ಸಿಎಂ ಡಿ.ಕೆ ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರ ವಚನ ಭ್ರಷ್ಟವಾಗಿದೆ. ಜನಪ್ರತಿನಿಧಿಗಳು ರೈತರು ಹಾಗೂ ರಾಜ್ಯದ ಜನರನ್ನು ಕಾಪಾಡುವಲ್ಲಿ ವಿಫಲವಾಗಿದೆ. ಹಾಗಾಗಿ ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ಅವರಿಗೆ ಎಣ್ಣು, ಜೀರಿಗೆ ಬಿಡುವ ಮೂಲಕ ತಿಲಾಂಜಲಿ ಹೇಳುತ್ತಿದ್ದೇವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ರಾಜ್ಯ ಸರ್ಕಾರ, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಹಾಗೂ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ (ಸಿಡಬ್ಲ್ಯುಆರ್‌ಎ) ವಿರುದ್ಧ ಮಂಡ್ಯ ರಕ್ಷಣಾ ವೇದಿಕೆಯಿಂದ ಕಾರ್ಯಕರ್ತರು ನದಿಗೆ ಎಳ್ಳು, ಜೀರಿಗೆ ಬಿಡುವ ಮೂಲಕ ಪ್ರತಿಭಟನೆ ವಿನೂತನ ನಡೆಸಿದರು.

ಪಟ್ಟಣದ ಸ್ನಾನಘಟ್ಟದ ಕಾವೇರಿ ನದಿ ತಡದಲ್ಲಿ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿ.ಶಂಕರ್ ಬಾಬು ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ನದಿಗಿಳಿದು, ರಾಜ್ಯ ಸರ್ಕಾರ, ಎರಡೂ ಮಂಡಳಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.

ನಂತರ ನದಿ ದಡದಲ್ಲಿ ಎಳ್ಳು, ಜೀರಿಗೆ, ಹರಿಶಿಣ, ಕುಂಕುಮ, ಹೂ ಗಳಿಂದ ಪೂಜೆ ಮಾಡಿ ನದಿಗೆ ಹರಿ ಬಿಡುವ ಮೂಲಕ ಸರ್ಕಾರ, ಸಮಿತಿ ಮತ್ತು ಪ್ರಾಧಿಕಾರ ನಮ್ಮ ಪಾಲಿಗೆ ಸತ್ತಿವೆ ಎಂದು ಆಕ್ರೋಶ ಹೊರ ಹಾಕಿದರು.

ಸರ್ಕಾರ ಸಹ ಸಮಿತಿಗಳು ಮಾಡಿರುವ ಆದೇಶ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ರಾಜ್ಯದ ಜನರು ಹಾಗೂ ರೈತರಿಗೆ ಮೋಸ ಆಗಲು ಬಿಡುವುದಿಲ್ಲ ಎಂದು ಹೇಳಿತ್ತು. ಆದರೆ, ಸರ್ಕಾರ ಹೇಳಿದಂತೆ ನಡೆದುಕೊಳ್ಳದೆ ಕದ್ದು ಮುಚ್ಚಿ ದಿನೇ ದಿನ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವ ಮೂಲಕ ತಮಿಳುನಾಡಿಗೆ ಹರಿಸಬೇಕಿದ್ದ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದೆ ಎಂದು ಅಸಮಧಾನ ಹೊರಹಾಕಿದರು.

ಡಿ.ಕೆ ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರ ವಚನ ಭ್ರಷ್ಟವಾಗಿದೆ. ಜನಪ್ರತಿನಿಧಿಗಳು ರೈತರು ಹಾಗೂ ರಾಜ್ಯದ ಜನರನ್ನು ಕಾಪಾಡುವಲ್ಲಿ ವಿಫಲವಾಗಿದೆ. ಹಾಗಾಗಿ ಮಂಡ್ಯ ರಕ್ಷಣಾ ವೇದಿಕೆ ವತಿಯಿಂದ ಅವರಿಗೆ ಎಣ್ಣು, ಜೀರಿಗೆ ಬಿಡುವ ಮೂಲಕ ತಿಲಾಂಜಲಿ ಹೇಳುತ್ತಿದ್ದೇವೆ ಎಂದು ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಂಘಟಕಾ ಕಾರ್ಯದರ್ಶಿ ಎಚ್.ಜಗದೀಶ್‌ಗೌಡ, ಮಹೇಂದ್ರ, ಅಜಯ್, ಪ್ರವೀಣ್, ಧನುಷ್, ಮನೋಜ್ ಸೇರಿದಂತೆ ಇತರರು ಇದ್ದರು.