ರಿ ವಿದ್ಯಾಸಂಸ್ಥೆ ಮತ್ತು ಇತರೆ ಶಾಲೆಗಳ ವಿದ್ಯಾರ್ಥಿಗಳ ವೇಷಭೂಷಣ ಆಕರ್ಷಕವಾಗಿತ್ತು. ಬಿಇಒ ಸೋಮಲಿಂಗೇಗೌಡ, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕಾಳೇಗೌಡ, ಪ್ರಿಯದರ್ಶಿನಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಹೊನ್ನಕುಮಾರ್, ಮೇಲ್ವಿಚಾರಕ ಗೋಪಿ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಹಿಲಿಂಗಪ್ಪ, ಇಸಿಒಗಳಾದ ಕೇಶವ್, ಕಾಂತರಾಜಪ್ಪ ಹಾಗೂ ಆನಂದ್, ಬಿಆರ್ಸಿ ಶೈಲಜಾ ಧರಣಿ, ದೈಹಿಕ ಶಿಕ್ಷಣ ಪರಿವೀಕ್ಷಕ ಸುಜಾತ ಅಲಿ, ಇತರರು ಇದ್ದರು.