ಮಳೆ ಅನಾಹುತಕ್ಕೆ ಸರ್ಕಾರವೇ ನೇರ ಕಾರಣ - ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ

| Published : Oct 22 2024, 01:21 AM IST / Updated: Oct 22 2024, 10:53 AM IST

ಮಳೆ ಅನಾಹುತಕ್ಕೆ ಸರ್ಕಾರವೇ ನೇರ ಕಾರಣ - ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆಹಾನಿಯ ಸಮೀಕ್ಷೆಯನ್ನು ಸರ್ಕಾರ ಮಾಡಿ ಆದಷ್ಟು ಬೇಗ ಪರಿಹಾರ ಘೋಷಿಸಬೇಕು. ನಿರಂತರವಾಗಿ ಮಳೆಯಾಗುತ್ತಿದ್ದರೂ ಸರ್ಕಾರ ರೈತರ ಬಗ್ಗೆ ಚಿಂತಿಸುತ್ತಿಲ್ಲ. ಆಗಿರುವ ಅನಾಹುತಕ್ಕೆ ಸರ್ಕಾರವೇ ನೇರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಹಾವೇರಿ:  ಮಳೆಹಾನಿಯ ಸಮೀಕ್ಷೆಯನ್ನು ಸರ್ಕಾರ ಮಾಡಿ ಆದಷ್ಟು ಬೇಗ ಪರಿಹಾರ ಘೋಷಿಸಬೇಕು. ನಿರಂತರವಾಗಿ ಮಳೆಯಾಗುತ್ತಿದ್ದರೂ ಸರ್ಕಾರ ರೈತರ ಬಗ್ಗೆ ಚಿಂತಿಸುತ್ತಿಲ್ಲ. ಆಗಿರುವ ಅನಾಹುತಕ್ಕೆ ಸರ್ಕಾರವೇ ನೇರ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. 

ಮಳೆಯಿಂದಾಗಿ ‌ಹಾವೇರಿ‌ ತಾಲೂಕಿನ ಕನಕಾಪೂರ ಗ್ರಾಮದ ಬಳಿ ತುಂಗಾ ಮೇಲ್ದಂಡೆ ಕಾಲುವೆ ಒಡೆದು ಸಂಪೂರ್ಣ ಬೆಳೆ ನಾಶವಾಗಿದ್ದು, ಕೊಚ್ಚಿ ಹೋಗಿರುವ ಕಾಲುವೆಯನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಳೆದ‌ ಹತ್ತು ದಿನಗಳಲ್ಲಿ ವಾಡಿಕೆಗಿಂತ‌ ಹೆಚ್ಚಿನ ಮಳೆಯಾಗಿದ್ದು, ಸಾವಿರಾರು ಮನೆಗಳಿಗೆ ನೀರು ನುಗ್ಗಿ ಹಾನಿಯಗಿದೆ. 

ರೈತರ ಬೆಳೆ ನಷ್ಟವಾಗಿದೆ. ಹಾವೇರಿ ಜಿಲ್ಲೆಯಲ್ಲಿಯೂ ಸಹ ಸಾಕಷ್ಟು ಹಾನಿಯಾಗಿದ್ದು, ವರದಾ ನದಿ ತೀರದ ಬೆಳೆಗೆ ಸಾಕಷ್ಟು ಹಾನಿಯಾಗಿದೆ. ಯುಟಿಪಿ ಕಾಮಗಾರಿ ಅಪೂರ್ಣವಾಗಿದ್ದರ ಪರಿಣಾಮ ಹಳ್ಳದ ನೀರು ಕೆನಲ್ ಗೆ ನುಗ್ಗುತ್ತಿದೆ. ಅಧಿಕಾರಿಗಳು, ಸರ್ಕಾರದ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.ಮಳೆಹಾನಿಗೆ ಸರ್ಕಾರ ಆದಷ್ಟು ಬೇಗ ಪರಿಹಾರ ಘೋಷಿಸಬೇಕು. ಮಳೆಹಾನಿ ಸಮೀಕ್ಷೆಯನ್ನು ಸರಿಯಾಗಿ ಸರ್ಕಾರ ಮಾಡಬೇಕು. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇರುವುದನ್ನು ಇದಕ್ಕೆ ಬಳಸಿಕೊಳ್ಳಬೇಕು.18 ಕೋಟಿ ರು. ತುರ್ತು ಹಣ ಇದೆ ಅದನ್ನು ಬಳಸಿಕೊಳ್ಳಬೇಕು. ಮಳೆಹಾನಿ ಸಂಬಂಧ ಜಿಲ್ಲಾಧಿಕಾರಿ ಜೊತೆ ನಾನು ಚರ್ಚಿಸಿದ್ದೇನೆ. 

ಈಗಿರುವ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕೇ‌ ಹೊರತು ತುರ್ತು ಪರಿಹಾರದ ಹಣವನ್ನು ಕನ್ನಡಿಯೊಳಗಿನ‌ ಗಂಟಂತೆ ಮಾಡಬಾರದು. ಮೇಲ್ನೋಟಕ್ಕಷ್ಟೇ ಮಳೆ ಹಾನಿಯನ್ನು ಪರಿಶೀಲಿಸಬಾರದು ಎಂದು ಹೇಳಿದರು.ಇದೇ ವೇಳೆ ಯುಟಿಪಿ ಎಂಜಿನಿಯರ್‌ ಜೊತೆ ಮಾತನಾಡಿ, ಕಾಲುವೆ ದುರ್ಬಲವಾಗಿರುವ ಕಡೆ ಕಬ್ಬಿಣ ಹಾಕಿ ಕಟ್ಟಬೇಕು. ನೀರು ಬರದಂತೆ ತಾತ್ಕಾಲಿಕವಾಗಿ ವಡ್ಡು ಕಟ್ಟಿ, ಬಳಿಕ ಶಾಶ್ವತ ಪರಿಹಾರ ಮಾಡಬೇಕು ಎಂದು ಸೂಚಿಸಿದರು.

ರೈತರಿಗೆ ಈ ಹಿಂದೆ ನಮ್ಮ ಬಿಜೆಪಿ ಸರ್ಕಾರ ದುಪ್ಪಟ್ಟು ಹಣ ನೀಡಿದೆ. ರೈತರಿಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ‌ ಮಾಡಬೇಕು. ಸರ್ಕಾರದ‌ ನಿರ್ಲಕ್ಷ್ಯತನವೇ ಹಾವೇರಿ ಮಳೆಹಾನಿಯಿಂದಾದ‌ ನಷ್ಟಕ್ಕೆ ನೇರ ಕಾರಣ ಎಂದು ಬೊಮ್ಮಾಯಿ ಆರೋಪಿಸಿದರು.ಬಳಿಕ ಈಚೆಗೆ ಚರಂಡಿ ಕೊಚ್ಚಿ ಹೋಗಿ ಮೃತಪಟ್ಟ ಇಲ್ಲಿಯ ಶಿವಾಜಿನಗರದ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.