ನೌಕರರ ಬೇಡಿಕೆ ಈಡೇರಿಸಲು ಸರ್ಕಾರ ಮೀನಮೇಷ ಖಂಡನಾರ್ಹ

| Published : Jul 12 2024, 01:36 AM IST

ಸಾರಾಂಶ

ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ೭ನೇ ವೇತನ ಆಯೋಗ ಜಾರಿಯಾಗಿ ವರದಿ ನೀಡಿ ೪ ತಿಂಗಳು ಗತಿಸಿವೆ

ಗಜೇಂದ್ರಗಡ: ಸರ್ಕಾರದ ಕಾರ್ಯಕ್ರಮಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಮೀನಮೇಷ ಮಾಡುತ್ತಿರುವ ಸರ್ಕಾರದ ನಡೆ ಖಂಡನಾರ್ಹ ಎಂದು ಕರ್ನಾಟಕ ಸರ್ಕಾರಿ ನೌಕರರ ತಾಲೂಕು ಸಂಘದ ತಾಲೂಕಾಧ್ಯಕ್ಷ ಡಾ.ಎಂ.ಎ. ಹಾದಿಮನಿ ಹೇಳಿದರು.

ಕರ್ನಾಟಕ ಸರ್ಕಾರಿ ನೌಕರರ ತಾಲೂಕು ಸಂಘದಿಂದ ೭ನೇ ವೇತನ ಆಯೋಗ ಜಾರಿ, ಎನ್‌ಪಿಸಿ ಹೋಗಲಾಡಿ ಒಪಿಎಸ್ ಜಾರಿ ಹಾಗೂ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ಆಗ್ರಹಿಸಿ ಗುರುವಾರ ಪಟ್ಟಣದ ತಹಸೀಲ್ದಾರ್‌ಗೆ ಮನವಿ ನೀಡಿ ಮಾತನಾಡಿದರು.

ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ೭ನೇ ವೇತನ ಆಯೋಗ ಜಾರಿಯಾಗಿ ವರದಿ ನೀಡಿ ೪ ತಿಂಗಳು ಗತಿಸಿವೆ. ಈ ಹಿಂದೆ ನೌಕರರ ಸಂಘವು ಸರ್ಕಾರಕ್ಕೆ ಮನವಿ ಮಾಡಿದಾಗ ನೀತಿ ಸಂಹಿತೆ ಮುಗಿಯಲಿ ಎಂದಿತ್ತು. ಆದರೆ ಸರ್ಕಾರವು ೭ನೇ ವೇತನ ಪರಿಷ್ಕರಣೆಗೆ ವಿಳಂಬವಾಗುತ್ತಿರುವ ಪರಿಣಾಮ ನೌಕರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರ ಹಾಗೂ ಸಂಘಟನೆಯ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ ಎಂದ ಅವರು, ರಾಜ್ಯ ಸರ್ಕಾರ ಜಾರಿಗೆ ತರುವ ಜನಪರ ಕಾರ್ಯಕ್ರಮ ಯಶಸ್ವಿಯಾಗಿ ಜಾರಿಗೆ ತರಲು ಹಾಗೂ ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸರ್ಕಾರಿ ನೌಕರರು ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಜ್ಯದ ವಿವಿಧ ಹುದ್ದೆಗಳಲ್ಲಿ ಖಾಲಿಯಿರುವ ೨.೬೦ ಲಕ್ಷ ನೌಕರರ ಕೆಲಸ ಕಾರ್ಯವನ್ನು ಹಾಲಿ ನೌಕರರು ಕೆಲಸ ನಿರ್ವಹಿಸುತ್ತಿರುವುದರಿಂದ ಸರ್ಕಾರಕ್ಕೆ ಅಂದಾಜು ₹೮೫೦೦ ಕೋಟಿ ಉಳಿತಾಯವಾಗಲಿದೆ. ಪ್ರತಿದಿನ ಒತ್ತಡದಲ್ಲಿ ಕೆಲಸ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತರಬೇಕು ಎಂದರು.

ಸರ್ಕಾರ ಗಟ್ಟಿಮುಟ್ಟಿದ್ದಾಗ ನೌಕರರನ್ನು ದುಡಿಸಿಕೊಳ್ಳುತ್ತಿದೆ. ಮುಪ್ಪಿನ ಕಾಲದಲ್ಲಿ ಕೈಬಿಡುವ ಯೋಜನೆ ಸರ್ಕಾರದ್ದಾಗಿದೆ. ಹೀಗಾಗಿ ಮುಪ್ಪಿನ ವಯಸ್ಸಿನಲ್ಲಿ ನೌಕರರು ತುತ್ತು ಅನ್ನಕ್ಕಾಗಿ ಪರದಾಡು ಸ್ಥಿತಿ ಬರಬಾರದು ಎನ್ನುವ ಆಶಯ ಸರ್ಕಾರದ್ದಾಗಿದ್ದರೆ ತಕ್ಷಣವೇ ಸರ್ಕಾರ ಎನ್‌ಪಿಎಸ್ ಹೋಗಲಾಡಿಸಿ ಒಪಿಎಸ್ ಜಾರಿಗೆ ಮಾಡಲು ಮುಂದಾಗಬೇಕು.ಇಲ್ಲದಿದ್ದರೆ ನಮ್ಮ ನ್ಯಾಯ ಸಮ್ಮತ ಬೇಡಿಕೆ ಈಡೇರಿಕೆಗೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.

ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ವಿ.ಎ. ಹಾದಿಮನಿ, ಎನ್‌ಪಿಎಸ್ ನೌಕರರ ಅಧ್ಯಕ್ಷ ಶರಣು ಪೂಜಾರ, ಪ್ರೌಢಶಾಲಾ ಶಿಕ್ಷಕರ ಅಧ್ಯಕ್ಷ ನಜೀರಹ್ಮದ, ವಿಕಲಚೇತನರ ನೌಕರರ ಅಧ್ಯಕ್ಷ ಎಸ್.ವಿ. ಕಂಬಳಿ, ಬಿ.ಸಿ. ಅಂಗಡಿ, ಕೆ.ಎ. ಬೂದಿಹಾಳ, ಉಮೇಶ ಅರಳಿಗಿಡದ, ಎ.ಕೆ. ಒಂಟಿ, ಅಶೋಕ ಕಲ್ಲಿಗನೂರ, ಎಸ್.ಬಿ. ಜೂಲಗುಡ್ಡ, ಪಿ.ಎಸ್. ಹಿರೇಮಠ ಸೇರಿದಂತೆ ವಿವಿಧ ವೃಂದ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.