ಸಾರಾಂಶ
ಸುದ್ದಿಗೋಷ್ಠಿಯಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಭಾಸ್ಕರ್ ಪ್ರಸಾದ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಒಳ ಮೀಸಲಾತಿ ಜಾರಿಗೊಳಿಸದೆ ಸುಪ್ರೀಂಕೋರ್ಟ್ ಆದೇಶವನ್ನು ಧಿಕ್ಕರಿಸಿರುವ ರಾಜ್ಯ ಸರ್ಕಾರದ ವಿರುದ್ಧ ಆ.1 ರಂದು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗ ಸರ್ಕಾರದ ಶವಯಾತ್ರೆ ನಡೆಸಿ ಸಾಮೂಹಿಕವಾಗಿ ಕೇಶಮುಂಡನ ಮಾಡಿಕೊಳ್ಳಲಾಗುವುದು ಎಂದು ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಭಾಸ್ಕರ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೊಳಿಸುವಂತೆ
ಸುಪ್ರೀಂಕೋರ್ಟ್ ತೀರ್ಪು ನೀಡಿ ಆ.1ಕ್ಕೆ ಒಂದು ವರ್ಷವಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಶಿಷ್ಟಜಾತಿಯ 101 ಜಾತಿಗಳಿಗೆ ವಂಚನೆ ಮಾಡಿಕೊಂಡು ಬರುತ್ತಿದ್ದಾರೆ. ಅನಗತ್ಯ ಆಯೋಗ ರಚಿಸಿ ಸಂಕಷ್ಟಕ್ಕೆ ಸಿಲುಕಿಸುತ್ತಿದೆ.
ಹಾಗಾಗಿ ಆ.1 ರಿಂದ 30 ರೊಳಗೆ ಯಾವುದಾದರೂ ದಿನಾಂಕ ನಿಗಧಿಪಡಿಸಿಕೊಂಡು ದೆಹಲಿ ಚಲೋ ಹಮ್ಮಿಕೊಂಡು ರಾಹುಲ್ಗಾಂಧಿ ನಿವಾಸಕ್ಕೆ ಮುತ್ತಿಗೆ ಹಾಕಿ ರಾಜ್ಯದಲ್ಲಿರುವ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಅರ್ಥ ಗೊತ್ತಿದೆಯೇ ಎಂದು ಪ್ರಶ್ನಿಸಲಾಗುವುದು ಇದಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.101 ಜಾತಿಗಳಿಗೂ ಸಂಜೀವಿನಿಯಾಗಿರುವ ಒಳ ಮೀಸಲಾತಿ ಜಾರಿಯಾಗಬೇಕು. ಅದಕ್ಕಾಗಿ ಎಲ್ಲಾ ಪಕ್ಷಗಳ ರಾಜಕೀಯ
ನಾಯಕರು ಭೇಟಿ ಮಾಡುತ್ತೇವೆ. ವಿವಿಧ ಹೋರಾಟಗಾರರು, ಜನಪರ ಸಂಘಟನೆಗಳು, ಮಠಾಧೀಶರು, ವಿವಿಧ ಜಾತಿಯ ಮುಖಂಡರನ್ನು ಭೇಟಿಯಾಗಿ ಬೆಂಬಲ ಕೋರುತ್ತೇವೆ. ಸಿಎಂ ಸಿದ್ದರಾಮಯ್ಯನವರ ನಯ ವಂಚಕತನ, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪನವರ ಕುತಂತ್ರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಹೇಳಿದರು. ಕರ್ನಾಟಕ ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆಯ ಎಸ್.ಅರುಣ್ಕುಮಾರ್ ಮಾತನಾಡಿ, ಒಳ ಮೀಸಲಾತಿಜಾರಿಗೊಳಿಸುವಂತೆ ಸುಪ್ರಿಂಕೋರ್ಟ್ ತೀರ್ಪು ನೀಡಿ ಆ.1 ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಸದಾಶಿವ ಆಯೋಗ, ಮಾಧುಸ್ವಾಮಿ ಆಯೋಗದಲ್ಲಿ ದತ್ತಾಂಶ ಕುರಿತು ಸಮಗ್ರ ಮಾಹಿತಿಯಿದೆ. ಕಾಂತರಾಜ್ ಆಯೋಗದಲ್ಲಿ ಮಾದಿಗರು, ಒಲೆಯರು
ಎಂಬ ಪ್ರತ್ಯೇಕ ದತ್ತಾಂಶವಿದೆ. ಇಷ್ಟೆಲ್ಲಾ ಇದ್ದರು ಮಧ್ಯಂತರ ವರದಿ ಜಾರಿಗೊಳಿಸದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದಿಗರ ವಿರೋಧಿ ಎನ್ನುವುದನ್ನು ಸಾಬೀತು ಪಡಿಸಿದ್ದಾರೆಂದು ಆಪಾದಿಸಿದರು.ತೆಲಂಗಾಣ, ಆಂಧ್ರ, ಹರಿಯಾಣ, ತಮಿಳುನಾಡಿನಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ಕರ್ನಾಟಕದಲ್ಲಿ ಇನ್ನೂ ಆಗಿಲ್ಲ.
ನಾಗಮೋಹನ್ದಾಸ್ ಆಯೋಗ ಕಳೆದ ತಿಂಗಳ 5 ರಂದು ಮನೆ ಮನೆ ಸಮೀಕ್ಷೆ ಆರಂಭಿಸಿದೆ. ಒಳ ಮೀಸಲಾತಿ ಜಾರಿಯಾಗಬಾರದೆಂಬುದು ಹೊಸ ಷಡ್ಯಂತ್ರ. ಜಾರಿಯಾದರೂ ಗೊಂದಲವಿರಬೇಕೆಂಬುದು ಸರ್ಕಾರದ ಉದ್ದೇಶ. ಅದಕ್ಕಾಗಿ ಉಗ್ರಹೋರಾಟ ನಮ್ಮದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಾಮಾಜಿಕ ನ್ಯಾಯ ಪರ ವಕೀಲರ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬೂದಿತಿಟ್ಟ ರಾಜೇಂದ್ರ, ಎಲ್. ಮಾಳಪ್ಪ, ಶಿವಕುಮಾರ್ ಬೆಳ್ತೂರ್, ರಘುರಾಜ್ಕೊಳ್ಳಿ, ಎಂ.ಆರ್.ಸುಧೀಂದ್ರಕುಮಾರ್, ಸುರೇಶ್, ಸಿ.ಬಸವರಾಜ್, ರಘು, ಫಕೀರಪ್ಪ, ದಲಿತ ಮುಖಂಡ ಶಿವಣ್ಣ ಸೇರಿ ಅನೇಕರು ಇದ್ದರು.